ನಾನು ಬದುಕಿರಲು ಕಾರಣ ಜಾಫರ್ ಷರೀಫ್ : ದ್ವಾರಕೀಶ್
ಬೆಂಗಳೂರು, ನವೆಂಬರ್ 26 : 'ನಾನು ಇವತ್ತು ಬದುಕಿರಲು ಕಾರಣ ಜಾಫರ್ ಷರೀಫ್' ಎಂದು ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಹೇಳಿದ್ದಾರೆ. ಜಾಫರ್ ಷರೀಫ್ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದಿದೆ.
ನವೆಂಬರ್ 25ರಂದು ಚಳ್ಳಕೆರೆ ಕರೀಂ ಜಾಫರ್ ಷರೀಫ್ (ಸಿ.ಕೆ.ಜಾಫರ್ ಷರೀಫ್) ವಿಧಿವಶರಾದರು. ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಫರೀಷ್ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ರೈಲ್ವೇ ಖಾತೆ ಸಚಿವರಾಗಿದ್ದ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಪರಿಚಯ
ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಸಹ ಜಾಫರ್ ಷರೀಫ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪತ್ನಿ ಅಂಬುಜಾ ಜೊತೆಗೆ ಜಾಫರ್ ಷರೀಫ್ ನಿವಾಸಕ್ಕೆ ತೆರಳಿ ಅಂತಿಮ ನಮನವನ್ನು ಸಲ್ಲಿಸಿ ಬಂದಿದ್ದಾರೆ.
ಕೇಂದ್ರದ ಮಾಜಿ ಸಚಿವ ಜಾಫರ್ ಷರೀಫ್ ನಿಧನ
'ನನಗೆ ಗಾಡ್ಫಾದರ್ ಎಂದು ಇದ್ರೆ ಅದು ಜಾಫರ್ ಷರೀಫ್. ನಾನು ಇವತ್ತು ಬದುಕಿರಲು ಅವರೇ ಕಾರಣ' ಎಂದು ದ್ವಾರಕೀಶ್ ನೆನಪು ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ. ದ್ವಾರಕೀಶ್ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದವರು ಜಾಫರ್ ಷರೀಫ್.
ಜಾಫರ್ ಷರೀಫ್ ಚಳ್ಳಕೆರೆ ಗ್ರಾಮದ ದೊಡ್ಡೇರಿ ಗ್ರಾಮದ ಸಿ.ಅಬ್ದುಲ್ ಕರೀಮ್ ಅವರ ಪುತ್ರ. ದ್ವಾರಕೀಶ್ ಅವರ ಪತ್ನಿ ಅಂಬುಜಾ ಸಹ ಅದೇ ಊರಿನವರು. ಜಾಫರ್ ಷರೀಫ್ ಮತ್ತು ಅಂಬುಜಾ ಅವರು ಹೋಗೋ ಬಾರೋ ಎಂದು ಮಾತನಾಡಿಸುತ್ತಿದ್ದರು.
'ಜಾಫರ್ ಷರೀಫ್ ಸಾಕಷ್ಟು ಕೆಲಸ ಮಾಡಿದ್ದಾರೆ. ಬಹಳ ಜನರಿಗೆ ಸಹಾಯ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಅವರ ಜೊತೆ ಪೋನ್ನಲ್ಲಿ ಮಾತನಾಡಿದ್ದೆ. ಇವತ್ತು ಒಬ್ಬ ದೊಡ್ಡ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ' ಎಂದು ದ್ವಾರಕೀಶ್ ನೆನಪು ಮಾಡಿಕೊಂಡಿದ್ದಾರೆ.