ಜಲಸಮಾಧಿಯಾಗಬೇಕಿದ್ದ ಭೂಪರು ಬಚಾವಾದರು!
ಬೆಂಗಳೂರು, ಅ.16: ಮೊನ್ನೆಯಷ್ಟೇ ವಿಜಯದಶಮಿಯಂದು ಮಾಗಡಿ ವ್ಯಾಪ್ತಿಯ ಮಂಚನಬೆಲೆ ಅಣೆಕಟ್ಟೆಯ ಹಿನ್ನೀರಿನಲ್ಲಿ ದುಸ್ಸಾಹಸ ಮಾಡಲು ಹೊರಟ ನಾಲ್ವರು ಯುವಕರು ಜಲಸಮಾಧಿಯಾಗಿದ್ದನ್ನು ಕೇಳಿದ್ದೀರಿ.
ಅದೇ ಸಮಯದಲ್ಲೇ ದೂರದ ಗೋವಾ ಉತ್ತರ ಕರಾವಳಿಯಲ್ಲಿ ಬೆಂಗಳೂರಿನದೇ 8 ಯುವಕರು ಇಂತಹುದೇ ದುಸ್ಸಾಹಸ ಮಾಡಲು ಹೋಗಿ, ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ. no swimming zone ಎಂದು ಬೋರ್ಡ್ ಇದ್ದರೂ, ಸ್ಥಳದಲ್ಲೇ ಹಾಜರಿದ್ದ ತಟ ರಕ್ಷಕ ತಂಡದವರು ನೀರಿಗಿಳಿಯಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಭಂಡ ಧೈರ್ಯದ ಯುವ ಪ್ರವಾಸಿಗರು ನೀರೊಳಕ್ಕೆ ಇಳಿದೇ ಬಿಟ್ಟಿದ್ದಾರೆ.
ಸ್ವಲ್ಪ ದೂರ ಸಾಗುತ್ತಿದ್ದಂತೆ ಅಪಾಯದ ಅರಿವಾಗಿದೆ. ಆಗ ಸಹಾಯಕ್ಕಾಗಿ ಬಾಯಿಬಡಿದುಕೊಂಡಿದ್ದಾರೆ. ತಕ್ಷಣವೇ ದಡದಲ್ಲಿದ್ದ ಅದೇ ರಕ್ಷಕ ಪಡೆ Drishti Special Response Services (DSRS) ನೀರೊಳಕ್ಕೆ ಧುಮುಕಿ ಅಷ್ಟೂ ಯುವಕರನ್ನು ಸುರಕ್ಷಿತವಾಗಿ ದಡಕ್ಕೆ ತಂದು ಬಿಸಾಕಿ ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಇಲ್ಲಿ ವಿಷಯ ಇದಲ್ಲ.
ಸಣ್ಣಪುಟ್ಟ ಕಾನೂನು ಉಲ್ಲಂಘನೆಗೂ ದಂಡ ತೆರಬೇಕಾಗಿರುವ ಇಂದಿನ ದಿನಗಳಲ್ಲಿ ಹೀಗೆ no swimming zone ಎಂದು ಬೋರ್ಡ್ ನೆಟ್ಟಿ, ನೀರಿಗಿಳೀ ಬೇಡ್ರಪ್ಪಾ ಎಂದು ಉಪದೇಶ ಕೊಟ್ಟರೂ ಯೌವನದ ಮಸ್ತಿಯಲ್ಲಿ ಸಾವಿನ ಸುಳಿಯತ್ತ ಸಾಗುತ್ತಾರಲ್ಲಾ ಅವರಿಗೇನು ಹೇಳೋಣ? ಅವರ ವಿರುದ್ಧ ಯಾಕೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಿಲ್ಲ.
ಅವರಿಗೆ ಸರಿಯಾದ ದಂಡ ವಿಧಿಸಿ, ಬೇರೆಯವರೂ ಅಂತಹ ದುಸ್ಸಾಹಸ ಮಾಡದಂತೆ ಮಾದರಿ ದಂಡ ವಿಧಿಸಬಹುದಲ್ವೇ? ಅಷ್ಟಕ್ಕೂ ಭಾರತೀಯ ದಂಡ ಸಂಹಿತೆ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳುವುದು ದಂಡನಾರ್ಹ ಅಪರಾಧವಾಗಿದೆ. ಆ ಕಾನೂನನ್ನೂ ಇಂತಹ ವೀರರ ವಿರುದ್ಧ ಅನ್ವಯಗೊಳಿಸಬಹುದಲ್ವೇ?
ಕಳೆದ ವಾರ, ಅತ್ಯಂತ ಅಪಾಯಕಾರಿ ವಯನಾಡಿನ ಮೀನ್ಮುಟ್ಟಿ ಜಲಪಾತ ಬಳಿ ಕಲ್ಲರ ಹೊಳೆಯಲ್ಲಿ ಟೆಕ್ಕಿಗಳಿಬ್ಬರು ಹೀಗೇ ದುಸ್ಸಾಹಸಕ್ಕಿಳಿದು ನೀರು ಪಾಲಾಗಿದ್ದರು. ಮೊನ್ನೆ ಪಕ್ಕದ ಮಂಚನಬೆಲೆ ಅಣೆಕಟ್ಟೆಯಲ್ಲೂ ಇದೇ ದುರಂತ ಸಂಭವಿಸಿದೆ.
ಹಾಗಾಗಿ, ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಇಂತಹವರಿಗೆ ಸರಿಯಾದ ದಂಡ ವಿಧಿಸುವುದು ಜತೆಗೆ ಅದಕ್ಕೆ ವ್ಯಾಪಕ ಪ್ರಚಾರ ನೀಡಿದರೆ ಆಗಲಾದರೂ ಈ ಹಾವಳಿ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು ಎಂದು ಆಶಿಸೋಣ.
ಇಷ್ಟಕ್ಕೂ ಮೊನ್ನೆ ಸೋಮವಾರ Calangute beachನಲ್ಲಿ ಅಪಾಯಕ್ಕೆ ಸಿಲುಕಿದರೂ ತಟ ರಕ್ಷಕರ ಸಕಾಲಿಕ ನೆರವಿನಿಂದ ಪಾರಾಗಿಬಂದ ಭೂಪರು ಯಾರೆಂದರೆ Kiran S (26), Sunil Kumar (26), Satish BR (22), Raghu Gauda (25), Ravi Shah (28), Yatish S (28), Tamanna GR (30) ಮತ್ತು Pradeep Kumar (26).
ಪೆಣಂಬೂರು ಬೀಚಿನಲ್ಲೂ ಸೋಮವಾರ ಇಂತಹುದೇ ಅವಘಡ ಸಂಭವಿಸಿದೆ. ಪಡುಕೋಣಾಜೆಯ ಸಂಜೀವ ನಾಯಕ್ ಅವರ ಮೂವರು ಪುತ್ರಿಯರು ರೇವತಿ (25), ಸುಗಂದಾ (22) ಮತ್ತು ಪ್ರತಿಮಾ (18) ನೀರಿನಲ್ಲಿ ಚೆಲ್ಲಾಟವಾಡಲು ಹೋದಾಗ ಅಪಾಯಕ್ಕೆ ಸಿಲುಕಿದ್ದಾರೆ. ಆದರೆ ಸ್ಥಳದಲ್ಲೇ ಇದ್ದ ಜೀವರಕ್ಷಕರು ಮೂವರನ್ನು ಜೀವಂತವಾಗಿ ಎತ್ತಿ ದಡಕ್ಕೆ ಹಾಕಿದ್ದಾರೆ.