ಚುನಾವಣಾ ಅಕ್ರಮ ಪ್ರಕರಣ: ಯುಪಿ ಮಾಜಿ ಸಿಎಂ ಮಾಯಾವತಿಗೆ ಬಿಗ್ ರಿಲೀಫ್
ಬೆಂಗಳೂರು, ಫೆಬ್ರವರಿ 25: ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರ ವಿರುದ್ಧ ಕರ್ನಾಟಕದಲ್ಲಿನ 12 ವರ್ಷ ಹಿಂದಿನ ಚುನಾವಣಾ ಅಕ್ರಮ ಆರೋಪ ಕೇಳಿ ಬಂದಿತ್ತು. ಪ್ರಕರಣ ದಾಖಲಾಗಿ ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ಮಾಯಾವತಿ, ಸತೀಶ್ ಚಂದ್ರ ಮಿಶ್ರಾಗೆ ಹೈಕೋರ್ಟ್ನಿಂದ ದೊಡ್ಡ ರಿಲೀಫ್ ಸಿಕ್ಕಿದೆ.
ಕುಮಾರಿ ಮಾಯಾವತಿ ಮತ್ತು ಸತೀಶ್ ಚಂದ್ರ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಅವರಿಬ್ಬರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಆದೇಶಿಸಿದೆ.
ಇದರಿಂದಾಗಿ ಮಾಯಾವತಿ ನಿರಾಳರಾಗುವಂತಾಗಿದೆ. ಏಕೆಂದರೆ ಈ ಪ್ರಕರಣದಿಂದಾಗಿ ಅವರು ಬೆಂಗಳೂರಿನಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸಬೇಕಿತ್ತು.
ನ್ಯಾಯಾಲಯದ ಆದೇಶವೇನು?: ನಗದು ಪತ್ತೆ ವಿಚಾರ ಸಂಬಂಧ ಅರ್ಜಿದಾರರು ನೀಡಿದ ವಿವರಣೆಯನ್ನು ಕೇಂದ್ರ ಚುನಾವಣಾ ಆಯೋಗ ಒಪ್ಪಿದೆ. ಹಾಗಾಗಿ ನ್ಯಾಯದ ದೃಷ್ಟಿಯಿಂದ ಪ್ರಕರಣ ಮುಂದುವರಿಸುವುದು ಸೂಕ್ತವಲ್ಲ, ಹಾಗಾಗಿ ಬೆಗಳೂರಿನ 48ನೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಮತ್ತು ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.
ಮಾಯಾವತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸತೀಶ್ಚಂದ್ರ
ಅರ್ಜಿದಾರರ ಪರ ವಕೀಲರು, ಆರೋಪದ ಬಗ್ಗೆ ಸಿಆರ್ ಪಿಸಿ ಸೆಕ್ಷನ್ 195 (1)(ಎ)(1) ಲಿಖಿತ ದೂರು ನೀಡಿಲ್ಲ. ಜೊತೆಗೆ ಚುನಾವಣಾ ಆಯೋಗ ಅರ್ಜಿದಾರರ ಹೇಳಿಕೆಯನ್ನು ಒಪ್ಪಿದೆ ಮತ್ತು ಯಾವುದೇ ನಗದು ಪತ್ತೆಯಾಗಿಲ್ಲ ಎಂದು ಹೇಳಿದೆ. ಆದರೂ ಸಹ ಕ್ರಿಮಿನಲ್ ಪ್ರಕರಣ ಮುಂದುವರಿಸುತ್ತಿರುವುದು ಸರಿಯಲ್ಲ, ಅದನ್ನು ರದ್ದುಗೊಳಿಸಬೇಕು ಎಂದು ನ್ಯಾಯಪೀಠವನ್ನು ಕೋರಿದ್ದರು.
ಪ್ರಕರಣದ ಹಿನ್ನೆಲೆ:
Recommended Video
2013ರ ಏ.30ರಂದು ಮಾಯಾವತಿ ಕಲಬುರಗಿಯ ಜೇವರ್ಗಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು. ಆಗ ಚುನಾವಣಾ ವೀಕ್ಷಕರ ತಂಡ ಪರಿಶೀಲನೆ ನಡೆಸಿದಾಗ 1,50,000 ರೂ. ನಗದು ಪತ್ತೆಯಾಗಿತ್ತು. ಆಗ ಮಾಯಾವತಿ ತಮ್ಮ ಹಣ 50,000 ರೂ. ಉಳಿದ 1,00,000 ರೂ. ಪಕ್ಷದ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು. ಅದನ್ನು ಆಯೋಗ ಒಪ್ಪಿತ್ತು. ಆದರೂ ಅವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮುಂದುವರಿಸಲಾಗಿತ್ತು. ಅದನ್ನು ಪ್ರಶ್ನಿಸಿ ಮಾಯಾವತಿ ಹೈಕೋರ್ಟ್ ಮೊರೆ ಹೋಗಿದ್ದರು.