ಬಿಜೆಪಿ ಹೈಕಮಾಂಡ್ ಡಾ. ಸುಧಾಕರ್ ಅವರಿಗೆ ಕರೆ ಮಾಡಿ ಕೊಟ್ಟ ಭರವಸೆ ಏನು?
ಬೆಂಗಳೂರು, ಜೂ. 25: ಒಂದೆಡೆ ಕೊರೊನಾ ವೈರಸ್ ಬೆಂಗಳೂರಿನ ಜನರನ್ನು ಇಲ್ಲಿಲ್ಲದಂತೆ ಕಾಡುತ್ತಿದೆ. ಮತ್ತೊಂದೆಡೆ ಸರ್ಕಾರ ಲಾಕ್ಡೌನ್ ಮಾಡುವುದಿಲ್ಲ, ಸೀಲ್ಡೌನ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದ್ಯಂತ ಲಾಕ್ಡೌನ್ ಜಾರಿ ಮಾಡುವ ಮೂಲಕ ಜನರ ಜೀವ ಕಾಪಾಡಿ ಎಂದು ವಿರೋಧ ಪಕ್ಷಗಳ ನಾಯಕರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.
Recommended Video
ಕೋವಿಡ್ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಬೆಂಗಳೂರಿನ ಸರ್ವಪಕ್ಷ ಶಾಸಕರ ಸಭೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ಕೋವಿಡ್ ನಿಯಂತ್ರಣದ ಉಸ್ತುವಾರಿ ವಹಿಸಿಕೊಳ್ಳಲು ಬೆಂಗಳೂರಿನ ಇಬ್ಬರು ಸಚಿವರಲ್ಲಿ ತೀವ್ರ ಪೈಪೋಟಿ ಶುರುವಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕುಟುಂಬಸ್ಥರಿಗೆ ಕೋವಿಡ್ ಸೋಂಕು ತಗುಲಿದೆ. ಆದರಿಂದ ಅವರು ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಇದೇ ನೆಪದಲ್ಲಿ ಬೆಂಗಳೂರು ಕೋವಿಡ್ 19 ಟಾಸ್ಕ್ಪೋರ್ಸ್ ಉಸ್ತುವಾರಿ ಪಡೆಯಲು ಮತ್ತಿಬ್ಬರು ಸಚಿವರು ತೀವ್ರ ಪೈಪೋಟಿ ನಡೆಸಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಇಬ್ಬರಿಗೂ ಹೋಲ್ಡಾನ್ ಎಂದು ಸಂದೇಶ ಕಳಿಸಿದೆ ಎನ್ನಲಾಗಿದೆ.
ಕ್ವಾರಂಟೈನ್ನಲ್ಲಿ ಡಾ. ಸುಧಾಕರ್
ರಾಜ್ಯದಲ್ಲಿ ಕೊರೊನಾ ವೈರಸ್ ತೀವ್ರವಾಗುತ್ತಿದ್ದಂತೆಯೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಾವೇ ಮುಂದಾಗಿ ಕೋವಿಡ್ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಂಡಿದ್ದರು. ಸ್ವತಃ ವೈದ್ಯರಾಗಿರುವುದರಿಂದ ವೈರಸ್ ಕುರಿತು ಬಹುಬೇಗನೇ ಅರಿತು ಅದಕ್ಕೆ ತಕ್ಕಂತೆ ಕ್ರಮಗಳನ್ನು ಕೈಗೊಂಡಿದ್ದರು. ರಾಜ್ಯದ ಎರಡು ಅಂತಾರಾಷ್ಟೀಯ ವಿಮಾನ ನಿಲ್ದಾಣಗಳು ಹಾಗೂ ಬಂದುರುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಆರಂಭಿಸಲು ಸೂಚಿಸಿದ್ದರು.
ಆನ್ಲೈನ್ ಮೂಲಕ ರಾಜೀವ್ ಗಾಂಧಿ ವಿವಿ ಪದವಿ ಪ್ರಧಾನ ಮಾಡಿದ ಸಚಿವ ಸುಧಾಕರ್
ಆರೋಗ್ಯ ಸಚಿವ ಶ್ರೀರಾಮುಲು ಅವರು ತಮ್ಮ ಪುತ್ರಿಯ ಮದುವೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಯಾವಾಗ ಒತ್ತಡ ಹೆಚ್ಚಾಯ್ತೊ ಆಗ ವಿಧಾನಸೌಧಕ್ಕೆ ಬಂದು ಅಧಿವೇಶನದಲ್ಲಿ ಭಾಗವಹಿಸಿ ಒಂದು ಸಭೆಯನ್ನೂ ನಡೆಸಿದ್ದರು.
ಸುಧಾಕರ್ ಸಲಹೆ ಕೇಳಿದ್ದ ಬಿಎಸ್ವೈ
ವಿಧಾನಸೌಧದ ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಕೊರೊನಾವೈರಸ್ ಸಂಕಷ್ಟ ಶುರುವಾಗಿತ್ತು. ಆಗ ಡಾ. ಸುಧಾಕರ್ ಸರ್ಕಾರದ ಕ್ರಮಗಳನ್ನು ವಿಧಾನಸಭೆ ಕಲಾಪದಲ್ಲಿ ಸಮರ್ಥಿಸಿಕೊಂಡಿದ್ದರು.
ಸಿಎಂ ಯಡಿಯೂರಪ್ಪ ಕೂಡ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಸಲಹೆಯಂತೆಯೆ ಆರಂಭದಲ್ಲಿಯೇ ಲಾಕ್ಡೌನ ಜಾರಿಮಾಡುವ ಕುರಿತು ತೀರ್ಮಾನ ಕೈಗೊಂಡಿದ್ದರು. ಅದಾಗಲೇ ಕೊರೊನಾ ವೈರಸ್ಗೆ ದೇಶದ ಮೊದಲ ಸಾವು ರಾಜ್ಯದ ಕಲಬುರಗಿಯಲ್ಲಿ ಸಂಭವಿಸಿತ್ತು. ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮೈಸೂರು, ಕಲಬುರಗಿ ಸೇರಿದಂತೆ ಕೇಂದ್ರ ಸರ್ಕಾರ ಸೂಚಿಸುವ ಮೊದಲೇ ಲಾಕ್ಡೌನ್ ಜಾರಿ ಮಾಡಿತ್ತು. ಆಗ ಲಾಕ್ಡೌನ್ ಜಾರಿ ಮಾಡಲು ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದು ಇದೇ ಡಾ. ಸುಧಾಕರ್.
ಆರೋಗ್ಯ ಸಚಿವ ಶ್ರೀರಾಮುಲು
ಪುತ್ರಿಯ ವಿವಾಹದ ಬಳಿಕ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಧ್ಯೆ ಉಸ್ತುವಾರಿಗೆ ಪೈಪೋಟಿ ನಡೆಯಿತು. ಆದರೆ ಅದಾಗಲೇ ಸೋಂಕು ತಡೆಗಟ್ಟುವ ಬಗ್ಗೆ ಸಂಪೂರ್ಣವಾಗಿ ಅದ್ಯಯನ ಮಾಡಿದ್ದ ಡಾ. ಸುಧಾಕರ್ ಇಲ್ಲದೇ ಕೋವಿಡ್ ಸೋಂಕು ನಿಯಂತ್ರಣ ಅಸಾಧ್ಯ ಎಂಬ ತೀರ್ಮಾನಕ್ಕೆ ಸಿಎಂ ಯಡಿಯೂರಪ್ಪ ಬಂದಾಗಿತ್ತು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಿವಾಸ ಸೀಲ್ ಡೌನ್
ಕೊನೆಗೆ ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ರಾಜ್ಯದ ಉಸ್ತುವಾರಿಯನ್ನು, ಬೆಂಗಳೂರಿನ ಉಸ್ತುವಾರಿಯನ್ನು ಡಾ. ಸುಧಾಕರ್ ಅವರಿಗೆ ಸಿಎಂ ಯಡಿಯೂರಪ್ಪ ಹಂಚಿಕೆ ಮಾಡಿದ್ದರು.
ದೇಶಕ್ಕೆ ಮಾದರಿ ಕೋವಿಡ್ ಆಸ್ಪತ್ರೆ
ಆರಂಭದಲ್ಲಿಯೇ ಶಾಲೆ-ಕಾಲೇಜುಗಳಿಗೆ ರಜೆ ಕೊಡುವ ಮೂಲಕ, ಮಾಲ್ಗಳು, ಸಿನೇಮಾ ಥಿಯೇಟರ್ಗಳನ್ನು ಬಂದ್ ಮಾಡಿಸಿ ಲಾಕ್ಡೌನ್ ಜಾರಿಗೆ ಮುನ್ನುಡಿ ಬರೆದಿದ್ದರು. ವಿಕ್ಟೋರಿಯಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆ ಎಂದು ಅಧಿಸೂಚನೆ ಮೂಲಕ ಬದಲಾಯಿಸಿ ಸಿದ್ಧತೆ ಮಾಡಿಕೊಂಡಿದ್ದರು. ಆಗ ದೂರವಾಣಿ ಕರೆ ಮಾಡಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಅವರು ಡಾ. ಸುಧಾಕರ್ ಅವರ ಕ್ರಮಕ್ಕೆ ಶ್ಲಾಘನೆ ಮಾಡಿದ್ದರು. ಇದೇ ಮಾದರಿಯನ್ನು ದೇಶದ ಇತರ ರಾಜ್ಯಗಳು ಅನುಸರಿಸಬೇಕು ಎಂದು ಸೂಚಿಸಿದ್ದರು.
ಕೋವಿಡ್ ರೋಗಿಗಳ ಭೇಟಿ
ಆರಂಭದಲ್ಲಿ ಕೋವಿಡ್ ಸೋಂಕಿತರು ಎಂದರೆ ವೈದ್ಯರೇ ಆತಂಕ ಪಟ್ಟಿದ್ದರು. ಕೋವಿಡ್-19 ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಧರಿಸಿ ಖುದ್ದು ಭೇಟಿ ನೀಡಿ ಮುಂಚೂಣಿ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಡಿದ್ದರು. ಜೊತೆಗೆ ವಾರ್ಡ್ಗಳಲ್ಲಿ ಸೋಂಕಿತ ರೋಗಿಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಮೂಲಕ ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದರು.
'5 T' ಸೂತ್ರ ಜಾರಿಗೆ ತಂದಿದ್ದು
ತಜ್ಞರು-ತಂತ್ರಜ್ಞಾನ-ಸಮನ್ವಯದೊಂದಿಗೆ 5 T ಸೂತ್ರವ ದೇಶದಲ್ಲಿ ಮೊದಲ ಬಾರಿಗೆ ಆವಿಷ್ಕರಿಸಿ ಜಾರಿಗೆ ತಂದಿದ್ದು ಕೂಡ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್. ಟ್ರೇಸ್(ಪತ್ತೆ), ಟ್ರಾಕ್(ಪ್ರಯಾಣ ಇತಿಹಾಸ), ಟೆಸ್ಟ್(ಪರೀಕ್ಷೆ), ಟ್ರೀಟ್ಮೆಂಟ್(ಚಿಕಿತ್ಸೆ) ಹಾಗೂ ಟೆಕ್ನಾಲಜಿ(ತಂತ್ರಜ್ಞಾನ) ಮೂಲಕ ಇಡೀ ದೇಶದಲ್ಲೇ ಮೊದಲ ಸಾವಾಗಿ ಆತಂಕ ತಂದಿದ್ದ ಕರ್ನಾಟಕ ಮತ್ತು ಬೆಂಗಳೂರು ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿತು.
ರಾಜ್ಯದ ಈ ಸಾಧನೆಗೆ ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಅವರು ಎಲ್ಲ ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಪಾಲ್ಗೊಂಡಿದ್ದ ವಿಡಿಯೋ ಸಂವಾದದಲ್ಲಿ ಕರ್ನಾಟಕ ಅಳವಡಿಸಿಕೊಂಡಿರುವ ಚಿಕಿತ್ಸಾ ಪದ್ಧತಿಗಳನ್ನು ಇತರೆ ರಾಜ್ಯಗಳು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರು.
ಏಕರೂಪ ಚಿಕಿತ್ಸೆಗೆ ಕ್ರಮ
ಇಡೀ ರಾಜ್ಯದಲ್ಲಿ ಏಕರೂಪದ ಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಡಾ. ಸುಧಾಕರ್ ಪಾತ್ರ ದೊಡ್ಡದು. ಬೀದರ್ನಿಂದ ಚಾಮರಾಜನಗರದವರೆಗೆ ಗಡಿ ಭಾಗದ ಕುಗ್ರಾಮದ ವ್ಯಕ್ತಿಯಿಂದ ಬೆಂಗಳೂರು ಮಹಾನಗರದ ವ್ಯಕ್ತಿಗೂ ಅತ್ಯಾಧುನಿಕ ಗುಣಮಟ್ಟದ ಶ್ರೇಷ್ಟ ಚಿಕಿತ್ಸಾ ಸೌಲಭ್ಯ ದೊರೆಯುವಂತಾಗಲು ಟೆಲಿ ಮೆಡಿಸಿನ್ ವ್ಯವಸ್ಥೆ ಅಳವಡಿಸಿದ ಮೊದಲ ರಾಜ್ಯ ಕನಾ೯ಟಕ.
ಇನ್ನು ಟೆಲಿ ಐಸಿಯು ಮೂಲಕ ದಿನದ 24 ತಾಸು ತಜ್ಞರು ಹಾಜರಿದ್ದು ರಾಜ್ಯದ ಎಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಚಿಕಿತ್ಸಾ ವಿವರಗಳನ್ನು ಕೇಂದ್ರಿಕೃತಗೊಳಿಸಿ ಏಕರೂಪದ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ದೊರಕಿ, ಸೋಂಕಿತರ ಮರಣ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ನೀತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದ್ದವು.
ಉಸ್ತುವಾರಿ ಬದಲಾಣೆ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ ಅವವರು ದೂರವಾಣಿ ಕರೆ ಮಾಡಿ ಕೋವಿಡ್ 19 ಸೋಂಕಿಗೆ ಒಳಗಾಗಿರುವ ನನ್ನ ತಂದೆ, ಪತ್ನಿ ಮತ್ತು ಮಗಳು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ತಮ್ಮ ಕೆಲಸಕಾರ್ಯಗಳ ಮಧ್ಯೆ, ನನ್ನ ಮತ್ತು ನನ್ನ ಕುಟುಂಬದ ಒಳಿತಿಗೆ ಕಾಳಜಿ ತೋರಿ, ಶುಭಹಾರೈಸಿದ್ದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಡಾ. ಸುಧಾಕರ್ ಟ್ವೀಟ್ ಮಾಡಿದ್ದರು.
ಇದೇ ಸಂದರ್ಭದಲ್ಲಿ ಕ್ವಾರಂಟೈನ್ ಮುಗಿಸಿ ಮತ್ತೆ ಕೆಲಸಕ್ಕೆ ಹಾಜರಾಗಿ ಉಸ್ತುವಾರಿ ನೋಡಿಕೊಳ್ಳು ಎಂದು ಅಮಿತ್ ಶಾ ಅವರು ಸೂಚಿಸಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ಮತ್ತೆ ಬೆಂಗಳೂರು ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರೇ ನೋಡಿಕೊಳ್ಳಲಿದ್ದಾರೆ.