ಡಿ. ಕೆ. ಶಿವಕುಮಾರ್ ಜಾಮೀನಿಗೆ ಇಡಿ ಅಕ್ಷೇಪಣೆ; ಕೋರ್ಟ್ಗೆ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 16 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ಆಕ್ಷೇಪಣೆಯನ್ನು ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಸೋಮವಾರ ದೆಹಲಿಯಲ್ಲಿರುವ ಇಡಿ ವಿಶೇಷ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ಆಕ್ಷೇಪಣೆ ಸಲ್ಲಿಸಿದೆ. ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಸೆ. 17ರ ಮಂಗಳವಾರ ಅಂತ್ಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಸುಧಾರಿಸದ ಡಿಕೆಶಿ ಆರೋಗ್ಯ; ಮುಂದುವರೆದ ಚಿಕಿತ್ಸೆ
ಶುಕ್ರವಾರ ಡಿ. ಕೆ. ಶಿವಕುಮಾರ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಡಿ. ಕೆ. ಶಿವಕುಮಾರ್ ಕಸ್ಟಡಿಯನ್ನು ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡಿದ್ದ ನ್ಯಾಯಾಲಯ, ಸೋಮವಾರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಡಿಕೆ ಶಿವಕುಮಾರ್ ಬೆಂಬಲಿಗರಿಗೆ ಡಿ.ಕೆ.ಸುರೇಶ್ ಪತ್ರ
ಡಿ. ಕೆ. ಶಿವಕುಮಾರ್ ಆರೋಗ್ಯ ಏರುಪೇರಾಗಿದ್ದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರ, ಅಧಿಕ ರಕ್ತದೊತ್ತಡದಿಂದ ಡಿ. ಕೆ. ಶಿವಕುಮಾರ್ ಬಳಲುತ್ತಿದ್ದಾರೆ. ಆದ್ದರಿಂದ, ಭಾನುವಾರ ಮತ್ತು ಸೋಮವಾರ ಅವರ ವಿಚಾರಣೆ ನಡೆಸಲು ಇಡಿಗೆ ಸಾಧ್ಯವಾಗಿಲ್ಲ.
ಡಿಕೆಶಿ ವಿಚಾರಣೆ: 10 ದಿನದಲ್ಲಿ ಸಿಗದ ಉತ್ತರ 4 ದಿನದಲ್ಲಿ ಸಿಗುತ್ತಾ?
ಇಡಿ ಸಲ್ಲಿಸಿದ ಆಕ್ಷೇಪಣೆಗಳೇನು?
ಡಿ. ಕೆ. ಶಿವಕುಮಾರ್ಗೆ ಜಾಮೀನು ನೀಡಬಾರದು ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಇಡಿ ವಿಚಾರಣೆ ನಡೆಸುವಾಗ ದಾಖಲೆಗಳನ್ನು ತೋರಿಸಿ ಪ್ರಶ್ನಿಸಿದಾಗ ಅವರು ಸರಿಯಾಗಿ ಉತ್ತರ ನೀಡಿಲ್ಲ. ಆದ್ದರಿಂದ, ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಸಲ್ಲಿಸಿದೆ.
ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ
ವಿಚಾರಣೆ ವೇಳೆ ಹಲವು ವ್ಯಕ್ತಿಗಳು, ಸಂಸ್ಥೆಗಳ ಹೆಸರನ್ನು ಅವರು ಹೇಳಿದ್ದಾರೆ. ಆ ವ್ಯಕ್ತಿಗಳ ವಿಚಾರಣೆ ನಡೆಸುವುದು ಅಗತ್ಯವಾಗಿದೆ. ಒಂದು ವೇಳೆ ಜಾಮೀನು ನೀಡಿದರೆ ಅವರು ವ್ಯಕ್ತಿಗಳ ಮೇಲೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಇಡಿ ಕಸ್ಟಡಿ ಅಂತ್ಯ
ಡಿ. ಕೆ. ಶಿವಕುಮಾರ್ ಇಡಿ ಕಸ್ಟಡಿ ಸೆ.17ರ ಮಂಗಳವಾರ ಅಂತ್ಯಗೊಳ್ಳಲಿದೆ. ಇಡಿ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಡಿ. ಕೆ. ಶಿವಕುಮಾರ್ಗೆ ಜಾಮೀನು ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ಆಸ್ಪತ್ರೆಗೆ ದಾಖಲಾಗಿದ್ದಾರೆ
ಡಿ. ಕೆ. ಶಿವಕುಮಾರ್ ಅನಾರೋಗ್ಯದ ಕಾರಣ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ, ಭಾನುವಾರ ಮತ್ತು ಸೋಮವಾರ ಡಿ. ಕೆ. ಶಿವಕುಮಾರ್ ವಿಚಾರಣೆ ನಡೆಸಲು ಇಡಿಗೆ ಸಾಧ್ಯವಾಗಿಲ್ಲ. ಮಂಗಳವಾರ ಆಸ್ಪತ್ರೆಯಿಂದ ಅವರನ್ನು ನೇರವಾಗಿ ನ್ಯಾಯಾಲಯಕ್ಕೆ ಕರೆತರುವ ಸಾಧ್ಯತೆ ಇದೆ.