ಮೊಟ್ಟೆ ಕೊಡಲು ಕಾಸಿಲ್ಲ, ಶಿಕ್ಷಣ ಸಚಿವರ ಜಾಲತಾಣಕ್ಕೆ ಇದೆಯೇ?: ಕಾಂಗ್ರೆಸ್ ಟೀಕೆ
ಬೆಂಗಳೂರು, ಜೂ. 28: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಮ್ಮ ಖಾಸಗಿ ಜಾಲತಾಣ ನಿರ್ವಹಿಸಲು 11 ಲಕ್ಷ ರೂ. ಹಣವನ್ನು ಸರ್ಕಾರದ ಬೊಕ್ಕಸದಿಂದ ವೆಚ್ಚ ಮಾಡಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಕೂ ಮಾಡಿದೆ.
ಬಿಜೆಪಿಯ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಬಡವರಿಗೆ ಅಕ್ಕಿ ನೀಡಲು ಹಣವಿಲ್ಲ ಎನ್ನುತ್ತಾರೆ. ಮುಖ್ಯಮಂತ್ರಿಗಳು ಮಕ್ಕಳಿಗೆ ಬೈಸಿಕಲ್ ಒದಗಿಸಲು ಮತ್ತು ಮೊಟ್ಟೆ ನೀಡಲು ಹಣವಿಲ್ಲ ಎಂದು ಹೇಳುತ್ತಾರೆ. ಶಿಕ್ಷಣ ಸಚಿವರು ಖಾಸಗಿ ಸಾಮಾಜಿಕ ಜಾಲ ತಾಣ ನಿರ್ವಹಿಸಲು ಲಕ್ಷಾಂತರ ರೂಪಾಯಿ ಹಣ ಸರ್ಕಾರದ ಬೊಕ್ಕಸದಿಂದ ಖರ್ಚು ಮಾಡಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
Koo Appಬಿಜೆಪಿಯ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಬಡವರಿಗೆ ಅಕ್ಕಿ ನೀಡಲು ಹಣವಿಲ್ಲ ಎನ್ನುತ್ತಾರೆ. ಮುಖ್ಯಮಂತ್ರಿಗಳು ಮಕ್ಕಳಿಗೆ ಬೈಸಿಕಲ್ ಒದಗಿಸಲು, ಮೊಟ್ಟೆ ನೀಡಲು ಹಣವಿಲ್ಲ ಎನ್ನುತ್ತಾರೆ. ಶಿಕ್ಷಣ ಸಚಿವರು ತಮ್ಮ ಖಾಸಗಿ ಸಾಮಾಜಿಕ ಜಾಲತಾಣ ನಿರ್ವಹಿಸಲು ಲಕ್ಷಾಂತರ ಹಣ ಸರ್ಕಾರಿ ಬೊಕ್ಕಸದಿಂದ ಖರ್ಚು ಮಾಡುತ್ತಾರೆ. #ಮಾನ_ಮರ್ಯಾದೆಬಿಟ್ಟಬಿಜೆಪಿ - ಕರ್ನಾಟಕ ಕಾಂಗ್ರೆಸ್ (@inckarnataka) 28 June 2022
ಈ ಕುರಿತು ಸರ್ಕಾರದ ಅಧಿಸೂಚನೆ ಪ್ರಮಾಣ ಪತ್ರವನ್ನು ಲಗತ್ತಿಸಿದ್ದು, ಪ್ರಾಥಮಿಕ ಶಿಕ್ಷಣ ಸಚಿವ ಅಧಿಕಾರವಧಿಯಲ್ಲಿ ಸಚಿವರ ಸಾಮಾಜಿಕ ಜಾಲ ತಾಣಗಳ ನಿರ್ವಹಣೆ ಕಾರ್ಯಕ್ಕೆ ಮಾಹೆಯಾನ 94,400 ರೂ. ನಂತೆ 2022 ಏಪ್ರಿಲ್ ನಿಂದ 2022 ಮಾರ್ಚ್ ವರೆಗೆ ಒಂದು ವರ್ಷದ ಅವಧಿಗೆ ಒಟ್ಟು 11,32,000 ರೂ.ಗಳನ್ನು ಸೂಚಿತ ಕಂಪನಿಯ ಸೇವೆ ಪಡೆಯಲು ಕರ್ನಾಟಕ ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಕಂ 4ಜಿ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಶಿಕ್ಷಣ ಇಲಾಖೆ ಪಾರದರ್ಶಕ ಕಾಯ್ದೆಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಅಂದರೆ ಸಚಿವರ ಸಾಮಾಜಿಕ ಜಾಲ ತಾಣ ನಿರ್ವಹಣೆ ಮಾಡಲು ಹಣ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿರುವ ವಿಚಾರ ಪ್ರಸ್ತಾಪವಾಗಿದೆ.
ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಹಿಜಾಬ್ ವಿವಾದದಲ್ಲೂ ಸುದ್ದಿಯಾಗಿದ್ದರು. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ಸಮಿತಿಯ ಶಿಫಾರಸು ಸಮರ್ಥನೆ ಮಾಡಿಕೊಂಡು ವಿವಾದಕ್ಕೆ ಒಳಗಾಗಿದ್ದರು.
ಸಚಿವರ ಮನೆ ಮೇಲೆ ಪ್ರತಿಭಟನೆ ನಡೆಸಿದ ಎನ್ಎಸ್ಯುಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಸಚಿವರಿಗೆ ಪೊಲೀಸರ ಭದ್ರತೆ ಒದಗಿಸಲಾಗಿತ್ತು. ಇದೀಗ ಸಚಿವರ ಸಾಮಾಜಿಕ ಜಾಲ ತಾಣ ನಿರ್ವಹಣೆಯ ವೆಚ್ಚದ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿ ಕೂ ಮಾಡಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.