ಚುನಾವಣಾ ಪ್ರಚಾರದ ಚಿತ್ರಣ ಬದಲಿಸಿದ ಕೋವಿಡ್ ಸೋಂಕು!
ಬೆಂಗಳೂರು, ಅಕ್ಟೋಬರ್ 12 : ಕೋವಿಡ್ ಭೀತಿಯ ನಡುವೆಯೇ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆಗೆ ತಯಾರಿ ನಡೆಸುತ್ತಿದ್ದು, ನವೆಂಬರ್ 3ರಂದು ಮತದಾನ ನಡೆಯಲಿದೆ.
ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಚುನಾವಣಾ ಪ್ರಚಾರದ ಚಿತ್ರಣ ಬದಲಾಗಲಿದೆ. ಮತದಾರರನ್ನು ತಲುಪಲು ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಅವಲಂಬಿಸಲಿವೆ. ಅದರಲ್ಲೂ ವಾಟ್ಸಪ್ ಪ್ರಮುಖವಾಗಿದೆ.
ಆರ್. ಆರ್. ನಗರ ಟಿಕೆಟ್ ಘೋಷಣೆ; ಕುಸುಮಾ ಫೇಸ್ ಬುಕ್ ಪೋಸ್ಟ್
ಸಂಪ್ರದಾಯಿಕ ಚುನಾವಣಾ ಪ್ರಚಾರ ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. 50-100 ಜನರ ಗುಂಪು ಕಟ್ಟಿಕೊಂಡು ಹೋದರೆ ಜನರು ಬಾಗಿಲು ಸಹ ತೆರೆಯುವುದಿಲ್ಲ. ಸಭೆ, ಸಮಾರಂಭಗಳನ್ನು ಆಯೋಜಿಸಲು ಸಹ ಹಲವಾರು ನಿಯಮಗಳಿವೆ.
ಉಪ ಚುನಾವಣೆ ಸ್ಟಾರ್ ಪ್ರಚಾರಕರ ಸಂಖ್ಯೆ ತಗ್ಗಿಸಿದ ಕೇಂದ್ರ ಆಯೋಗ
ಆದ್ದರಿಂದ, ಉಪ ಚುನಾವಣೆ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಬೂತ್ಗಳ ಮಟ್ಟದಲ್ಲಿ ವಾಟ್ಸಪ್ ಗ್ರೂಪ್ ರಚನೆ ಮಾಡಿಕೊಂಡು ಚುನಾವಣಾ ಕಾರ್ಯತಂತ್ರಗಳನ್ನು ರಚನೆ ಮಾಡಲಾಗುತ್ತಿದೆ. ಪಕ್ಷದ ನಾಯಕರ ಸಂದೇಶಗಳನ್ನು ತಲುಪಿಸಲಾಗುತ್ತಿದೆ.
ಅಮೆರಿಕ ಚುನಾವಣೆ: 276 ನಕಲಿ ಖಾತೆಗಳನ್ನು ರದ್ದುಗೊಳಿಸಿದ ಫೇಸ್ಬುಕ್
ರಾಜಕೀಯ ಪಕ್ಷಗಳಿಗೆ ಕೋವಿಡ್ ಸಂದರ್ಭದಲ್ಲಿ ಚುನಾವಣೆ ಎದುರಿಸುವುದು ಸವಾಲಾಗಿದೆ. ಎರಡು ದಿನಗಳ ಕಾಲ ಪ್ರಚಾರ ಕೈಗೊಂಡ ನಾಯಕರಿಗೆ ಕೋವಿಡ್ ಸೋಂಕು ತಗುಲಿದರೆ ಪುನಃ 14 ದಿನ ಅವರ ಪ್ರಚಾರಕ್ಕೆ ಬರುವಂತಿಲ್ಲ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಉಪಯೋಗವಾಗಲಿದೆ.
ಬಿಜೆಪಿ ಮುಂಚೂಣಿಯಲ್ಲಿ : ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಬಿಜೆಪಿ ಮುಂದಿದೆ. ವರ್ಚುವಲ್ ಸಮಾವೇಶಗಳ ಮೂಲಕ ನಾಯಕರು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೇಸ್ ಬುಕ್ ಲೈವ್ ಮೂಲಕ ಇದು ಜನರನ್ನು ತಲುಪಲಿದೆ. ಭಾಷಣ ಮುಗಿದ ಬಳಿಕ ಅದನ್ನು ಕಟ್ ಮಾಡಿ ವಾಟ್ಸಪ್ಗಳಲ್ಲಿ ವಿಡಿಯೋಗಳನ್ನು ಕಳಿಸಬಹುದಾಗಿದೆ.
ಶಿರಾದಲ್ಲಿ ಈಗಾಗಲೇ ಬಿಜೆಪಿ ಬೂತ್ ಮಟ್ಟದ ವಾಟ್ಸಪ್ ಗ್ರೂಪ್ಗಳನ್ನು ರಚನೆ ಮಾಡಿದೆ. ಪಕ್ಷದ ನಾಯಕರ ಸಂದೇಶಗಳನ್ನು ಅಲ್ಲಿಗೆ ಹಾಕಲಾಗುತ್ತಿದೆ. ಅದನ್ನು ಮತದಾರರರಿಗೆ ನೇರವಾಗಿ ಅಥವ ವಿವಿಧ ಗ್ರೂಪ್ಗಳ ಮೂಲಕ ತಲುಪಿಸಲಾಗುತ್ತಿದೆ.
"ನಮ್ಮ ವಾಟ್ಸಪ್ ಗ್ರೂಪ್ಗಳಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತ್ರ ಮಾತನಾಡಬೇಕು. ಬೇರೆ ಪಕ್ಷಗಳನ್ನು ದೂರುವಂತಹ ಪೋಸ್ಟ್ ಹಾಕಬಾರದು ಎಂದು ಸೂಚನೆ ನೀಡಲಾಗಿದೆ" ಎಂದು ಜೆಡಿಎಸ್ ಸಾಮಾಜಿಕ ಜಾಲತಾಣಗಳ ಸಂಚಾಲಕ ನವೀನ್ ಸಿ. ಗೌಡ ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಘಟಕವನ್ನು ಬದಲಾವಣೆ ಮಾಡಿದ್ದರು. ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಅವರು ಝೂಮ್ ಮೀಟಿಂಗ್ಗಳನ್ನು ನಡೆಸುತ್ತಿದ್ದಾರೆ.
Recommended Video