ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ ಕೇಂದ್ರ ಮಂತ್ರಿ ಡಿ.ವಿ. ಸದಾನಂದಗೌಡರ ಆ ಹೇಳಿಕೆ!
ಬೆಂಗಳೂರು, ಮಾ. 12: ರಾಜ್ಯದಲ್ಲಿ 'ಸಿಡಿ' ಪ್ರಕರಣ ಉತ್ತಂಗದಲ್ಲಿರುವಾಗಲೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಆ ಹೇಳಿಕೆ ಬಿಜೆಪಿಯಲ್ಲಿ ತೀವ್ರ ಸಂಚಲನವನ್ನು ಉಂಟುಮಾಡಿದೆ. ನಾಯಕತ್ವ ಬದಲಾವಣೆ ಕುರಿತು ಮೊದಲ ಬಾರಿ ಮಾತನಾಡಿದ್ದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು.
ಬಿಜೆಪಿ ಹೈಕಮಾಂಡ್ಗೂ ಸಿಎಂ ಯಡಿಯೂರಪ್ಪ ಅವರನ್ನು ಸಂಬಾಳಿಸಿ ಸಾಕಾಗಿ ಹೋಗಿದೆ. ಹೀಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ ಎಂದು ಬಹಿರಂಗವಾಗಿಯೇ ಶಾಸಕ ಯತ್ನಾಳ್ ಅವರು ವಿಜಯಪುರದಲ್ಲಿ ಹೇಳಿಕೆ ಕೊಟ್ಟಿದ್ದರು.
ಅದಾದ ಬಳಿಕ ಬಹಳಷ್ಟು ಬೆಳವಣಿಗೆಗಳು ರಾಜ್ಯ ಬಿಜೆಪಿಯಲ್ಲಿ ನಡೆದಿವೆ. ಜೊತೆಗೆ ಶಾಸಕ ಯತ್ನಾಳ್ ಅವರು 'ಸಿಡಿ' ಕುರಿತು ಮಾತನಾಡಿದ್ದರು. ಅವರು ಹೇಳಿರುವ 'ಸಿಡಿ' ಇದು ಹೌದೋ ಅಲ್ಲವೋ ಬೇರೆ ಮಾತು, ಆದರೆ 'ಸಿಡಿ' ಬಿಡುಗಡೆ ಆಗಿದ್ದು, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಅದರೊಂದಿಗೆ ಇದೀಗ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಅಧಿಕೃತ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲವನ್ನುಂಟು ಮಾಡಿದೆ. ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು?
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣ
ರಾಜ್ಯದಲ್ಲಿ ಮೈತ್ರಿ ಸರ್ಕಾರದ ಪತನ, ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಬಹಳಷ್ಟು ಪ್ರಭಾವಿಗಳು ತೆರೆಮರೆಯಲ್ಲಿದ್ದುಕೊಂಡು ಶ್ರಮಿಸಿದ್ದಾರೆ. ಅವರಲ್ಲೊಬ್ಬರು ಹಾಲಿ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು. ಆಗ ರೆಬೆಲ್ ಆಗಿದ್ದ ಶಾಸಕರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು, ಆರಂಭದಲ್ಲಿ ಅವರೆಲ್ಲರ ಮನವೊಲಿಸಿದ್ದು ಡಾ. ಅಶ್ವಥ್ ನಾರಾಯಣ ಎಂಬ ಮಾಹಿತಿಯಿದೆ. ಅದು ಬಿಜೆಪಿ ಹೈಕಮಾಂಡ್ಗೂ ಗೊತ್ತಿತ್ತು. ಹೈಕಮಾಂಡ್ಗೆ ಎಲ್ಲ ಮಾಹಿತಿ ಕೊಟ್ಟೇ ಡಾ. ಅಶ್ವಥ್ ನಾರಾಯಣ ಅವರು ಮಾತುಕತೆ ನಡೆಸಿದ್ದರು. ಆದರೆ ಈ ವರೆಗೂ ಅದು ಎಲ್ಲಿಯೂ ಬಹಿರಂಗವಾಗಿಲ್ಲ.
ಗುಟ್ಟಾಗಿಯೆ ಕೆಲಸ ಮುಗಿಸಿದ್ದ ಡಾ. ಅಶ್ವಥ್ ನಾರಾಯಣ
ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಡಾ. ಅಶ್ವಥ್ ನಾರಾಯಣ ಅವರು ಪ್ರಮುಖ ಕಾರಣ. ಆದರೆ ಅವರೆಂದೂ ಆ ಬಗ್ಗೆ ಮಾತನಾಡಲೇ ಇಲ್ಲ. ಬಡಾಯಿ ಕೊಚ್ಚಿಕೊಳ್ಳಲೂ ಇಲ್ಲ. ಆದರಿಂದ ಡಾ. ಅಶ್ವಥ್ ನಾರಾಯಣ ಅವರಿಗೆ ಡಿಸಿಎಂ ಹುದ್ದೆ ಒಲಿದಿದ್ದು ಹೇಗೆ? ಎಂಬ ಜಿಜ್ಞಾಸೆ ಜನರಲ್ಲಿದೆ. ಬಿಜೆಪಿಯಲ್ಲಿನ ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಆರ್. ಅಶೋಕ್ ಅವರನ್ನು ಹಿಂದಿಕ್ಕಿ ಡಾ. ಅಶ್ವಥ್ ನಾರಾಯಣ ಅವರು ಡಿಸಿಎಂ ಸ್ಥಾನ ಪಡೆದಿದ್ದಾರೆ. ಅದಕ್ಕೆ ಕಾರಣ ಅವರಿಗೆ ವಹಿಸುವ ಕೆಲಸವನ್ನು ಸೈಲೆಂಟ್ ಆಗಿ ಮಾಡಿ ಮುಗಿಸುವುದು.
ಪಕ್ಷದ ವರ್ಚಸ್ಸಿಗೆ ಧಕ್ಕೆ ತರದಂತೆ ಕೆಲಸ
ಡಾ. ಅಶ್ವಥ್ ನಾರಾಯಣ ಅವರಿಗೆ ಡಿಸಿಎಂ ಹುದ್ದೆ ಸಿಗಲು ಕಾರಣ ಅವರ ಪಕ್ಷನಿಷ್ಠೆ ಎಂಬುದು ಎರಡನೇ ಕಾರಣವಾದರೆ, ಮೊದಲನೇ ಕಾರಣ ಸರ್ಕಾರ ಅಸ್ತಿತ್ವಕ್ಕೆ ಬರಲು ಬೇರೆ ಪಕ್ಷಗಳ ಶಾಸಕರೊಂದಿಗೆ ಮಾತಕತೆ ನಡೆಸಿ ಅವರಿಗೆ ಭರವಸೆ ಕೊಡುವ ಮೂಲಕ ಪಕ್ಷಕ್ಕೆ ಸೆಳೆದಿದ್ದು. ಆದರೆ ಅವರ ಎಲ್ಲ ಕೆಲಸಗಳು ತೆರೆಮರೆಯಲ್ಲಿಯೇ ನಡೆದು ಹೋದವು. ಆದರೆ ಬಿಜೆಪಿ ಹೈಕಮಾಂಡ್ ಡಾ. ಅಶ್ವಥ್ ನಾರಾಯಣ ಅವರನ್ನು ಗುರುತಿಸಿತು. ಆಪರೇಷನ್ ಕಮಲದ ಬಹುಮುಖ್ಯ ಕೆಲಸಗಳನ್ನು ಯಾರಿಗೂ ಗೊತ್ತಾಗದಂತೆ ಡಾ. ಅಶ್ವಥ್ ನಾರಾಯಣ ಅವರು ಮಾಡಿ ಮುಗಿಸಿದ್ದರು. ಪಕ್ಷದ ವರ್ಚಸ್ಸಿಗೆ ಧಕ್ಕೆ ತರದಂತೆ ತಮ್ಮ ಕೆಲಸವನ್ನು ಮಾಡಿ ಮುಗಿಸಿದ್ದರು.
ಸಂಚಲನ ಮೂಡಿಸಿದೆ ಸದಾನಂದಗೌಡರ ಆ ಮಾತು!
ಇಷ್ಟೆಲ್ಲ ಆದ ಬಳಿಕ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಆಡಿರುವ ಆ ಮಾತಿನಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಹಾ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ ಸದಾನಂದಗೌಡ ಅವರು ನೀಡರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಅತ್ಯುತ್ತಮ ಕರ್ತವ್ಯ ಪ್ರಜ್ಞೆ ಹಾಗೂ ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ನಿಷ್ಠೆಯಿಂದ ಕೆಲಸ ಮಾಡಿಕೊಂಡು ಹೋಗುತ್ತಿರುವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರ ಪದವಿ ಮುಂದಿರುವ ʼಉಪʼ ಹೋಗಿ ಆದಷ್ಟು ಬೇಗ ʼಮುಖ್ಯಮಂತ್ರಿʼ ಎಂಬ ಪದನಾಮ ಬರುವಂತಾಗಲಿ. ಅದಕ್ಕೆ ಬೇಕಾದ ಎಲ್ಲ ಕೃಪೆ-ಚೈತನ್ಯವನ್ನು ಆ ಪರಮಶಿವ ನೀಡಲಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಹೇಳಿದ್ದಾರೆ.
Recommended Video
ನಾಯಕತ್ವ ಬದಲಾವಣೆ ಕುರಿತು ಮಾತನಾಡಿದರಾ?
ಹೊತ್ತಲ್ಲದ ಹೊತ್ತಿನಲ್ಲಿ ಕೇಂದ್ರ ಸಚಿವ ಡಿವಿಎಸ್ ಅವರ ಹೇಳಿಕೆ ಬಿಜೆಪಿಯಲ್ಲಿ ಚರ್ಚೆ ಹುಟ್ಟುಹಾಕಿದೆ. ಡಾ. ಅಶ್ವಥ್ ನಾರಾಯಣ ಅವರು ಡಿಸಿಎಂ ಹುದ್ದೆಯಿಂದ ಸಿಎಂ ಹುದ್ದೆಗೆ ಏರಲಿ ಎಂದು ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿರುವುದು ರಾಜ್ಯ ಬಿಜೆಪಿ ನಾಯಕರಲ್ಲ, ಕೇಂದ್ರದಲ್ಲಿ ಪ್ರಭಾವಿ ಸಚಿವಸ್ಥಾನ ಹೊಂದಿರುವ ಹಾಗೂ ಹೈಕಮಾಂಡ್ಗೆ ಹತ್ತಿರವಾಗಿರುವ ನಾಯಕರು.
ಹೀಗಾಗಿ ಹೈಕಮಾಂಡ್ ಮುಂದಿನ ನಡೆಯನ್ನು ಸದಾನಂದಗೌಡರು ಪರೋಕ್ಷವಾಗಿ ಹೇಳಿದ್ದಾರೆ. ಆ ಬಗ್ಗೆ ಚರ್ಚೆ ನಡೆದ ಬಳಿಕ ಹೈಕಮಾಂಡ್ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ಚರ್ಚೆ ಇದೀಗ ಬಿಜೆಪಿಯಲ್ಲಿ ಶುರುವಾಗಿದೆ.
ಒಟ್ಟಾರೆ ಸದಾನಂದಗೌಡ ಅವರು ಸುಮ್ಮನೇ ನೀವು ಸಿಎಂ ಆಗುತ್ತೀರಿ ಎಂದು ಹೇಳುವವರಲ್ಲ. 'ಸಿಡಿ' ಪ್ರಕರಣದಲ್ಲಿ ಸಿಡಿಮಿಡಿಗೊಂಡಿದ್ದ ಸದಾನಂದಗೌಡರು, ಇದೀಗ ಆದಷ್ಟು ಬೇಗೆ ಡಾ. ಅಶ್ವಥ್ ನಾರಾಯಣ 'ಮುಖ್ಯಮಂತ್ರಿ' ಎಂದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.