'ಉಪ ಚುನಾವಣೆಯಲ್ಲಿ ಸೋಲು: ಅನರ್ಹ ಶಾಸಕರಿಗೂ ಇದೇ ಗತಿ'
ಬೆಂಗಳೂರು, ಅಕ್ಟೋಬರ್ 24: ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗಳ ಜತೆಗೆ ವಿವಿಧ ರಾಜ್ಯಗಳಲ್ಲಿ 53 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಕೂಡ ಹೊರಬಂದಿದೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಆಡಳಿತಾರೂಢ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಉಪ ಚುನಾವಣೆಗಳಲ್ಲಿ ಕೂಡ ಬಿಜೆಪಿಗೆ ಆಘಾತ ಉಂಟಾಗಿದೆ. ಅದರ ಜತೆಯಲ್ಲಿ ಲೋಕಸಭೆ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ಗೆ ಚೇತರಿಕೆಯ ಫಲಿತಾಂಶ ದೊರೆತಿದೆ.
ಈ ಫಲಿತಾಂಶವನ್ನು ರಾಜ್ಯ ಕಾಂಗ್ರೆಸ್ ಬಿಜೆಪಿಗೆ ಜನರು ಕಲಿಸಿದ ತಕ್ಕ ಪಾಠ ಎಂದಿದೆ. ಅಲ್ಲದೆ ಸಮ್ಮಿಶ್ರ ಸರ್ಕಾರ ಬೀಳಲು ಕಾರಣರಾದ ಅನರ್ಹ ಶಾಸಕರಿಗೂ ಇದು ಎಚ್ಚರಿಕೆಯ ಗಂಟೆ ಎಂದು ಹೇಳಿದೆ. ಕಾರಣ ಪಕ್ಷ ತ್ಯಜಿಸಿ ಬಿಜೆಪಿ ಸೇರಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ಬಹುತೇಕ ಸ್ಪರ್ಧಿಗಳು ಸೋಲು ಅನುಭವಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ನಲ್ಲಿ ಬಂಡಾಯವೆದ್ದು, ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅನರ್ಹ ಶಾಸಕರ ಗತಿಯೂ ಇದೇ ಆಗಲಿದೆ ಎಂಬ ಎಚ್ಚರಿಕೆ ನೀಡಿದೆ.
2 ರಾಜ್ಯದ ಚುನಾವಣಾ ಫಲಿತಾಂಶ; ಸಿದ್ದರಾಮಯ್ಯ ವಿಶ್ಲೇಷಣೆ
ಪಕ್ಷಾಂತರ ಮಾಡಿ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳಿಗಿಂತ ಸೋತ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚು. ಪ್ರಸ್ತುತ ಚುನಾವಣೆಯಲ್ಲಿ ಕೂಡ ಅದು ಸಾಬೀತಾಗಿದೆ. ಇದು ರಾಜ್ಯದಲ್ಲಿ ಡಿಸೆಂಬರ್ನಲ್ಲಿ ನಡೆಯಲಿರುವ 15 ಅನರ್ಹ ಶಾಸಕರ ಕ್ಷೇತ್ರಗಳಲ್ಲಿನ ಚುನಾವಣೆಯಲ್ಲಿ ಕೂಡ ಪುನರಾವರ್ತನೆಯಾಗಲಿದೆ ಎನ್ನುವುದು ಕಾಂಗ್ರೆಸ್ ಅಭಿಮತ.
ದ್ರೋಹ ಬಗೆದವರಿಗೆ ತಕ್ಕ ಶಿಕ್ಷೆ
ಈ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಸೋಲಿಸುವ ಮೂಲಕ ಜನತೆ ಸಂದೇಶ ನೀಡಿದ್ದಾರೆ. ಇದೇ ಫಲಿತಾಂಶ ರಾಜ್ಯದಲ್ಲೂ ಮರುಕಳಿಸಲಿದೆ. ಆಪರೇಷನ್ ಕಮಲ ಹೆಸರಲ್ಲಿ ಬಿಜೆಪಿ ಮಾಡಿದ ಕುದುರೆ ವ್ಯಾಪಾರದ ಭ್ರಷ್ಟ ರಾಜಕೀಯ ಧಂದೆಗೆ ಹಿನ್ನೆಡೆ ಆಗಲಿದೆ. ಪಕ್ಷಾಂತರದಿಂದ ಮತದಾರರು, ಕಾರ್ಯಕರ್ತರು, ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕ ಶಿಕ್ಷೆ ದೊರೆಯಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಪಕ್ಷಾಂತರಿಗಳನ್ನು ತಿರಸ್ಕರಿಸಿದ್ದಾರೆ
ಈ ಬಾರಿಯ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಜನ ತಿರಸ್ಕರಿಸಿದ್ದಾರೆ, ಗುಜರಾತ್ ಉಪಚುನಾವಣೆಯಲ್ಲಿ ಸಹ ಪಕ್ಷಾಂತರಿಗಳು ಸೋತಿದ್ದಾರೆ. ಕರ್ನಾಟಕದಲ್ಲಿ ಕೂಡಾ ಹದಿನೈದು ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳು ಕಾಂಗ್ರೆಸ್ ಪಾಲಾಗಿ, ಯಡಿಯೂರಪ್ಪನವರು ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರ, ಹರ್ಯಾಣ ಫಲಿತಾಂಶ 2019: ಗೆದ್ದವರು, ಸೋತವರು
ಅತೃಪ್ತ ಶಾಸಕರಿಗೂ ಇದೇ ಸ್ಥಿತಿ
ಅಲ್ಪೇಶ್ ಠಾಕೂರ್ ಆಗಿರಬಹುದು ಅಥವಾ ಉದಯನ್ ರಾಜೆ ಭೋಸ್ಲೆ ಆಗಿರಬಹುದು. ಬಿಜೆಪಿಗೆ ಸೇರುವ ಮೂಲಕ ಮತದಾರರು ಮತ್ತು ಅವರ ಪಕ್ಷಕ್ಕೆ ಮೋಸ ಮಾಡಿದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಕರ್ನಾಟಕದ 'ಅತೃಪ್ತ' ಶಾಸಕರು ಕೂಡ ಶೀಘ್ರದಲ್ಲಿಯೇ ಇದೇ ರೀತಿಯ ಹಣೆಬರಹ ಅನುಭವಿಸಲಿದ್ದಾರೆ. ನಾವು ಎಲ್ಲ 17 ಕ್ಷೇತ್ರಗಳಲ್ಲಿಯೂ ಗೆದ್ದು ಬಿಜೆಪಿಯ ಈ 'ಕೋಮಾ' ಸರ್ಕಾರವನ್ನು ಹೊರಹಾಕಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಜ್ಯದಲ್ಲಿಯೂ ಎದುರು ನೋಡುತ್ತಿದ್ದೇವೆ
17 ಅತೃಪ್ತ ಶಾಸಕರ ರಾಜಕೀಯ ವೃತ್ತಿ ಬದುಕು ಶೀಘ್ರದಲ್ಲಿಯೇ ಅಂತ್ಯವಾಗಲಿದೆ. ಬೆನ್ನಿಗಿರುವವರನ್ನು ಮತದಾರರು ದೇಶದಾದ್ಯಂತ ತಿರಸ್ಕರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕೂಡ ಅದನ್ನೇ ಮಾಡಲಿದ್ದಾರೆ.
ಗುಜರಾತ್ನ ಬಯಾದ್ ಕ್ಷೇತ್ರದಲ್ಲಿ ಮತದಾರರಿಗೆ ವಂಚಿಸಿದವರಿಗೆ ಸರಿಯಾದ ಕಪಾಳಮೋಕ್ಷವಾಗಿದೆ. ಜನಾಶೀರ್ವಾದ ಪಡೆದ ಸರ್ಕಾರವನ್ನು ಉರುಳಿಸುವ ಮತ್ತು ನಾಯಕರ ಅವಕಾಶವಾದಿ ರಾಜಕೀಯದಿಂದ ಜನರು ಬೇಸೆತ್ತಿದ್ದಾರೆ. ಇದು ಅತ್ಯಂತ ಕಠಿಣ ಉತ್ತರ. ಇದನ್ನೇ ರಾಜ್ಯದಲ್ಲಿಯೂ ಎದುರು ನೋಡುತ್ತಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
ಹರ್ಯಾಣದ ಮುಂದಿನ ಸಿಎಂ ಆಗಿ ದುಷ್ಯಂತ್ ಆಯ್ಕೆ: ಕಾಂಗ್ರೆಸ್ಸಿನ ಘೋಷಣೆ
ಅಲ್ಪೇಶ್ ಠಾಕೂರ್ಗೆ ಸೋಲು
ಅಲ್ಪೇಶ್ ಠಾಕೂರ್ ಸೇರಿದಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡ ಮೂವರು ಪ್ರಮುಖ ನಾಯಕರು ಉಪ ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದಾರೆ. ಹಿಂದುಳಿದ ಸಮುದಾಯದ ಪರ ಹೋರಾಟದಿಂದ ಗುರುತಿಸಿಕೊಂಡಿದ್ದ ಅಲ್ಪೇಶ್ ಠಾಕೂರ್ 2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಆದರೆ ಬಳಿಕ ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.
ಉದಯನ್ ರಾಚೆ ಭೋಸ್ಲೆಗೆ ಆಘಾತ
ಮಹಾರಾಷ್ಟ್ರದ ಸತಾರ ಜಿಲ್ಲೆಯಿಂದ ಎನ್ಸಿಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದ ಉದಯನ್ ರಾಚೆ ಭೋಸ್ಲೆ, ಬಳಿಕ ಬಿಜೆಪಿಗೆ ಸೇರಿಕೊಂಡಿದ್ದರು. ಸತಾರ ಲೋಕಸಭೆ ಉಪ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದಾರೆ. ಶಿವಾಜಿ ವಂಶಸ್ಥರಾಗಿರುವ ಭೋಸ್ಲೆ, ಎನ್ಸಿಪಿ ಅಭ್ಯರ್ಥಿ ಎದುರು 80 ಸಾವಿರ ಮತಗಳಿಂದ ಸೋತಿದ್ದಾರೆ.
ಪಕ್ಷಾಂತರ ಮಾಡಿದ್ದ ಟಿಕ್ ಟಾಕ್ ಸ್ಟಾರ್
ಟಿಕ್ ಟಾಕ್ ಮೂಲಕ ಸುದ್ದಿಯಾಗಿದ್ದ ಹರಿಯಾಣದ ಸೊನಾಲಿ ಪೋಗಟ್ ಆರು ತಿಂಗಳ ಹಿಂದೆ ಸ್ಥಳೀಯ ಜನನಾಯಕ ಜನತಾ ಪಕ್ಷಕ್ಕೆ ಸೇರಿಕೊಂಡಿದ್ದರು. ಚುನಾವಣೆ ಘೋಷನೆಯಾಗುತ್ತಿದ್ದಂತೆಯೇ ಬಿಜೆಪಿಗೆ ಸೇರ್ಪಡೆಯಾಗಿ ಆದಮ್ಪುರ ಕ್ಷೇತ್ರದಿಂದ ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದರು.