ಕರ್ನಾಟಕಕ್ಕೆ ವರದಾನವಾಯ್ತು ವಿದ್ಯುತ್ ಬಿಕ್ಕಟ್ಟು, 2800 ಕೋಟಿ ಲಾಭ
ಬೆಂಗಳೂರು, ಮೇ 16: ದೇಶದ ಬಹುತೇಕ ರಾಜ್ಯಗಳು ವಿದ್ಯುತ್ ಅಭಾವದಿಂದ ಕಂಗೆಟ್ಟಿದ್ದರೆ ಕರ್ನಾಟಕ ರಾಜ್ಯ ಸಿಕ್ಕಾಪಟ್ಟೆ ವಿದ್ಯುತ್ ಇಟ್ಟುಕೊಂಡು ಭಾರವಾಗಿ ಕೂತಿತ್ತು. ಇದೀಗ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ 2021-22ರ ಹಣಕಾಸು ವರ್ಷದಲ್ಲಿ ರಾಜ್ಯ 2836 ಕೋಟಿ ರೂ ಲಾಭ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟದಿಂದ ಕಳೆದ 25 ದಿನಗಳಲ್ಲೇ ಕರ್ನಾಟಕ 800 ಕೋಟಿ ರೂ ಹಣ ಗಳಿಸಿದೆ. ಸದ್ಯ ಬೇಸಿಗೆ ಇರುವುದು ಹಾಗು ದೇಶಾದ್ಯಂತ ಕಲ್ಲಿದ್ದಲು ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲದೇ ಇರುವುದು ಕರ್ನಾಟಕಕ್ಕೆ ಮುಂದಿನ ದಿನಗಳು ಲಕ್ಷ್ಮೀ ಕಟಾಕ್ಷ ಆಗಲಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಗಳಿಸಿದ ಹಣಕ್ಕಿಂತಲೂ ಹೆಚ್ಚು ಹಣವನ್ನು ಈ ಹಣಕಾಸು ವರ್ಷದಲ್ಲಿ ಗಳಿಸುವ ನಿರೀಕ್ಷೆ ಇದೆ.
ರಾಜಸ್ಥಾನದಲ್ಲಿ ಎಐಸಿಸಿ ಚಿಂತನಾ ಶಿಬಿರ; ಆರ್ಥಿಕ ವಿಚಾರ ಮಂಡಿಸಿದ ಸಿದ್ದರಾಮಯ್ಯ
ಅಚ್ಚರಿ ಎಂದರೆ ಎರಡು ವರ್ಷ ಹಿಂದಿನವರೆಗೂ ಕರ್ನಾಟಕದ ವಿದ್ಯುತ್ ವಲಯ ಸಂಕಷ್ಟದ ಸ್ಥಿತಿಯಲ್ಲಿತ್ತು. ಆದರೆ, ಪರಿಸರಪೂರಕ ಎನಿಸುವ ಗ್ರೀನ್ ಎನರ್ಜಿ ಯೋಜನೆಗಳತ್ತ ಗಮನ ಕೊಟ್ಟಿದ್ದು ಈಗ ಫಲ ಕೊಡುತ್ತಿದೆ. ಬೇರೆ ಹಲವು ರಾಜ್ಯಗಳಲ್ಲಿ ವಿದ್ಯುತ್ ಉತ್ಪಾದನೆಗೆ ಜಲವಿದ್ಯುತ್ ಮತ್ತು ಕಲ್ಲಿದ್ದಲು ಘಟಕಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು, ಜಲವಿದ್ಯುತ್ ಘಟಕಗಳ ಜೊತೆಗೆ ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಮೂಲಗಳಿಂದಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದ ರಾಜ್ಯಕ್ಕೆ ವಿದ್ಯುತ್ ಕೊರತೆ ಎದುರಾಗುವ ಸಂಭವ ಕಡಿಮೆ.
ವಿಚಿತ್ರ ಎಂದರೆ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆದರೆ ಸಂಗ್ರಹ ಮಾಡಿಟ್ಟುಕೊಳ್ಳುವ ಸೌಕರ್ಯ ವ್ಯವಸ್ಥೆ ದುರ್ಬಲವಾಗಿದೆ. ಹೀಗಾಗಿ, ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡದೇ ಬೇರೆ ವಿಧಿ ಇಲ್ಲ. ನಮ್ಮ ರಾಜ್ಯದ ಅದೃಷ್ಟಕ್ಕೆ ದೇಶದಲ್ಲಿ ಕಲ್ಲಿದ್ದಲು ಕೊರತೆ, ಮಳೆ ಅಭಾವದಿಂದ ವಿದ್ಯುತ್ ಕೊರತೆ ಕಾಡುತ್ತಿದೆ. ಹೀಗಾಗಿ, ರಾಜ್ಯದ ವಿದ್ಯುತ್ ಕೊಳ್ಳಲು ಹಲವು ರಾಜ್ಯಗಳು ಮುಗಿಬಿದ್ದಿವೆ.
ಕಳೆದ ಹಣಕಾಸು ವರ್ಷದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಕರ್ನಾಟಕ 1162Mu ವಿದ್ಯುತ್ ಶಕ್ತಿ ಮಾರಾಟ ಮಾಡಿದೆ. ಒಂದು ಯೂನಿಟ್ ವಿದ್ಯುತ್ಗೆ ಸರಾಸರಿಯಾಗಿ 4.3 ರೂ ದರ ಸಿಕ್ಕಿದೆ.
ಕರ್ನಾಟಕ; ಸೋಮವಾರ ಶಾಲೆ ಆರಂಭ, ಸಿಹಿಯೊಂದಿಗೆ ಮಕ್ಕಳಿಗೆ ಸ್ವಾಗತ
"ನಮ್ಮ ಶಕ್ತಿ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿದರೆ ವಿದ್ಯುತ್ ಮಾರಾಟದಿಂದ ಇನ್ನೂ ಹೆಚ್ಚು ಸಂಪಾದನೆ ಮಾಡಬಹುದು" ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳುತ್ತಾರೆ.
ಆದರೆ, ವಿದ್ಯುತ್ ಮಾರಾಟದಿಂದ ಆದಾಯ ಸಿಗುತ್ತದೆ ಎಂಬುದು ಸದಾ ಕಾಲ ಅನ್ವಯ ಆಗಲ್ಲ ಎಂಬುದನ್ನೂ ಸಚಿವರು ಒಪ್ಪಿಕೊಳ್ಳುತ್ತಾರೆ.
"ಮುಂಗಾರು ಮಳೆ ಕಡಿಮೆ ಆದರೆ ವಿದ್ಯುತ್ ಉತ್ಪಾದನೆ ಪ್ರಮಾಣ ಕುಸಿಯುತ್ತದೆ. ಅಂಥ ಸಂದರ್ಭದಲ್ಲಿ ನಮ್ಮ ಹಸಿರು ಶಕ್ತಿ ಕಾರಿಡಾರ್ನಲ್ಲಿ ಉತ್ಪಾದಿಸಲಾದ ಪ್ರತಿಯೊಂದು ಯೂನಿಟ್ ವಿದ್ಯುತ್ ಕೂಡ ನಮಗೆ ಅಗತ್ಯ ಬೀಳುತ್ತದೆ," ಎಂದು ಇಂಧನ ಸಚಿವ ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ, ಕರ್ನಾಟಕದ ವಿದ್ಯುತ್ಗೆ ಒಳ್ಳೆಯ ಬೇಡಿಕೆ ಇದೆ. ಹಸಿರು ಶಕ್ತಿ ಮೂಲಗಳಿಂದ ಉತ್ಪಾದಿಸಲಾದ ಹೆಚ್ಚುವರಿ ವಿದ್ಯುತ್ ಅನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ವಿದ್ಯುತ್ಗೆ ಬೇಡಿಕೆ ಇರುವುದರಿಂದ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಉಷ್ಣವಿದ್ಯುತ್ ಸ್ಥಾವರಗಳನ್ನು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಾಗುವ ರೀತಿಯಲ್ಲಿ ಸಿದ್ಧಪಡಿಸುವ ಆಲೋಚನೆಯಲ್ಲಿ ರಾಜ್ಯ ಸರಕಾರ ಇದೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಸುನೀಲ್ ಕುಮಾರ್, "ಇದು ಒಳ್ಳೆಯ ಲಾಭ ತಂದುಕೊಡುವ ಅವಕಾಶವಾಗಿದೆ. ಉಷ್ಣವಿದ್ಯುತ್ ಘಟಕದಿಂದ ವಿದ್ಯುತ್ ಮಾರಾಟ ಮಾಡುವ ಸಾಧ್ಯತೆಯನ್ನು ಪರಿಗಣಿಸಿದ್ದೇವೆ. ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video