ಅತ್ತಿಗೆ ಪರ ಪ್ರಚಾರ: ಪುನೀತ್ ಜಾಹೀರಾತಿಗೆ ಬ್ರೇಕ್?
ಬೆಂಗಳೂರು, ಮಾ 20: ಶಿವಮೊಗ್ಗದಲ್ಲಿ ಅತ್ತಿಗೆ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಾತ್ರಿಯಾಗಿರುವುದರಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಯಭಾರಿಯಾಗಿರುವ ಜಾಹೀರಾತುಗಳಿಗೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ.
ನಾನು ಯಾವುದೇ ಪಕ್ಷದ ಪರವಾಗಿಲ್ಲ. ನಾನು ನನ್ನ ಅತ್ತಿಗೆಯ ಪರವಾಗಿ ಪ್ರಚಾರ ಮಾಡುತ್ತೇನೆಂದು ಪುನೀತ್ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ, ಹಾಗಾಗಿ ಪುನೀತ್ ಜಾಹೀರಾತಿನ ಹೋರ್ಡಿಂಗುಗಳ ಮೇಲೆ ಚುನಾವಣಾ ಆಯೋಗದ ಕಣ್ಣು ಬಿದ್ದಿವೆ.
ಪ್ರಮುಖವಾಗಿ, ನಂದಿನಿ ಹಾಲಿನ ಉತ್ಪನ್ನಗಳ ಜಾಹೀರಾತಿನಲ್ಲಿ ಪುನೀತ್ ಕಾಣಿಸಿಕೊಂಡಿರುವುದರಿಂದ, ನೀತಿಸಂಹಿತೆ ಉಲ್ಲಂಘನೆಯ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಅವರ ಹೋರ್ಡಿಂಗ್ಸ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಚುನಾವಣಾಧಿಕಾರಿ ಸಮೀರ್ ಶುಕ್ಲ ಹೇಳಿದ್ದಾರೆ. (ಗೀತಾ ಶಿವರಾಜ್ ಕುಮಾರ್ ಸಂದರ್ಶನ)
'ತಾಯಿಯ ಹಾಲು ಕೆಲ ದಿನ, ನಂದಿನಿ ಹಾಲು ಅನುದಿನ' ಎನ್ನುವ ಶೀರ್ಷಿಕೆಯಡಿ ನಂದಿನಿ ಹೈನು ಉತ್ಪನ್ನಗಳ ಜಾಹೀರಾತಿನಲ್ಲಿ ಪುನೀತ್ ಜೊತೆ ರಾಗಿಣಿ ದ್ವಿವೇದಿಯ ಚಿತ್ರವೂ ಇದೆ. ಈ ಹೋರ್ಡಿಂಗುಗಳು ರಾಜ್ಯದೆಲ್ಲಡೆ ಬಹಳಷ್ಟು ಜಾಗದಲ್ಲಿ ಇರುವುದರಿಂದ ಚುನಾವಣಾ ಆಯೋಗ ಹೋರ್ಡಿಂಗ್ ತೆರವುಗೊಳಿಸುವ ಚಿಂತನೆ ನಡೆಸುತ್ತಿದೆ.
ಸಂಭಾವನೆ ಇಲ್ಲದೆ ನಂದಿನಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಪುನೀತ್, ಶಿವಮೊಗ್ಗದಲ್ಲಿ ಅತ್ತಿಗೆ ಗೀತಾ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ. ಹಾಗಂತ ನಾನು ಜೆಡಿಎಸ್ ಪರ ಎಂದಲ್ಲ, ನಾನು ಜನರಲ್ಲಿ ಅತ್ತಿಗೆಗೆ ಮತ ನೀಡಿ ಎಂದಷ್ಟೇ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಂದಿನಿ ಜಾಹೀರಾತಿನ ಜೊತೆಗೆ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನ ಜಾಹೀರಾತಿನಲ್ಲೂ ಪುನೀತ್ ಕಾಣಿಸಿಕೊಂಡಿದ್ದಾರೆ. ಈಗ ಆ ಜಾಹೀರಾತಿನ ಪ್ರಸಾರಕ್ಕೂ ಬ್ರೇಕ್ ಬೀಳುವ ಸಾಧ್ಯತೆ ಇಲ್ಲದಿಲ್ಲ. [ಬಿರುಸಿನ ಮತಯಾಚನೆ ಚಿತ್ರಗಳು]
ಗುರುವಾರ (ಮಾ 20) ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಬಂಡಾರಿ ಬಿಫಾರಂ ಇಲ್ಲದೆಯೇ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.