ಸಕಾಲ ಸೇವೆಗಳ ಕುರಿತು ಜಾಗೃತಿ ಮೂಡಿಸುವ ‘ಸಕಾಲ ಮಿತ್ರ’ ಕ್ಕೆ ಚಾಲನೆ
ಬೆಂಗಳೂರು, ಡಿ. 30: ಕಾಲಮಿತಿಯೊಳಗೆ ಸರ್ಕಾರದ ಸೇವೆ ಖಾತ್ರಿ ನೀಡುವ 'ಸಕಾಲ ಸೇವೆಗಳ' ಪ್ರಯೋಜನವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಹೇಳಿದರು.
'ಸಕಾಲ ಸೇವೆ' ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸಕಾಲ ಸೇವೆಗಳ ಕುರಿತು ಅಭಿಪ್ರಾಯ ಸಂಗ್ರಹಿಸುವ ನೂತನ ಉಪಕ್ರಮ 'ಸಕಾಲ ಮಿತ್ರ' ಕಾರ್ಯಕ್ರಮವನ್ನು ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಸಚಿವರು ಮಾತನಾಡಿದರು.
ಸಕಾಲ ಸೇವೆಗಳ ಕುರಿತು ಇನ್ನೂ ಸಾಕಷ್ಟು ಜನರಿಗೆ ತಿಳಿದಿಲ್ಲ. ಕಾಲಮಿತಿಯಲ್ಲಿ ಸೇವೆ ಪಡೆಯುವ ಸೌಲಭ್ಯದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ನಾಗರಿಕರು ಸಕಾಲ ಯೋಜನೆಯ ಪ್ರಯೋಜನ ಪಡೆಯಬೇಕು. ಅದಕ್ಕಾಗಿ ಸಕಾಲ ಮಿತ್ರರನ್ನು ನಾಗರಿಕರ ಮನೆ ಬಾಗಿಲಿಗೆ ಕಳುಹಿಸಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳು, ಸೇವೆಗಳ ಕುರಿತು ತೃಪ್ತಿ ಇದೆಯೇ? ಎದುರಿಸುತ್ತಿರುವ ಸಮಸ್ಯೆಗಳು ಯಾವುವು? ಯಾವ ರೀತಿ ಸುಧಾರಣೆ ಮಾಡಬಹುದು ಎಂಬ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗುತ್ತದೆ. ಅದಕ್ಕಾಗಿ 20 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಉತ್ತರಗಳನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿಕೊಳ್ಳುತ್ತಾರೆ' ಎಂದು ಸಚಿವರು ತಿಳಿಸಿದರು.
ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಪ್ರಜೆಗಳ ಹಿತ ಬಯಸುವ ಆಡಳಿತಕ್ಕೆ ಒತ್ತು ನೀಡಲಾಗುತ್ತಿತ್ತು. ಪ್ರಜಾಪ್ರಭುತ್ವದ ಈ ರಾಷ್ಟ್ರದಲ್ಲಿ ಸರ್ಕಾರದ ನಿರ್ಧಾರಗಳಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾದದ್ದು. ಸರ್ಕಾರದ ಯಾವುದೇ ಸೇವೆ, ಸೌಲಭ್ಯ ಎಷ್ಟರ ಮಟ್ಟಿಗೆ ಪ್ರಯೋಜನವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಮುಖ್ಯ. ಜನರ ಅಭಿಪ್ರಾಯ, ಪ್ರತಿಕ್ರಿಯೆ ಆಧರಿಸಿ ಬದಲಾವಣೆ ಮತ್ತು ಸುಧಾರಣೆ ಮಾಡಿಕೊಳ್ಳಬೇಕು ಎಂದು ಬಿ.ಸಿ. ನಾಗೇಶ್ ಸಲಹೆ ನೀಡಿದರು.
ಸ್ವಯಂ ಸೇವಕರು ಜನರ ಬಳಿ ಹೋಗಿ ಅಭಿಪ್ರಾಯ ಸಂಗ್ರಹಿಸಿದಾಗ ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಜೊತೆಗೆ ನಾಗರಿಕರಿಂದಲೂ ಹೊಸ ಸಲಹೆ ಸೂಚನೆಗಳು ಸಿಗುತ್ತವೆ. ಹೀಗಾಗಿ, ಆಡಳಿತ ಸುಧಾರಣೆಗೆ ಸಕಾಲ ಮಿತ್ರ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಲಿದೆ ಎಂದರು.
ಸಕಾಲ ಸೇವೆಗಳ ಕುರಿತು ನಾಗರಿಕರಿಗೆ ಫೋನ್ ಕರೆ ಮಾಡಿ ಅಭಿಪ್ರಾಯ ಪಡೆಯಲಾಗುತ್ತಿತ್ತು. ಇನ್ನು ಮುಂದೆ ನೇರವಾಗಿ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ದಾಸರಹಳ್ಳಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಭಾಗಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಸರ್ಕಾರೇತರ ಸಂಸ್ಥೆ 'ಉಪ್ಕೃತಿ' ಹಾಗೂ 'ಆಚಾರ್ಯ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಸಹಯೋಗ ನೀಡಿವೆ. ಅಭಿಪ್ರಾಯ ಸಂಗ್ರಹಿಸಲು ತೆರಳುವ ಸಕಾಲ ಮಿತ್ರರಿಗೆ ತರಬೇತಿ ನೀಡಲಾಗುತ್ತದೆ. ತಾತ್ಕಾಲಿಕ ಗುರುತಿನ ಚೀಟಿ ನೀಡಲಾಗುತ್ತದೆ ಎಂದರ. ಸಕಾಲ ಮಿತ್ರರಾಗಿ ಕಾರ್ಯ ನಿರ್ವಹಿಸಲು ಸ್ವಯಂ ಸೇವಕರಾಗಿ ಮುಂದೆ ಬಂದಿರುವ ವಿದ್ಯಾರ್ಥಿಗಳಿಗೆ ಸಚಿವರು ಶುಭ ಹಾರೈಸಿದರು.
ಸಕಾಲ ಮಿಷನ್ ಹೆಚ್ಚುವರಿ ನಿರ್ದೇಶಕರಾದ ಡಾ. ಬಿ.ಆರ್ ಮಮತಾ, ಆಚಾರ್ಯ ಇನ್ಸ್ಟಿಟ್ಯೂಟ್ ಕ್ಯಾಂಪಸ್ನ ನಿರ್ದೇಶಕರಾದ ಮನೀಶ್ ಪಾಲ್, ಸರ್ಕಾರೇತರ ಸಂಸ್ಥೆ ಉಪ್ಕೃತಿ ಸಂಸ್ಥಾಪಕ ಅಧ್ಯಕ್ಷರಾದ ಚಂದನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮರಿಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Recommended Video