ಬಂಧನ ಭೀತಿಯಲ್ಲಿ ಡಿಕೆ ಶಿವಕುಮಾರ್: ಶ್ರೀರಾಮುಲು ಅಣ್ಣ ಉವಾಚ
ಬೆಂಗಳೂರು, ಆಗಸ್ಟ್ 30: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮನ್ನು ಬಾಯಿತುಂಬ ಅಣ್ಣ ಎಂದು ಕರೆಯುತ್ತಿದ್ದ ಡಿ ಕೆ ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ನೀಡಿದ ವಿಚಾರದಲ್ಲಿ, ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.
" ಇದೊಂದು ಡಿ ಕೆ ಶಿವಕುಮಾರ್ ಅವರೊಬ್ಬರಿಗೆ ಸಂಬಂಧಪಟ್ಟ ವಿಚಾರವಲ್ಲ. ಅನೇಕ ಉದಾಹರಣೆಗಳು ದೇಶದಲ್ಲಿ ಸಿಗುತ್ತವೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ " ಎಂದು ಶ್ರೀರಾಮುಲು ಹೇಳಿದರು.
ನಾನು ಮನುಷ್ಯ ಕಣಯ್ಯಾ, ಓಡಿ ಬರೋಕಾಗುತ್ತಾ? ಡಿ ಕೆ ಶಿವಕುಮಾರ್
" ಯಾರ್ಯಾರು ಭ್ರಷ್ಟಾಚಾರ, ಹವಾಲ ದಂಧೆ, ಅಕ್ರಮವಾಗಿ ವ್ಯವಹಾರ ಮಾಡಿಕೊಂಡು ಬಂದಿದ್ದಾರೋ, ಅವರಿಗೆಲ್ಲಾ ಇವತ್ತಿಲ್ಲಾಂದ್ರೆ, ನಾಳೆ ಇದೇ ಆಗುವುದು. ಉಪ್ಪು ತಿಂದವನು ನೀರು ಕುಡಿಯಲೇ ಬೇಕಲ್ಲವೇ " ಎಂದು ಶ್ರೀರಾಮುಲು ಅಭಿಪ್ರಾಯ ಪಟ್ಟರು.
" ಈ ಹಿಂದೆ ಆದಾಯ ತೆರಿಗೆ ಅಧಿಕಾರಿಗಳು ಅವರ ಮನೆಗೆ ದಾಳಿ ನಡೆಸಿದ ಸಂದರ್ಭದಲ್ಲಿ, ಅವರ ಎದುರೇ ದಾಖಲೆಗಳನ್ನು ಡಿ ಕೆ ಶಿವಕುಮಾರ್ ಹರಿದು ಹಾಕಿರುವ ಉದಾಹರಣೆ ಇದೆ. ಸುಮ್ಮನೇ, ಎಲ್ಲದಕ್ಕೂ ಮೋದಿಯನ್ನು ದೂರಿದರೆ ಆಗುತ್ತಾ " ಎಂದು ಶ್ರೀರಾಮುಲು ಪ್ರಶ್ನಿಸಿದರು.
ಏಟಿಗೆ ಎದುರೇಟು, ಶ್ರೀರಾಮುಲು ಆಪ್ತನಿಂದ ಕರುಣಾಕರ್ ರೆಡ್ಡಿ ವಿರುದ್ಧ ಕೇಸ್
" ಬೇನಾಮಿ ಆಸ್ತಿಗಳನ್ನು ಅವರು ಮಾಡಿದ್ದರೆ ಅವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ವಿಚಾರಣೆಯ ವೇಳೆ ಏನೂ ತಪ್ಪು ಮಾಡಿಲ್ಲ ಎಂದಾದರೆ, ಅವರು ನಿರ್ದೋಷಿಯಾಗುತ್ತಾರೆ " ಎಂದು ಶ್ರೀರಾಮುಲು ಹೇಳಿದರು.
" ರಾಜಕಾರಣ ಬೇರೆ, ವ್ಯಾಪಾರ ಬೇರೆ. ವ್ಯಾಪಾರದಲ್ಲಿ ಏನು ಆಗಬೇಕೋ ಅದು ಆಗಬೇಕು, ರಾಜಕೀಯದಲ್ಲಿ ಏನು ಆಗಬೇಕೋ, ಅದು ಆಗುತ್ತೆ " ಎಂದು ಶ್ರೀರಾಮುಲು, ಎರಡಕ್ಕೂ ಒಂದಕ್ಕೊಂದು ಸಂಬಂಧ ಕಲ್ಪಿಸಬೇಡಿ ಎಂದು ಅಭಿಪ್ರಾಯ ಪಟ್ಟರು.