ವಿಜಯಪುರದಲ್ಲಿ ಸಿಕ್ಕ ವಿವಿ ಪ್ಯಾಟ್ ಗಳು ಕರ್ನಾಟಕದ್ದಲ್ಲ: ಆಯೋಗ ಸ್ಪಷ್ಟನೆ
ಬೆಂಗಳೂರು, ಮೇ 21 : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದಲ್ಲಿ ದೊರೆತಿರುವ ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳು, ವಿಜಯಪುರ ಜಿಲ್ಲೆ ಅಥವಾ ಕರ್ನಾಟಕ ಚುನಾವಣಾ ಆಯೋಗಕ್ಕೆ ಸಂಬಂಧಿಸಿರುವುದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದವರು ವಾಸಿಸುತ್ತಿದ್ದ ತಾತ್ಕಾಲಿಕ ಶೆಡ್ ನಲ್ಲಿ ಪತ್ತೆಯಾಗಿರುವ ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳಲ್ಲಿ ಯಾವುದೇ ರೀತಿಯ ಮಷೀನ್ ಇರುವುದಿಲ್ಲ. ಹಾಗೆಯೇ, ಪೇಪರ್ ಕೂಡ ಇರುವುದಿಲ್ಲ. ಜೊತೆಗೆ ಇವುಗಳ ಮೇಲೆ ಯೂನಿಕ್ ಐಡಿ ಸಂಖ್ಯೆ ಇರುವುದಿಲ್ಲ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಮತಯಂತ್ರದ ಫಲಿತಾಂಶ ವಿವಿಪ್ಯಾಟ್ ಜತೆ ತಾಳೆ: ಚುನಾವಣಾ ಆಯೋಗ
ದೊರೆತಿರುವ ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳಿಗೆ ಸಂಬಂಧಿಸಿದಂತೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿರುವವರ ಬಗ್ಗೆ ಆಯೋಗವುಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಚುನಾವಣಾಧಿಕಾರಿಗಳು ಎಚ್ಚರಿಸಿದ್ದಾರೆ.
ಮೇ 20ರಂದು ಮನಗೂಳಿ ಗ್ರಾಮದಲ್ಲಿ ವಿವಿಪ್ಯಾಟ್ ದೊರೆತಿವೆ ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ, ಎಂಟು (8) ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳು ಮಾತ್ರ ದೊರೆತಿದ್ದವು.
ಅಲ್ಲದೆ ಸ್ಥಳದಲ್ಲಿ ಯಾವುದೇ ವಿವಿಪ್ಯಾಟ್ ಮಷೀನ್ಗಳು ಲಭ್ಯವಾಗಿರುವುದಿಲ್ಲ ಮತ್ತು ಜಿಲ್ಲೆಗೆ ಹಂಚಿಕೆಯಾಗಿದ್ದ 2744 ವಿವಿಪ್ಯಾಟ್ ಗಳು ಸುರಕ್ಷಿತವಾಗಿದ್ದು, ಸ್ಟ್ರಾಂಗ್ ರೂಂನಲ್ಲಿ ಭದ್ರ ಪಡಿಸಿಟ್ಟುಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ಮುಖ್ಯ ಚುನಾವಣಾಧಿಕಾರಿಗಳು ಹೇಳಿದರು. ಈ ಸಂಬಂಧ ಬಸವನಬಾಗೇವಾಡಿಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.