ಉಪ ಚುನಾವಣೆ ದಿನ ಮರುನಿಗದಿ: ಡಿ. 5ಕ್ಕೆ ಚುನಾವಣೆ
ನವದೆಹಲಿ, ಸೆಪ್ಟೆಂಬರ್ 27: ಸುಪ್ರೀಂಕೋರ್ಟ್ನ ಸೂಚನೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ಮರುನಿಗದಿ ಮಾಡಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಶಾಸಕರ ಅನರ್ಹತೆಯಿಂದ ತೆರವಾಗಿರುವ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ನೂತನ ಚುನಾವಣಾ ದಿನವನ್ನು ಶುಕ್ರವಾರ ಪ್ರಕಟಿಸಿದೆ. ಡಿ. 5ರಂದು ಮತದಾನ ನಡೆಯಲಿದ್ದು, ಡಿ 11ರ ಒಳಗೆ ಫಲಿತಾಂಶ ಪ್ರಕಟವಾಗಲಿದೆ.
15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್
ಚುನಾವಣಾ ಆಯೋಗವು ಸೆ. 2ರಂದು ನೀಡಿದ ಪ್ರಕಟಣೆಯಂತೆ ಅ. 21ರಂದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳ ಚುನಾವಣೆಯ ಜತೆಗೇ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದು, ಅ.24ರಂದು ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ, ಅನರ್ಹ ಶಾಸಕರ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಅವರ ಮನವಿ ಪರಿಗಣಿಸಿದ್ದ ಸುಪ್ರೀಂಕೋರ್ಟ್, ಚುನಾವಣೆಯನ್ನು ಮುಂದೂಡುವಂತೆ ಸೂಚನೆ ನೀಡಿತ್ತು. ಚುನಾವಣೆ ಮುಂದೂಡಲು ಆಯೋಗ ಕೂಡ ಒಲವು ವ್ಯಕ್ತಪಡಿಸಿತ್ತು. ಈಗ ಒಂದು ತಿಂಗಳ ಬಳಿಕ ಚುನಾವಣೆಯ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಗಿದೆ.
ಚುನಾವಣಾ ಪ್ರಕ್ರಿಯೆ ವಿವರ
ನವೆಂಬರ್ 11 ಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 21 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಡಿಸೆಂಬರ್ 11ರೊಳಗೆ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಉಪ ಚುನಾವಣೆಗೆ ಸುಪ್ರೀಂಕೋರ್ಟ್ ತಡೆ; ಯಾರು, ಏನು ಹೇಳಿದರು?
ಎಲ್ಲೆಲ್ಲಿ ಉಪ ಚುನಾವಣೆ ನಡೆಯಲಿದೆ?
ಕೆಆರ್ ಪುರ, ಹುಣಸೂರು, ಯಲ್ಲಾಪುರ, ಕೆಆರ್ ಪೇಟೆ, ಮಹಾಲಕ್ಷ್ಮೀ ಲೇಔಟ್, ಹೊಸಕೋಟೆ, ಶಿವಾಜಿನಗರ, ವಿಜಯನಗರ, ಯಶವಂತಪುರ, ರಾಣೆಬೆನ್ನೂರು, ಹಿರೇಕೆರೂರು, ಗೋಕಾಕ್, ಅಥಣಿ, ಕಾಗವಾಡ, ಚಿಕ್ಕಬಳ್ಳಾಪುರ.
ಈ ಹಿಂದೆ ನಿಗದಿಯಾಗಿದ್ದ ದಿನಾಂಕ
ಸೆ. 21ರಂದು ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಪ್ರಕಟಿಸಿತ್ತು. ಅಂದಿನಿಂದಲೇ ನೀತಿ ಸಂಹಿತೆ ಕೂಡ ಜಾರಿಯಾಗಿತ್ತು. ಸೆ. 23ರಿಂದ ನಾಮಪತ್ರ ಸಲ್ಲಿಕೆ ಕೂಡ ಆರಂಭವಾಗಿತ್ತು. ಸೆ. 30ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. ನಾಮಪತ್ರ ಹಿಂಪಡೆಯಲು ಅ.3 ಕೊನೆಯ ದಿನವಾಗಿತ್ತು. ಅ. 21ರಂದು ಮತದಾನಕ್ಕೆ ಮತ್ತು ಅ. 24ರಂದು ಫಲಿತಾಂಶ ಪ್ರಕಟ ಮಾಡಲು ದಿನಾಂಕ ನಿಗದಿ ಮಾಡಲಾಗಿತ್ತು.
ಚುನಾವಣೆಗೆ ಮಾಡಿದ ಸಿದ್ಧತೆಯೆಲ್ಲ ಈಗ ನೀರಲ್ಲಿ ಮಾಡಿದ ಹೋಮ
ಮರುದಿನವೇ ದಿನಾಂಕ ಪ್ರಕಟಿಸಿದ ಆಯೋಗ
ಚುನಾವಣೆ ನಿಗದಿಪಡಿಸಿದ ಬೆನ್ನಲ್ಲೇ ಚುನಾವಣಾ ಆಯೋಗವು ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿತ್ತು. ಬಳಿಕ ಸುಪ್ರೀಂಕೋರ್ಟ್ನಲ್ಲಿ ಸ್ವತಃ ಆಯೋಗವೇ ಅನರ್ಹ ಶಾಸಕರ ಸ್ಪರ್ಧೆಗೆ ತನ್ನ ಅಭ್ಯಂತರವಿಲ್ಲ ಎಂದಿತ್ತು. ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು, ಇಲ್ಲವೇ ಚುನಾವಣೆಗೆ ತಡೆ ನೀಡಬೇಕು ಎಂದು ಅನರ್ಹ ಶಾಸಕರು ವಾದಿಸಿದ್ದರು. ಬಳಿಕ ಸುಪ್ರೀಂಕೋರ್ಟ್ ಗುರುವಾರ ಚುನಾವಣೆಯನ್ನು ಮುಂದೂಡುವಂತೆ ಸೂಚನೆ ನೀಡಿ, ಅರ್ಜಿಯ ವಿಚಾರಣೆಯನ್ನು ಅ. 22ಕ್ಕೆ ಮುಂದೂಡಿತ್ತು. ಅದರ ಮರುದಿನವೇ ಆಯೋಗ ಹೊಸ ಚುನಾವಣಾ ದಿನಾಂಕ ಪ್ರಕಟಿಸಿದೆ.