ರಾಜ್ಯದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ
ನವದೆಹಲಿ, ಮಾರ್ಚ್ 16: ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ದಿನಾಂಕ ಘೋಷಿಸಲಾಗಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರ ಸೇರಿದಂತೆ ರಾಜ್ಯದ ಮೂರು ಕ್ಷೇತ್ರಗಳಿಗೆ ಚುನಾವನೆಯ ದಿನಾಂಕವನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ.
ಬೆಳಗಾವಿ ಲೋಕಸಭೆ ಕ್ಷೇತ್ರ, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರ ಮತ್ತು ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಉಪ ಚುನಾವಣೆ ನಡೆಯಲಿದೆ ಎಂದು ಅಯೋಗ ಪ್ರಕಟಿಸಿದೆ.
ಮಾರ್ಚ್ 23ರಂದು ಉಪ ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ಮಾರ್ಚ್ 30ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮಾರ್ಚ್ 31 ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 3 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಈ ಮೂರೂ ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಚುನಾವಣೆ ನಡೆಯಲಿದೆ. ಐದು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗುವ ಮೇ 2ರಂದೇ ಈ ಮೂರು ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದೆ.
ಒಟ್ಟು 16 ಕ್ಷೇತ್ರಗಳಿಗೆ ಉಪ ಚುನಾವಣೆ
ಇದರ ಜತೆಗೆ ಆಂಧ್ರಪ್ರದೇಶದ ಒಂದು ಲೋಕಸಭೆ ಕ್ಷೇತ್ರ ಹಾಗೂ ವಿವಿಧ ರಾಜ್ಯಗಳ 12 ವಿಧಾನಸಭೆ ಕ್ಷೇತ್ರಗಳಿಗೆ ಕೂಡ ಉಪ ಚುನಾವಣೆ ದಿನಾಂಕ ಪ್ರಕಟಿಸಲಾಗಿದೆ. ಒಟ್ಟು 16 ಕ್ಷೇತ್ರಗಳ ಉಪ ಚುನಾವಣೆ ಏಪ್ರಿಲ್ 17ರಂದು ನಡೆಯಲಿದೆ.
ಎಲ್ಲೆಲ್ಲಿ ಉಪ ಚುನಾವಣೆ?
ಆಂಧ್ರಪ್ರದೇಶದ ತಿರುಪತಿ ಲೋಕಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಇನ್ನು ಗುಜರಾತ್ನ ಮೊರ್ವಾ ಹದಾಫ್, ಜಾರ್ಖಂಡ್ನ ಮಾಧುಪುರ್, ಮಧ್ಯಪ್ರದೇಶದ ದಾಮೊಹ್, ಮಹಾರಾಷ್ಟ್ರದ ಪಾಂದರ್ಪುರ, ಮಿಜೋರಾಂನ ಸೆರ್ಚಿಪ್, ನಾಗಾಲ್ಯಾಂಡ್ನ ನೊಕ್ಸೆನ್, ರಾಜಸ್ಥಾನದ ಸಹಾರಾ, ಸುಜಾಂಗಡ ಮತ್ತು ರಾಜ್ಸಾಮಂಡ್, ತೆಲಂಗಾಣದ ನಾಗಾರ್ಜುನ ಸಾಗರ್, ಉತ್ತರಾಖಂಡದ ಸಾಲ್ಟ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೇ 4ರ ಒಳಗೆ ಚುನಾವನಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಸುರೇಶ್ ಅಂಗಡಿ ನಿಧನ
ರಾಜ್ಯ ರೈಲ್ವೆ ಖಾತೆ ಸಚಿವರಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು ಕಳೆದ ವರ್ಷದ ಸೆ. 23ರಂದು ಕೋವಿಡ್ ಸೋಂಕಿನಿಂದ ನಿಧನರಾಗಿದ್ದರು. ಹೀಗಾಗಿ ಅವರ ಸಾವಿನಿಂದ ತೆರವಾಗಿರುವ ಬೆಳಗಾವಿ ಕ್ಷೇತ್ರಕ್ಕೆ ಏಪ್ರಿಲ್ 17ರಂದು ಉಪ ಚುನಾವಣೆ ನಡೆಯಲಿದೆ.
ಎರಡು ವಿಧಾನಸಭೆ ಕ್ಷೇತ್ರಗಳು
ಕಾಂಗ್ರೆಸ್ನಲ್ಲಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಅವರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ದೀರ್ಘಕಾಲದಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ಬಾಕಿ ಇತ್ತು. ಬಸವಕಲ್ಯಾಣದ ಕಾಂಗ್ರೆಸ್ ಶಾಸಕ ವಿ ನಾರಾಯಣರಾವ್ ಅವರು ಕೊರೊನಾ ವೈರಸ್ ಸೋಂಕಿನಿಂದ ಸೆ. 24ರಂದು ಮೃತಪಟ್ಟಿದ್ದರು.
Recommended Video
ಸಿಂದಗಿ ಕ್ಷೇತ್ರಕ್ಕೆ ಚುನಾವಣೆ ಇಲ್ಲ
ವಿಜಯಪುರದ ಸಿಂದಗಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ಅವರು ಜನವರಿ 28ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ಅವರ ಸಾವಿನಿಂದ ತೆರವಾದ ಸ್ಥಾನಕ್ಕೆ ಕೂಡ ಇದೇ ವೇಳೆ ಉಪ ಚುನಾವಣೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಚುನಾವವಣಾ ಆಯೋಗ ಸಿಂದಗಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ದಿನಾಂಕವನ್ನು ಪ್ರಕಟಿಸಿಲ್ಲ.