ಇಲಾಖೆಯಲ್ಲಿ ಕಿರುಕುಳ ತಾಳಲಾರದೆ ಡಿಜಿಪಿಗೆ ಪತ್ರ ಬರೆದ ಡಿವೈಎಸ್ಪಿ
ಬೆಂಗಳೂರು, ಜು.7: ಪೊಲೀಸ್ ಇಲಾಖೆಯಲ್ಲಿ ಪೇದೆಗಳಿಗೆ ಉನ್ನತ ಅಧಿಕಾರಿಗಳು ಕಿರುಕುಳ ನೀಡುತ್ತಾರೆ ಎಂಬ ಆರೋಪ ಸರ್ವೇ ಸಾಮಾನ್ಯ, ಆದರೆ ಡಿವೈಎಸ್ಪಿ ಮಟ್ಟದ ಅಧಿಕಾರಿ ಒಂದು ದಿನದ ರಜೆಗಾಗಿ ಡಿಜಿಪಿಗೆ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ.
ಡಿವೈಎಸ್ಪಿ ಮಟ್ಟದ ಅಧಿಕಾರಿಯೊಬ್ಬರು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರಿಗೆ ಕಳೆದ ಡಿಸೆಂಬರ್ನಿಂದ ಈವರೆಗೆ ನಾಲ್ಕು ಪತ್ರಗಳನ್ನು ಬರೆದಿದ್ದು, ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಹೇಳಿಕೊಳ್ಳಲು ಪರದಾಡುತ್ತಿದ್ದಾರೆ.
ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline
ಅಷ್ಟೇ ಅಲ್ಲ ಆತ್ಮಹತ್ಯೆಗೆ ಒಳಗಾದ ಡಿವೈಎಸ್ ಎಂಕೆ ಗಣಪತಿ ಪ್ರಕರಣವನ್ನು ಪ್ರಸ್ತಾಪಿಸಿರುವ ಡಿವೈಎಸ್ಪಿ ಮೇಲಾಧಿಕಾರಿಗಳ ಕಿರುಕುಳ ಹಾಗೂ ಹಲವಾರು ನ್ಯೂನತೆಗಳ ಕುರಿತಂತೆ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಈ ಪತ್ರ ಈಗ ಬಹಿರಂಗಗೊಂಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಡಿವೈಎಸ್ಪಿ ತರಬೇತಿ ಕ್ಯಾಂಪ್ಗೆ ಬಿಟ್ಟುಬರಲು 1 ದಿನದ ರಜೆ ಸಿಗದೆ ಪರದಾಡಿದ್ದಾರೆ. 9 ದಿನಗಳ ಮಮೊದಲೇ ರಜೆಗೆ ಅರ್ಜಿ ಹಾಕಿದ್ದರೂ ಸಿಗಲಿಲ್ಲ, ರಜೆ ದೊರೆಯದ ಹಿನ್ನೆಲೆಯಲ್ಲಿ ಮೌಖಿಕವಾಗಿ ತಿಳಿಸಿ ಅಧಿಕಾರಿ ಹೋಗಿದ್ದರು, ಇದನ್ನು ಅಶಿಸ್ತು ಎಂದು ಪರಿಗಣಿಸಿ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿತ್ತು.
ಹೀಗಾಗಿ ಅಸಮಾಧಾನಗೊಂಡ ಡಿವೈಎಸ್ಪಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು ಕೆಲವರಿಗೆ ಮೂರ್ನಾಲ್ಕು ದಿನ ಹೊರಗಡೆ ಹೋಗಲು ಅನುಮತಿ ನೀಡಲಾಗಿತ್ತು ನನಗೇಕೆ ಹೀಗೆ ಎಂದು ಪ್ರಶ್ನಿಸಿದ್ದಾರೆ. ನೀಲಮಣಿರಾಜುಗೆ ಸರಿಯಾಗಿ ಕನ್ನಡ ಬಾರದೆ ಇರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದು, ಪತ್ರದಲ್ಲಿರುವುದನ್ನು ಓದಿ ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ ಹಾಗಾಗಿ ನೇರವಾಗಿ ಭೇಟಿಯಾಗಿ ಮಾತನಾಡಲು ಅವಕಾಶ ಕೊಡಿ ಎಂದು ಕೇಳಿದ್ದಾರೆ.
ಮಂಗಳೂರು ಐಜಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಅವರು ಮಡಿಕೇರಿಯ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ವಿಷಯಕ್ಕೆ ಸಂಬಂಧಿಸಿದಂತೆ ಸಹ ಪತ್ರದಲ್ಲಿ ಉಲ್ಲೇಖಿಸಿದ್ದು ಒಂದು ದಿನ ಮೊದಲೇ ಕ್ಲೀನ್ ಚಿಟ್ ನೀಡಿದ್ದರೆ ಅಂದು ಗಣಪತಿ ಬದುಕುತ್ತಿದ್ದರು ಎಂದಿದ್ದಾರೆ.
ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲೂ ಪ್ರಾಮಾಣಿಕ ತನಿಖೆ ನಡೆದಿಲ್ಲ, ಇಲಾಖೆಯಲ್ಲಿನ ಕಿರುಕುಳದಿಂದ ಇಂತಹ ಘಟನೆಗಳು ಸಂಭವಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.