ಡಿ. ಕೆ. ಶಿವಕುಮಾರ್ ಜಾಮೀನು ರದ್ದು ಮಾಡಿ; ಸುಪ್ರೀಂಗೆ ಅರ್ಜಿ
ಬೆಂಗಳೂರು, ಅಕ್ಟೋಬರ್ 25 : ಮಾಜಿ ಸಚಿವ, ಕನಕಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಜಾಮೀನು ರದ್ದುಗೊಳಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ. ಬುಧವಾರ ರಾತ್ರಿ ಅವರು ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಜಾರಿ ನಿರ್ದೇಶನಾಲಯ ಶುಕ್ರವಾರ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿರುವುದನ್ನು ಪ್ರಶ್ನೆ ಮಾಡಿದೆ.
ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾದ ಡಿಕೆ ಶಿವಕುಮಾರ್
ಬುಧವಾರ ದೆಹಲಿ ಹೈಕೋರ್ಟ್ ಡಿ. ಕೆ. ಶಿವಕುಮಾರ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ದೆಹಲಿಯ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಅವರು ಬಿಡುಗಡೆಗೊಂಡಿದ್ದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಅವರು ಕರ್ನಾಟಕಕ್ಕೂ ಇನ್ನೂ ಆಗಮಿಸಿಲ್ಲ.
ಡಿಕೆಶಿ ಬಿಡುಗಡೆ ಸಂಭ್ರಮಿಸಲು ಉಚಿತ ಆಟೋ ಪ್ರಯಾಣ
ಡಿ. ಕೆ. ಶಿವಕುಮಾರ್ ಪ್ರಭಾವಿ ರಾಜಕೀಯ ನಾಯಕರಾಗಿದ್ದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಜಾಮೀನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
ಷರತ್ತುಬದ್ಧ ಜಾಮೀನು
ದೆಹಲಿ ಹೈಕೋರ್ಟ್ 25 ಲಕ್ಷ ರೂ. ಬಾಂಡ್ನೊಂದಿಗೆ ಇಬ್ಬರ ಶ್ಯೂರಿಟಿ, ವಿಚಾರಣೆಗೆ ಹಾಜರಾಗಬೇಕು, ಪಾಸ್ ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂಬ ಷರತ್ತಿನೊಂದಿಗೆ ಡಿ. ಕೆ. ಶಿವಕುಮಾರ್ಗೆ ಜಾಮೀನು ಮಂಜೂರು ಮಾಡಿತ್ತು. 48 ದಿನಗಳ ಕಾಲ ಜೈಲಿನಲ್ಲಿದ್ದ ಡಿ. ಕೆ. ಶಿವಕುಮಾರ್ ಬಿಡುಗಡೆಗೊಂಡಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣ
ಸೆಪ್ಟೆಂಬರ್ 3ರಂದು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. ಇಡಿ ವಿಶೇಷ ನ್ಯಾಯಾಲಯ ಡಿ. ಕೆ. ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಆದ್ದರಿಂದ, ದೆಹಲಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು.
ಕುಟುಂಬ ಸದಸ್ಯರು ಭಾಗಿ
ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಮಾತ್ರವಲ್ಲ ಅವರ ಕುಟುಂಬ ಸದಸ್ಯರು ಸಹ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಶಂಕೆ ಇದೆ. ಅವರ ವಿಚಾರಣೆ ಬಾಕಿ ಇದೆ. ಆದ್ದರಿಂದ, ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ದೆಹಲಿ ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದೆ.
ಶನಿವಾರ ಬೆಂಗಳೂರಿಗೆ ಡಿಕೆಶಿ
ತಿಹಾರ್ ಜೈಲಿನಿಂದ ಬಿಡುಗಡೆಗೊಂಡರೂ ಡಿ. ಕೆ. ಶಿವಕುಮಾರ್ ಇನ್ನೂ ಕರ್ನಾಟಕಕ್ಕೆ ಬಂದಿಲ್ಲ. ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ನಿರೀಕ್ಷೆ ಇದೆ. ಡಿ. ಕೆ. ಶಿವಕುಮಾರ್ ಸ್ವಾಗತಿಸಲು 30 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ.