ಕನ್ನಡಕ್ಕೆ ಡಬ್ ಆದ ಸತ್ಯದೇವ್ ಐಪಿಎಸ್ ರಾಜ್ಯಾದ್ಯಂತ ತೆರೆ
ಬೆಂಗಳೂರು, ಮಾರ್ಚ್ 03 : ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ 'ಸತ್ಯದೇವ್ ಐಪಿಎಸ್' ಚಿತ್ರ ಕರ್ನಾಟಕದಾದ್ಯಂತ 90ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ನಲವತ್ತು ವರ್ಷಗಳ ನಿಷೇಧದ ನಂತರ ಅಧಿಕೃತವಾಗಿ ಬಿಡುಗಡೆಯಾಗುತ್ತಿರುವ ಡಬ್ಬಾಗಿರುವ ಚಿತ್ರವಿದು.
ಡಬ್ಬಿಂಗ್ ವಿಷಯ ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ಪಂಗಡ, ಡಬ್ಬಿಂಗ್ ಗೆ ಅವಕಾಶ ಕೊಟ್ಟಿದ್ದರಿಂದ ಕನ್ನಡದ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ವಾದಿಸುತ್ತಿದ್ದರೆ, ಡಬ್ಬಿಂಗ್ ಗೆ ಅವಕಾಶ ನೀಡಿದರೆ ಕನ್ನಡ ಚಿತ್ರರಂಗ ಎಕ್ಕುಟ್ಟಿ ಹೋಗುತ್ತದೆ ಎಂದು ಮತ್ತೊಂದು ಬಣ ಪ್ರತಿವಾದಿಸುತ್ತಿದೆ.[ಡಬ್ಬಿಂಗ್ ವಿರುದ್ಧ ದನಿಯೆತ್ತಿದ ಜಗ್ಗೇಶ್, ವಾಟಾಳ್ ನಾಗರಾಜ್]
ಈ ಎಲ್ಲ ಬಿಸಿಬಿಸಿ ಚರ್ಚೆ, ಚಕಮಕಿ ಎಬ್ಬಿಸುವಂಥ ವಾದವಿವಾದ, ಬಿಡುಗಡೆಯಾದರೆ ಥಿಯೇಟರುಗಳಿಗೆ ಬೆಂಕಿ ಹಚ್ಚುತ್ತೇವೆ ಎಂಬ ಬೆದರಿಕೆ, ಅದ್ಹ್ಯಾಗೆ ಬೆಂಕಿ ಹಚ್ತೀರ ನೋಡೇಬಿಡ್ತೀವಿ ಎಂಬ ತೊಡೆತಟ್ಟುವಂತಹ ಹೇಳಿಕೆಗಳ ನಡುವೆ 'ಸತ್ಯದೇವ್ ಐಪಿಎಸ್' ತೆರೆಕಂಡಿದೆ.[ಡಬ್ಬಿಂಗ್ ಬೇಕಾ? ಬೇಡ್ವಾ? ಮುಗಿಯದ ರಗಳೆಗೆ ಪರಿಹಾರ ಇಲ್ಲಿದೆ]
ಚಿತ್ರದಲ್ಲಿ ಸ್ಫುರದ್ರುಪಿ ನಟ ಅಜೀತ್, ಕುಡ್ಲದ ಬೆಡಗಿ ಅನುಷ್ಕಾ ಶೆಟ್ಟಿ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಚಿತ್ರಮಂದಿರ ಸಿಕ್ಕಿಲ್ಲ ಎಂಬ ಕಾರಣ ನೀಡಿ ಬಿಡುಗಡೆಯನ್ನು ಮುಂದೂಡಲಾಗಿದೆ. ಬೆಂಗಳೂರಿನಲ್ಲೇನಾದರೂ ಬಿಡುಗಡೆಯಾದರೆ ಥಿಯೇಟರಿಗೆ ಬೆಂಕಿ ಹಚ್ಚುತ್ತೇನೆ ಎಂದು ಜಗ್ಗೇಶ್ ಬೆದರಿಕೆ ಹಾಕಿದ್ದರು.[ಡಬ್ಬಿಂಗ್ ಮೇಲಿದ್ದ ನಿಷೇಧ ತೆರವು, ಮುಂದೇನು?]
ಕನ್ನಡ ಚಿತ್ರರಂಗಕ್ಕಿಂದ ಐತಿಹಾಸಿಕ ಮತ್ತು ನೆನಪಿನಲ್ಲುಳಿಯುವ ದಿನ ಕೂಡ. ಇದೇ ದಿನ 1934ರಂದು, ವೈವಿ ರಾವ್ ನಿರ್ದೇಶನದ ಕನ್ನಡದ ಮೊಟ್ಟಮೊದಲ ಟಾಕಿ ಚಿತ್ರ 'ಸತಿ ಸುಲೋಚನಾ' ಬಿಡುಗಡೆಯಾಗಿತ್ತು. ಈ ದಿನವನ್ನು 'ಕನ್ನಡ ಚಿತ್ರರಂಗದ ದಿನ'ವನ್ನಾಗಿಯೂ ಆಚರಿಸಲಾಗುತ್ತಿದೆ. ಕಾಕತಾಳೀಯವೆಂಬಂತೆ, ಇದೇ ದಿನ ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ ಚಿತ್ರ ಬಿಡುಗಡೆಯಾಗುತ್ತಿದೆ.
ಡಬ್ಬಿಂಗ್ ಗೆ ಅವಕಾಶ ನೀಡಿರುವುದು ಸರೀನಾ? ಡಬ್ಬಿಂಗ್ ಕನ್ನಡ ಚಿತ್ರಗಳಿಗೆ ಮಾತ್ರ ಸೀಮಿತವಾಗಿರಬೇಕೆ? ಇದರಿಂದ ಕನ್ನಡಕ್ಕೆ ಆಗುವ ಸಾಧಕ ಬಾಧಕಗಳೇನು? ನಿಮ್ಮ ಅಭಿಪ್ರಾಯವೇನು? [ಕನ್ನಡಕ್ಕೂ ಅಪ್ಪಳಿಸಿದ ತಮಿಳಿನ 'ಕಾಷ್ಮೋರ']