ಸೋನಿಯಾಗೆ ಮತ್ತೆ ಇಡಿ ಸಮನ್ಸ್; ಕಾಂಗ್ರೆಸ್ನಿಂದ ಮೌನ ಸತ್ಯಾಗ್ರಹ
ಬೆಂಗಳೂರು ಜುಲೈ 24: ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿ ಅವರು ನ್ಯಾಯಾಲಯದ ಮೊರೆ ಹೋಗದೆ ಧೈರ್ಯವಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆ ಎದುರಿಸಿ ಬಂದಿದ್ದರು. ಆದರೆ ಅವರಿಗೆ ನೀಡುವ ಕಿರುಕುಳ ನಿಲ್ಲುತ್ತಿಲ್ಲ. ಇದರ ವಿರುದ್ಧ ಜುಲೈ 26ರಂದು ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಮೌನ ಸತ್ಯಾಗ್ರಹ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಭಾನುವಾರ ಸದಾಶಿವನಗರ ನಿವಾಸದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜುಲೈ 26ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಆನಂದ್ರಾವ್ ವೃತ್ತ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಮುಂದೆ ಮೌನ ಸತ್ಯಾಗ್ರಹ ಮಾಡಲಿದ್ದೇವೆ. ಈ ವೇಳೆ ರಾಜ್ಯ ಕಾಂಗ್ರೆಸ್ನ ಎಲ್ಲ ನಾಯಕರು, ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಾಲಿಕೆ ಸದಸ್ಯರು, ಮಾಜಿ ಕಾರ್ಪೊರೇಟರ್ಗಳು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಪಾಲ್ಗೊಂಡು, ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒಡ್ಡುತ್ತಿರುವ ಕಿರುಕುಳ ಖಂಡಿಸಲಿದ್ದಾರೆ" ಎಂದರು.
ಇಡಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಷಡ್ಯಂತ್ರ
"ಜುಲೈ 26 ರಂದು ಮಂಗಳವಾರ ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ನನ್ನ ಇಡಿ ದಾಳಿ ಪ್ರಕರಣದಲ್ಲೂ ಸಹ ನನ್ನ ತಾಯಿಗೂ ಇಡಿ ಅಧಿಕಾರಿಗಳು ಇದೇ ರೀತಿ ಕಿರುಕುಳ ನೀಡಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲೇ ವಿಚಾರಣೆ ಮಾಡಲು ಅನುಮತಿ ನೀಡುವಂತೆ ನಾನು ನ್ಯಾಯಾಲಯದ ಮೊರೆ ಹೋಗಿದ್ದೆ" ಎಂದು ತಮಗಾದ ಅನುಭವ ಕುರಿತು ಡಿ. ಕೆ. ಶಿವಕುಮಾರ್ ವಿವರಿಸಿದರು.
ಇಡಿ ವಿಚಾರಣೆಗೆ ಸೋನಿಯಾ ಗಾಂಧಿ; ರಸ್ತೆಗಿಳಿಯಲು ಕಾಂಗ್ರೆಸ್ ಅಣಿ
ವಿಚಾರಣೆ ಎದುರಿಸದರೂ ಕಿರುಕುಳ ತಪ್ಪುತ್ತಿಲ್ಲ
"ಸೋನಿಯಾ ಗಾಂಧಿ ಯಾವುದಕ್ಕೂ ಹೆದರಿಲ್ಲ. ಅವರು ನ್ಯಾಯಾಲಯದ ಮೊರೆ ಹೋಗದೆ ಧೈರ್ಯವಾಗಿ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿ ಬಂದಿದ್ದಾರೆ. ವಿಚಾರಣೆಗೆ ಹಾಜರಾದರೂ ಸಹ ಮತ್ತೆ ಸಮನ್ಸ್ , ವಿಚಾರಣೆ ಎಂದು ಅಧಿಕಾರಿಗಳ ಕಿರುಕುಳ ನಿಲ್ಲುತ್ತಿಲ್ಲ. ಇದೆಲ್ಲವನ್ನು ನೋಡಿದರೆ ಇದರಲ್ಲಿ ಬಿಜೆಪಿಯ ರಾಜಕೀಯ ದುರುದ್ದೇಶ ಅಡಗಿರುವುದು ಗೊತ್ತಾಗುತ್ತಿದೆ" ಎಂದು ಡಿ. ಕೆ. ಶಿವಕುಮಾರ್ ಆರೋಪಿಸಿದರು.
ಪಕ್ಷ ಸಂಘಟನೆ ವಿಚಾರ ಚರ್ಚೆ ಆಗಿದೆ
"ಭಾರತ ಜೋಡೋ ಪಾದಯಾತ್ರೆ ಚಾಮರಾಜನಗರ, ಮೈಸೂರು, ಶ್ರೀರಂಗಪಟ್ಟಣ, ನಾಗಮಂಗಲ, ಮೇಲುಕೋಟೆ, ಪಾಂಡವಪುರ, ಮಾರ್ಗವಾಗಿ ತುಮಕೂರು ಜಿಲ್ಲೆ ಪ್ರವೇಶಿಸಲಿದೆ. ಇದಕ್ಕೆ ಸಂಬಂಧಿಸಿದ ತಯಾರಿ ಕುರಿತು ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಪಕ್ಷದ ಸಂಘಟನೆ ವಿಚಾರ ಹೊರತುಪಡಿಸಿ ಬೇರೆ ಯಾವ ವಿಚಾರವಾಗಿ ಯಾವುದೇ ನಾಯಕರು ನನ್ನ ಬಳಿ ಚರ್ಚೆ ಮಾಡಿಲ್ಲ. ಇತರ ವಿಷಯಗಳ ಕುರಿತು ಚರ್ಚೆ ಮಾಡಲು ಅವಕಾಶ ನೀಡುವುದಿಲ್ಲ" ಎಂದು ಚೆಲುವರಾಯಸ್ವಾಮಿ, ಬಾಲಕೃಷ್ಣ ಅವರ ಜತೆ ಶನಿವಾರ ರಾತ್ರಿ ನಡೆದ ಸಮಾಲೋಚನೆಯ ಪ್ರಶ್ನೆಗೆ ಅವರು ಉತ್ತರಿಸಿದರು.
ಜನ ಕಾಂಗ್ರೆಸ್ಗೆ ಅಧಿಕಾರ ನೀಡಲಿದ್ದಾರೆ
"ಕಾಂಗ್ರೆಸ್ ಜಗಳ ಬೀದಿಗೆ ಬಂದಿದೆ. ಒಂದು ಹುದ್ದೆಗೆ ನಾಲ್ಕು ಜನ ಕಿತ್ತಾಡುತ್ತಿದ್ದಾರೆ" ಎಂಬ ಸಚಿವ ಆರ್. ಅಶೋಕ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂಬ ಸತ್ಯವನ್ನು ಬಿಜೆಪಿಯವರು ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಲೇವಡಿ ಡಿ. ಕೆ. ಶಿವಕುಮಾರ್ ಲೇವಡಿ ಮಾಡಿದರು.
ಬಿಜೆಪಿಯಿಂದ ನಾವು ಶಿಸ್ತು ಕಲಿಯಬೇಕಿಲ್ಲ
"ಬಿಜೆಪಿ ನೋಡಿ ಕಾಂಗ್ರೆಸ್ ಪಕ್ಷ ಶಿಸ್ತು ಕಲಿಯಬೇಕಾಗಿಲ್ಲ. ಅದರ ಅಗತ್ಯವು ನಮಗಿಲ್ಲ. ಬಿಜೆಪಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ತುಂಬಿದೆ. ಜನರ ಹಣ ಲೂಟಿ ಮಾಡೋದನ್ನು ಅವರಿಂದ ಕಲಿಯಬೇಕಾ?. ಬಿಜೆಪಿಯಲ್ಲಿರವ ಕೊಳಕು, ಬಿಜೆಪಿ ನಾಯಕರೇ ಅರಗಿಸಿಕೊಳ್ಳಲು ಸಾಧ್ಯವಿದೆಯೇ. ಈ ಬಗ್ಗೆ ಅವರ ಕಾರ್ಯಕರ್ತರೇ ಉತ್ತರಿಸುತ್ತಾರೆ" ಎಂದು ಡಿ. ಕೆ. ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಮತ್ತೆ ಮಂಗಳವಾರ ದೆಹಲಿಯಲ್ಲಿನ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. ಇತ್ತ ಕರ್ನಾಟಕ, ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.