8.5 ಕೋಟಿ ರೂ. ಬೇನಾಮಿ ವಹಿವಾಟು: ಡಿಕೆ ವಿರುದ್ಧ ಇಡಿ ಕೇಸಿನ ಮೊದಲ ವಿಚಾರಣೆ
ಬೆಂಗಳೂರು, ಜು.1: ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜಾರಿ ನಿರ್ದೇಶನಾಲಯ ಸೆಣಸಾಟ ಭಾಗ -2 ಶುಕ್ರವಾರದಿಂದ ಆರಂಭವಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇತರರ ವಿರುದ್ಧ ಇಡಿ ದಾಖಲಿಸಿರುವ ಪ್ರಕರಣದ ವಿಚಾರಣೆ ದೆಹಲಿಯ ವಿಶೇಷ ನ್ಯಾಯಾಲಯದಲ್ಲಿ ಶುರುವಾಗಿದೆ. ಜು. 1 ರಂದು ಮೊದಲ ವಿಚಾರಣೆ ನಡೆದಿದ್ದು, ಪ್ರಕರಣವನ್ನು ಜು. 30 ಕ್ಕೆ ಮುಂದೂಡಿ ಆದೇಶ ಹೊರಡಿಸಲಾಗಿದೆ.
ಎಂಟು ಕೋಟಿ ರೂ. ಕೋಟಿ ರೂ. ಬೇನಾಮಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ( ಇಡಿ ) ಕೇಸುದ ದಾಖಲಿಸಿತ್ತು. ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಪ್ಲಾಟ್ ಗಳಲ್ಲಿ ಸಿಕ್ಕಿದ 8.5 ಕೋಟಿ ರೂ. ಹಣದ ಅಕ್ರಮ ವಹಿವಾಟು ಆರೋಪಕ್ಕೆ ಸಂಬಂಧಿಸಿದಂತೆ 2019 ರಲ್ಲಿ ದಾಖಲಿಸಿದ್ದ ಪ್ರಕರಣ ಸಂಬಂಧ ದೆಹಲಿಯ ಇಡಿ ಅಧಿಕಾರಿಗಳು ಮೇ ತಿಂಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಒಡೆತನಕ್ಕೆ ಸೇರಿದ ಪ್ಲಾಟ್ ನಲ್ಲಿ 8.5 ಕೋಟಿ ರೂ. ಬೇನಾಮಿ ಹಣ ಪತ್ತೆಯಾದ ಬಗ್ಗೆ ಐಟಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಇಡಿ ಅಧಿಕಾರಿಗಳು ಪಿಎಂಎಲ್ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.
2019 ರಲ್ಲಿ ಈ ಪ್ರಕರಣದ ವಿಚಾರಣೆ ಸಂಬಂಧ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ವಶಕ್ಕೆ ಪಡೆದಿದ್ದರು. ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ ತಿಹಾರ್ ಜೈಲಿನಲ್ಲಿಡಲಾಗಿತ್ತು. ಡಿ.ಕೆ. ಶಿವಕುಮಾರ್ ಅವರಿಗೆ ಇಡಿ ವಿಶೇಷ ನ್ಯಾಯಾಲಯ ಜಾಮೀನು ನೀಡಲು ತಿರಸ್ಕರಿಸಿತ್ತು. ಆ ಬಳಿಕ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದರು.
8.5 ಕೋಟಿ ರೂ. ಬೇನಾಮಿ ವಹಿವಾಟು:
ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಸಿದಿಂತೆ ದೆಹಲಿಯ ಅಪಾರ್ಟ್ಮೆಂಟ್ಗಳಲ್ಲಿ ಪತ್ತೆಯಾಗಿದ್ದ 8.5 ಕೋಟಿ ರೂ. ಹಣದ ಮೂಲದ ಬಗ್ಗೆ ತನಿಖೆ ನೆಡಸಿರುವ ಇಡಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಡಿ.ಕೆ. ಶಿವಕುಮಾರ್ ಮೊದಲ ಅರೋಪಿಯಾಗಿದ್ದು, ಸಚಿನ್ ನಾರಾಯಣ್, ಪಾಲುದಾರ ಸ್ನೇಹಿತ ಸುನೀಲ್ ಕುಮಾರ್ ಶರ್ಮಾ , ಆಂಜನೇಯ ಹನುಮಂತ ಸೇರಿದಂತೆ ಐವರ ವಿರುದ್ಧ ಬೇನಾಮಿ ವಹಿವಾಟು ನಡೆಸಿದ ಅರೋಪ ಹೊರಿಸಲಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚನಾವಣೆ ಸಮೀಪಿಸುತ್ತಿದೆ. ಕಾಂಗ್ರೆಸ್ ಪಕ್ಷ ಅದಾಗಲೇ ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬೇನಾಮಿ ಆಸ್ತಿ ಪ್ರಕರಣದ ವಿಚಾರಣೆ ಶುರುವಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಆಜು ಬಾಜಿನಲ್ಲಿ ಪ್ರಕರಣ ತಾರ್ಕಿಕ ಘಟ್ಟಕ್ಕೆ ತಲುಪಲಿದೆ. ಚುನಾವಣೆ ಮುನ್ನ ಪ್ರಕರಣದ ವಿಚಾರಣೆ ಪೂರ್ಣಗೊಂಡು ಡಿಕೆ ಆರೋಪ ಮುಕ್ತವಾದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರಬಹುದು. ಒಂದು ವೇಳೆ ಪ್ರಕರಣ ಉರುಳಾದಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತ ಎದುರಾಗಬಹುದು.
Recommended Video