ಜಿಂಕೆ ಬೇಟೆಯಾಡಿದ ಡಿವೈಎಸ್ಪಿ ಬಂಧನ
ಬಂಧಿತರನ್ನು ಮೈಸೂರು ಸಿಐಡಿ ವಿಭಾಗದ ಡಿವೈಎಸ್ಪಿ ಧರ್ಮೇಶ್ ಹಾಗೂ ಇವರ ಸ್ನೇಹಿತರಾದ ಮಹ್ಮದ್ ಹಮೀದ್, ಅತೀಕ್ ಅಹ್ಮದ್, ಫರೀದ್, ಮಂಜಯ್ಯ ಹಾಗೂ ರಘು ಎಂದು ಗುರುತಿಸಲಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದ ಓಂಕಾರ್ ವಲಯಕ್ಕೆ ಹೊಂದಿಕೊಂಡಿರುವ ನಂಜನಗೂಡು ತಾಲೂಕಿನ ಕೊತ್ತನಹಳ್ಳಿ ಸಮೀಪದ ತೋಟವೊಂದರಲ್ಲಿ ಇವರು ಮೋಜು ಮಸ್ತಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಈ ಸಮಯದಲ್ಲಿ ಇವರು, ಅರಣ್ಯದಂಚಿನಲ್ಲಿದ್ದ ಜಿಂಕೆಯೊಂದನ್ನು ಗನ್ನಿಂದ ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಅರಣ್ಯದಂಚಿನಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಶುಕ್ರವಾರ ಮುಂಜಾನೆ ಜಿಂಕೆಯನ್ನು ಗುಂಡು ಹೊಡುದು ಕೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಹಿರಿಯ ಅಧಿಕಾರಿಗಳು ಸುತ್ತ-ಮುತ್ತ ಪರಿಶೀಲನೆ ನಡೆಸಿದಾಗ, ಅರಣ್ಯಕ್ಕೆ ಹೊಂದಿಕೊಂಡಿರುವ ತೋಟದಲ್ಲಿ ಈ ಆರು ಮಂದಿ ಸಿಕ್ಕಿ ಬಿದ್ದಿದ್ದಾರೆ. ಇವರ ಬಳಿ ಒಂದು ಬ್ಯಾಟರಿ ಸಹಿತ ರೈಫಲ್, ಮತ್ತೊಂದು ಡಬಲ್ ಬ್ಯಾರೆಲ್ ಗನ್, ಎರಡು ಸೆಟ್ ಗುಂಡು ಪತ್ತೆಯಾಗಿವೆ.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯಂತೆ ಆರ್ಎಫ್ಒ ಸತೀಶ್ ಅವರ ನೇತೃತ್ವದಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ತೋಟಕ್ಕೆ ಆಗಮಿಸಿದ್ದ ಜೀಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಸಂಜೆ ಆರೋಪಿಗಳನ್ನು ನಂಜನಗೂಡು ಜೆಎಂಎಫ್ ಸಿ ನ್ಯಾಯಾಲಕ್ಕೆ ಹಾಜರು ಪಡಿಸಿ ನಂತರ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಜಿಂಕೆಯ ಮರಣೋತ್ತರ ಪರೀಕ್ಷೆಯಲ್ಲಿ ಜಿಂಕೆಗೆ ಗುಂಡು ನುಗ್ಗುವಾಗ 4 ಇಂಚು ಅಗಲ, ಹೊರ ಬರುವಾಗ 19 ಇಂಚು ಸೀಳಿದೆ ಎಂದು ವರದಿ ನೀಡಲಾಗಿದೆ.