BC Nagesh Interview : ಕಲಿಕೆಯಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡಿಸುವ ಉದ್ದೇಶ ನನ್ನದು: ಬಿ.ಸಿ. ನಾಗೇಶ್
ಬೆಂಗಳೂರು, ಮೇ. 16: "ಕೊರೊನಾದಿಂದ ಮಕ್ಕಳ ಕಲಿಕೆ ಮೇಲೆ ತುಂಬಾ ಪರಿಣಾಮ ಬಿದ್ದಿದೆ. ಕಲಿಕೆಯಲ್ಲಿ ಕರ್ನಾಟಕವನ್ನು ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದೇ ನಮ್ಮ ಗುರಿ. ಹೀಗಾಗಿ ಹದಿನೈದು ದಿನ ಮೊದಲೇ ಶಾಲೆ ಆರಂಭಿಸಲಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಅಗತ್ಯ ಪಠ್ಯ ಪುಸ್ತಕಗಳನ್ನು ಎಲ್ಲಾ ಶಾಲೆಗಳಿಗೆ ಪೂರೈಸಲಾಗುತ್ತಿದೆ. ಈ ವರ್ಷ ಮಕ್ಕಳ ಕಲಿಕೆಗೆ ನಮ್ಮ ಮೊದಲ ಆದ್ಯತೆ"
ಇದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಅಂತರಾಳದ ಮಾತಿದು. ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಪ್ರಾರಂಭವಾಗಿವೆ. ಈ ಬಗ್ಗೆ ಶಿಕ್ಷಣ ಸಚಿವರು ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.
ಒನ್ಇಂಡಿಯಾ ಕನ್ನಡ: ಕೊರೊನಾ ಅಂತಕ, ಗೊಂದಲದ ನಡುವೆ ರಾಜ್ಯದಲ್ಲಿ ಇಂದಿನಿಂದ ಶಾಲೆಗಳು ಆರಂಭ ಮಾಡಿದ್ದೀರಿ. ಈ ಬಗ್ಗೆ ನಿಮ್ಮ ಸ್ಪಷ್ಟ ಅಭಿಪ್ರಾಯ?
ಬಿ.ಸಿ. ನಾಗೇಶ್: ಕೊರೊನಾ ಕಾಲದಲ್ಲಿ ಮಕ್ಕಳ ಕಲಿಕೆ ಮೇಲೆ ಆಗಿರುವ ಸರಿ ಪಡಿಸುವ ಪ್ರಯತ್ನ ಯಶಸ್ಸು ಆಗುವ ವಿಶ್ವಾಸವಿದೆ. ಇನ್ನೊಂದು ವರ್ಷದಲ್ಲಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಆ ತರಗತಿಗೆ ತಕ್ಕಂತೆ ತರುವ ಪ್ರಯತ್ನವಾಗಿ ದೇಶದಲ್ಲಿ ರಾಜ್ಯ ಮೊದಲ ಹೆಜ್ಜೆ ಇಟ್ಟಿದೆ. ಕೊರೊನಾ ದಿಂದ ಮಕ್ಕಳ ಕಲಿಕೆ ಮೇಲೆ ಆಗಿರುವ ಸಮಸ್ಯೆ ಸರಿದೂಗಿಸುವ ನಿಟ್ಟಿನಲ್ಲಿ ಬೇರೆ ಕಡೆ ಬೇರೆ ಪ್ರಯತ್ನಗಳು ಆಗುತ್ತಿರಬಹುದು. ರಾಜ್ಯದಲ್ಲಿ ಅತಿ ವಿಶೇಷವಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಗೆ ಮಾಡಿದ್ದೇವೆ. ಎಲ್ಲಾ ವರ್ಗದ ಮಕ್ಕಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ "ಕಲಿಕಾ ಚೇತರಿಕೆ" ಅನುಷ್ಠಾನ ಮಾಡುತ್ತಿದ್ದೇವೆ. ಇದಕ್ಕಾಗಿ ಎಷ್ಟು ದುಡ್ಡು ಖರ್ಚು ಆದರೂ ಪರವಾಗಿಲ್ಲ. ಹೀಗಾಗಿಯೇ ಹದಿನೈದು ದಿನ ಮೊದಲೇ ಶಾಲೆಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಶಾಲೆಗಳ ಪ್ರಾರಂಭಕ್ಕೆ ನಮ್ಮ ಶಿಕ್ಷಕ ವರ್ಗ ಸಾಥ್ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಲಿಕಾ ಚೇತರಿಕೆಗೆ ಪಠ್ಯ ಕ್ರಮ ರಚಿಸಿ ಸಾಹಕಾರ ನೀಡಿದ ಶಿಕ್ಷಣ ಇಲಾಖೆಯ ಎಲ್ಲಾ ವರ್ಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ.
ಒನ್ಇಂಡಿಯಾ ಕನ್ನಡ: ಕೊರೊನಾ ನಾಲ್ಕನೇ ಅಲೆ ಬಗ್ಗೆ ಇನ್ನೂ ಗೊಂದಲವಿದೆ. ಇಷ್ಟು ಬೇಗ ಶಾಲೆಗಳು ಆರಂಭವಾಗಬಾರದು ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದ್ರೂ ಶಾಲೆ ಆರಂಭ ಮಾಡಿದ್ದೀರಿ ಯಾಕೆ?
ಬಿ.ಸಿ. ನಾಗೇಶ್: ಖುಷಿಯಾಗುತ್ತದೆ. ನನ್ನ ಜತೆಗೆ ನನ್ನ ಇಲಾಖೆ ಸಹಕರಿಸಿತು. ಮಕ್ಕಳನ್ನು ಗಮನದಲ್ಲಿಟ್ಟಕೊಂಡು ಎಲ್ಲರೂ ತಯಾರು ಅಗಿದ್ದು, ಅದಕ್ಕೆ ತಕ್ಕ ಹಾಗೆ ಪಠ್ಯ ಕ್ರಮವನ್ನು ರಚಿಸಿದ್ದಾರೆ. ಮಕ್ಕಳ ಕಲಿಕೆಗೆ ಒತ್ತು ನೀಡಿ ಕೈಗೊಂಡ ನಿರ್ಧಾರವನ್ನು ಜಾರಿ ಮಾಡುತ್ತಿದ್ದೇವೆ. ಇದಕ್ಕೆ ನಮ್ಮ ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗ ಸಹಕಾರ ನೀಡಿದ್ದಾರೆ. ಈ ಪ್ರಮಾಣದಲ್ಲಿ ಯಶಸ್ವಿಯಾಗಿ ಜಾರಿಯಾಗುತ್ತಿರುವುದನ್ನು ನೋಡಿದ್ರೆ ಸಂತಸವಾಗುತ್ತಿದೆ.
ಒನ್ಇಂಡಿಯಾ ಕನ್ನಡ: ಒಂದೆಡೆ ಕೊರೊನಾದಿಂದ ಶಿಕ್ಷಣ ವ್ಯವಸ್ಥೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಎನ್ಇಪಿ ಜಾರಿ ಸವಾಲು ಎದುರಾಗಿದೆ. ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಎನ್ಇಪಿ ಜಾರಿ ಪ್ರಯತ್ನಗಳೇನು?
ಬಿ.ಸಿ. ನಾಗೇಶ್: ಎನ್ಇಪಿ ಕೇವಲ ಓವರ್ ನೈಟ್ ಜಾರಿ ಮಾಡುವ ಕಾರ್ಯಕ್ರಮಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಮಾದರಿ ಶಾಲೆಗಳಲ್ಲಿ 1 ಮತ್ತು 2 ನೇ ತರಗತಿ ಹಂತದಲ್ಲಿ ಜಾರಿ ಮಾಡುತ್ತಿದ್ದೇವೆ. ಎನ್ಇಪಿ ಪಠ್ಯಕ್ರಮ ಸಿದ್ದಪಡಿಸಲು ಇನ್ನೂ ನಾಲ್ಕು ತಿಂಗಳು ಬೇಕಾಗುತ್ತದೆ. ಹೀಗಾಗಿ ಪ್ರತ್ಯೇಕವಾಗಿ ಅಡಾಕ್ ಪಠ್ಯ ಕ್ರಮ ತಯಾರಿಸಿ ಮಾದರಿ ಶಾಲೆಗಳಲ್ಲಿ ಎನ್ಇಪಿಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ಒಂದು ಪ್ರಾಪರ್ ಚಾನೆಲ್ ನಲ್ಲಿ ಯೋಜನೆಯನ್ನು ಜಾರಿ ಮಾಡುತ್ತೇವೆ.
ಒನ್ಇಂಡಿಯಾ ಕನ್ನಡ: ಈ ವರ್ಷ ಪಠ್ಯ ಪುಸ್ತಕ ವಿತರಣೆಯಲ್ಲಿ ತುಂಬಾ ತಡವಾಗುತ್ತಿದೆ. ಶಾಲೆ ಅದಾಗಲೇ ಆರಂಭ ಮಾಡಿದ್ದೀರಿ ಇದು ದೊಡ್ಡ ಸಮಸ್ಯೆ ಅಲ್ಲವೇ?
ಬಿ. ಸಿ. ನಾಗೇಶ್: ಪಾಠ ಶುರುವಾಗುವ ಮೊದಲೇ ಎಲ್ಲಾ ಮಕ್ಕಳಿಗೆ 90 ಪರ್ಸೆಂಟ್ ವಿತರಣೆ ಮಾಡಲಿದ್ದೇವೆ. ಇಗಾಗಲೇ 72 ಪರ್ಸೆಂಟ್ ಪುಸ್ತಕ ಮುದ್ರಣವಾಗಿದೆ. ಶೇ. 62 ರಷ್ಟು ಪಸ್ತಕಗಳು ಬಿಇಓ ಕಚೇರಿಗಳಿಗೆ ತಲುಪಿವೆ. ಇನ್ನು ಎಲ್ಲಾ ಶಾಲೆಗಳಲ್ಲಿ ಪಾಠ ಶುರುವಾಗುವ ವೇಳೆಗೆ ಎಲ್ಲಾ ಪಠ್ಯಕ್ರಮ ಪುಸ್ತಕಗಳನ್ನು ಪೂರೈಕೆ ಮಾಡುತ್ತೇವೆ. ಈ ಬಗ್ಗೆ ಪೋಷಕರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
ಒನ್ಇಂಡಿಯಾ ಕನ್ನಡ: ಈ ವರ್ಷ ಬೈಸಿಕಲ್ ಯಾವಾಗ ಕೊಡ್ತೀರಿ?
ಬಿ.ಸಿ. ನಾಗೇಶ್: ಶಾಲೆಯಲ್ಲಿ ಪಾಠ ಮತ್ತು ಕಲಿಕೆಗೆ ಒತ್ತು ನೀಡಬೇಕು. ಬೈಸಿಕಲ್ ಗೆ ಮಹತ್ವ ನೀಡಿಲ್ಲ. ಮೊದಲು ಮಕ್ಕಳು ಕಲಿಕೆಯಲ್ಲಿ ಪರಿಣಿತಿ ಪಡೆಯಬೇಕು. ಸಮವಸ್ತ್ರ ನೀಡುವ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ. ಟೆಂಡರ್ ಬಿಡ್ ದಾರರು ಹೆಚ್ಚುದರಕ್ಕೆ ಬಿಡ್ ಸಲ್ಲಿಸಿದ್ದಾರೆ. ಹೀಗಾಗಿ ಸ್ವಲ್ಪ ಗೊಂದಲವಿದೆ. ಪಠ್ಯ ಕ್ರಮವನ್ನು ಕಾಲ ಕ್ರಮದಲ್ಲಿ ವಿತರಣೆ ಮಾಡುತ್ತೇವೆ. ಬೈಸಿಕಲ್ ಕೊಡುವುದು ನಮ್ಮ ಆದ್ಯತೆಯಲ್ಲ ಈ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಆದ್ಯತೆ. ಹೀಗಾಗಿ ಕಲಿಕಾ ಚೇತರಿಕೆಗೆ ಹೆಚ್ಚು ಮಹತ್ವ ಕೊಟ್ಟಿದ್ದೇವೆ. ಎಷ್ಟೇ ದುಡ್ಡು ಖರ್ಚು ಆದ್ರೂ ಪರವಾಗಿಲ್ಲ ಅಂತು ಹದಿನೈದು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒನ್ಇಂಡಿಯಾ ಕನ್ನಡ: 15 ಸಾವಿರ ಶಿಕ್ಷಕರ ನೇಮಕದಿಂದ ಶಿಕ್ಷಕರ ಕೊರತೆ ಪೂರ್ಣ ಆಗಲಿದೆಯೇ ?
Recommended Video
ಬಿ.ಸಿ. ನಾಗೇಶ್: ಶಿಕ್ಷಕರು ಉತ್ಪಾದಕ ವಸ್ತುವಲ್ಲ. ಅರ್ಹ ಶಿಕ್ಷಕರನ್ನು ನಾವು ನೇಮಕ ಮಾಡಿಕೊಳ್ಳಬೇಕು. ಈ ವರ್ಷ ಹದಿನೈದು ಸಾವಿರ ಶಿಕ್ಷಕರಿಂದ ಶಿಕ್ಷಕರ ಕೊರತೆ ಪೂರ್ಣ ಆಗಲ್ಲ. ಅರ್ಹರನ್ನು ಈ ವರ್ಷ ತೆಗೆದುಕೊಳ್ಳುತ್ತೇವೆ. ಮುಂದಿನ ವರ್ಷವೂ ಇದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆಗಲಿದೆ. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.