'ಸ್ಮೈಲ್ ಪ್ಲೀಸ್' ಎನ್ನುತ್ತಿದ್ದ ಫೋಟೋಗ್ರಾಫರ್ ಗಳ ಸ್ಮೈಲ್ ಕಿತ್ತುಕೊಂಡ ಮಹಾಮಾರಿ ಕೊರೊನಾ
ಫೋಟೋಗ್ರಾಫರ್ ಗಳಿಗೆ ವರ್ಷದ ಎಲ್ಲದಿನವೂ ಕೆಲಸ ಇರುವುದಿಲ್ಲ. ವರ್ಷದಲ್ಲಿ ಮಳೆಗಾಲ, ಅಧಿಕ ಮಾಸ, ಪಿತೃಪಕ್ಷ ಎಂದೆಲ್ಲಾ ಹೋದರೆ ಉಳಿದ ಕೆಲವು ತಿಂಗಳುಗಳು ಮಾತ್ರ ಇವರುಗಳಿಗೆ ಸೀಸನ್.
ಪ್ರಮುಖವಾಗಿ, ಮದುವೆ, ಮುಂಜಿ ಮುಂತಾದ ಶುಭಕಾರ್ಯಗಳು ನಡೆಯುವುದು ಬೇಸಿಗೆ ಅಥವಾ ನವರಾತ್ರಿಯ ವೇಳೆ. ಅದರಲ್ಲೂ ಪ್ರಮುಖವಾಗಿ ಮಾರ್ಚ್ ನಿಂದ ಜೂನ್ ಆರಂಭದವರಿಗೆ ಹಲವು ಕಾರ್ಯಕ್ರಮಗಳು ನಡೆಯುವುದರಿಂದ, ವರ್ಷದ ಸಂಪಾದನೆಯನ್ನೆಲ್ಲಾ ಈ ತಿಂಗಳುಗಳಲ್ಲೇ ದುಡಿದು ಬಿಡುವ ಅನಿವಾರ್ಯತೆ ಈ ವರ್ಗದ್ದು.
ಸಾವಿನಲ್ಲೂ 'ವಿಶ್ವದ ದೊಡ್ಡಣ್ಣ' ಮುಂದು, ಇಟಲಿ ಹಿಂದಿಕ್ಕಿದ ಅಮೆರಿಕ
ಮದುವೆ ಮುಂತಾದ ಶುಭ ಕಾರ್ಯಗಳ ಜೊತೆ, ರಾಜ್ಯದ ಕರಾವಳಿ ಭಾಗದಲ್ಲಿ ಬ್ರಹ್ಮಕಲಶ, ನಾಗಮಂಡಲ, ಢಕ್ಕೆಬಲಿ, ಕೋಲ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್-ಮೇ ತಿಂಗಳ ವೇಳೆ ಯಥೇಚ್ಚವಾಗಿ ನಡೆಯುತ್ತದೆ. ಆದರೆ, ಈ ಬಾರಿಯ ಸೀಸನ್ ಅವರ ಆದಾಯದ ಮೂಲಕ್ಕೇ ಬೆಂಕಿ ಹಚ್ಚಿದೆ. ಕಾರಣ, ಕೊರೊನಾ..ಕೊರೊನಾ..
ಈ ದರಿದ್ರ ಮಾರಿ, ಶ್ರಮಿಕ ವರ್ಗ, ಕೂಲಿ, ದೈನಂದಿನ ವ್ಯಾಪರಸ್ಥರಿಗೆ ಹೇಗೆ ಸಮಸ್ಯೆಯನ್ನು ಉಂಟು ಮಾಡಿದೆಯೋ, ಅದೇ ರೀತಿ ಫೋಟೋಗ್ರಾಫರ್ ಗಳಿಗೆ ಕೂಡಾ. ಯಾಕೆಂದರೆ, ಕೊರೊನಾ ವಕ್ಕರಿಸಿಕೊಂಡಿರುವ ಸಮಯವೇ ಅಂತದ್ದು. ಬೇರೆ ವರ್ಗದವರಿಗಾದರೂ, ಸರಕಾರದಿಂದ, ಸಂಘ ಸಂಸ್ಥೆಗಳಿಂದ ಒಂದಷ್ಟು ಸಹಾಯ ಬರಬಹುದು, ಆದರೆ, ಫೋಟೋಗ್ರಾಫಿಯನ್ನೇ ನಂಬಿಕೊಂಡವರಿಗೆ?
ಹೈಎಂಡ್ ಕ್ಯಾಮರಾಗಳನ್ನು ಇಟ್ಟುಕೊಂಡು, ಪೈಪೋಟಿ ನೀಡಬೇಕಾಗಿರುವ ಕಾಲವಿದು. ಹಾಗಾಗಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ, ವೃತ್ತಿ ಬದುಕನ್ನು ಗಟ್ಟಿ ಮಾಡಿಕೊಳ್ಲಬೇಕು ಎನ್ನುವ ಇವರಿಗೆ, ಪ್ರಮುಖ ಆದಾಯ ಬರುವ ತಿಂಗಳುಗಳಲ್ಲೇ ಮನೆಯಲ್ಲಿ ಕೂರುವ ಪರಿಸ್ಥಿತಿ ಬಂದರೆ, ಹೇಗಾಗಿರಬೇಡ.
ಕೊರೊನಾ ವೈರಸ್: ಜಗತ್ತಿಗೆ ಚೀನಾ ಮುಚ್ಚಿಟ್ಟ ನಾಲ್ಕು ಭಯಾನಕ ಸುಳ್ಳುಗಳು
ಏಪ್ರಿಲ್ ಹದಿನಾಲ್ಕರವರೆಗೆ ಇದ್ದ ಲಾಕ್ ಡೌನ್, ಏಪ್ರಿಲ್ ಮೂವತ್ತರವರೆಗೆ ಮುಂದೂಡಲ್ಪಟ್ಟಿದೆ. ಯಾವುದೇ ಶುಭ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದೆಂದು ಸರಕಾರ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಸರಕಾರದ ಆದೇಶವನ್ನು ಪಾಲಿಸಲೇ ಬೇಕಾದ ಆರೋಗ್ಯ ತುರ್ತುಪರಿಸ್ಥಿತಿಯ ಕಾಲವಿದು.
ಹಾಗಾಗಿ, ಲಕ್ಷಾಂತರ ರೂಪಾಯಿ ವ್ಯಯಿಸಿ ಖರೀದಿಸಿದ ಕ್ಯಾಮರಾಗಳನ್ನು ದಿನಾ ಬ್ಯಾಗಿನಿಂದ ಹೊರಗೆ ತೆಗೆದು, ಧೂಳು ವರೆಸಿ, ಮತ್ತೆ ಬ್ಯಾಗಿನಲ್ಲೇ ಭದ್ರವಾಗಿ ಇಡಬೇಕಾದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ ಫೋಟೋಗ್ರಾಫರ್ ಗಳು. ಕೊರೊನಾ ಯಾವಾಗ ತೊಲಗುತ್ತದೆ ಎನ್ನುವ ಯಾವ ಖಚಿತೆತೆಯೂ ಇಲ್ಲದಿರುವ ಈ ಸಮಯದಲ್ಲಿ, ಪ್ರಸಕ್ತ ವರ್ಷದ ಸೀಸನ್ ಇವರುಗಳ ಪಾಲಿಗೆ ಆಶಾದಾಯಕವಾಗಿಲ್ಲ.
ಮಾರ್ಚ್ 15ರಿಂದ ಏಪ್ರಿಲ್ 30ರ ವರೆಗಿನ ಎಲ್ಲಾ ಕಾರ್ಯಕ್ರಮಗಳು ರದ್ದಾಗಿವೆ. ಕಲ್ಯಾಣ ಮಂಟಪ ಬುಕ್ ಮಾಡಿದವರು ಕ್ಯಾನ್ಸಲ್ ಮಾಡಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ಫೋಟೋಗ್ರಾಫರ್ ಗಳ ಎಲ್ಲಾ ದೊಡ್ಡ ಆರ್ಡರ್ ಗಳೂ ಕ್ಯಾನ್ಸಲ್ ಆಗಿವೆ.
ಗ್ರೂಪ್ ಫೋಟೋ, ಫ್ಯಾಮಿಲಿ ಫೋಟೋ, ಸಿಂಗಲ್ ಫೋಟೋ, ನವವಧುವರರ ಫೋಟೋಗಳನ್ನು ವಿವಿಧ ಭಂಗಿಗಳಲ್ಲಿ 'ಸ್ಮೈಲ್ ಪ್ಲೀಸ್' ಎಂದು ಕ್ಲಿಕ್ಕಿಸುತ್ತಿದ್ದ ಫೋಟೋಗ್ರಾಫರ್ ಗಳು, ಮುಂದೇನು ಎಂದು ತಲೆಮೇಲೆ ಕೈಹೊತ್ತು ಕೂತಿದ್ದಾರೆ.
ದೇವಪ್ರಶ್ನೆಯ ಮೂಲಕ ಸ್ವಾಮಿಯ ಒಪ್ಪಿಗೆ: ಧರ್ಮಸ್ಥಳ ದೇವಾಲಯದ ಪ್ರಕಟಣೆ
ಪ್ರಪಂಚಕ್ಕೆ ಎದುರಾಗಿರುವ ಕೊರೊನಾ ಪೀಡೆಯಿಂದ ಜಗತ್ತು ಹೊರಬಂದು, ಮುಂದಿನ ದಸರಾ/ನವರಾತ್ರಿಯ ವೇಳೆಯಲ್ಲಾದರೂ, ಶುಭ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ನಡೆದು ಫೋಟೋಗ್ರಾಫರ್ ಗಳು ಕೂಡಾ 'ಸ್ಮೈಲಿನಿಂದ ಬದುಕುವಂತಾಗಲಿ' ಎನ್ನುವುದು ಎಲ್ಲರ ಆಶಯ.