ಧೋಧೋ ಸುರಿವ ಮಳೆಯಲ್ಲಿ ಕುಡಿದ ಯುವಕನ ರಂಪಾಟ
ಮಡಿಕೇರಿ, ಜೂನ್ 24 : ಧೋಧೋ ಸುರಿವ ಮಳೆಯಲ್ಲಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದ ಯುವಕನೊಬ್ಬ, ಅಡ್ಡಾದಿಡ್ಡಿ ಬೈಕನ್ನು ರಭಸದಿಂದ ಓಡಾಡಿಸಿ, ವಾಹನಗಳನ್ನು ಅಡ್ಡಗಟ್ಟಿ ದಾಂಧಲೆ ನಡೆಸಿದ ಘಟನೆ ನಗರದಲ್ಲಿ ಗುರುವಾರ ನಡೆದಿದೆ. ಇದು ಕೆಲವರಿಗೆ ಆತಂಕ ತಂದರೆ, ಉಳಿದವರಿಗೆ ಭರ್ತಿ ಮನರಂಜನೆಯಂತೆ ಕಂಡಿತು.
"2001ರಲ್ಲಿ ಗೌಳಿಬೀದಿಯ ದಸರಾ ಮಂಟಪಕ್ಕೆ ಕಲಾಕೃತಿ ಮಾಡಿದ ಹಣ ನೀಡದೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಣ ನೀಡಿಲ್ಲ. ಅಲ್ಲದೆ, ದಸರಾ ಸಮಿತಿಯ ಯುವಕರು ಹಲ್ಲೆ ಮಾಡಿದ್ದಾರೆ. ಠಾಣಾಧಿಕಾರಿ ಕೂಡ ಕಿರುಕುಳ ನೀಡುತ್ತಿದ್ದಾರೆ. ಸಿಗರೇಟ್ ಸೇದಿದಕ್ಕೆ ಕೆಲವು ಪೊಲೀಸ್ ಸಿಬ್ಬಂದಿಗಳು ಮೊಬೈಲ್ ಕಿತ್ತುಕೊಂಡು ತೊಂದರೆ ನೀಡುತ್ತಿದ್ದಾರೆ. ಒಟ್ಟು 12 ಮಂದಿಯಿಂದ ನನಗೆ ನೋವುಂಟಾಗಿದ್ದು, ಒಂದೋ ಇವರೊಂದಿಗೆ ಹೊಡೆದಾಡಿ ವೀರ ಮರಣ ಹೊಂದುತ್ತೇನೆ. ಇಲ್ಲವಾದಲ್ಲಿ ಜೀವಂತ ಸಮಾಧಿ ಮಾಡಿಕೊಳ್ಳುತ್ತೇನೆ" ಎಂದು ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದ ಯುವಕನೇ ಗಲಾಟೆ ಸೃಷ್ಟಿಸಿದ್ದು. [ಹೆಣ್ಣಿನ ಆಶೆಗೆ ಬಿದ್ದವರನ್ನು ಏನು ಮಾಡ್ತಿದ್ದರು ಗೊತ್ತಾ?]
ಸುದರ್ಶನ ಬಡಾವಣೆಯ ನಿವಾಸಿ ಸಂದೀಪ್ ಈ ರೀತಿಯ ವಿಚಿತ್ರ ವರ್ತನೆ ಮಾಡಿದವನು. ಈತ ಕೆಲದಿನಗಳ ಹಿಂದೆ ದೂರು ನೀಡಲು ಹೋದಾಗ ನಗರಠಾಣಾ ಪೊಲೀಸರು ಹಲ್ಲೆ ಮಾಡಿದ್ದರೆಂದು ಆರೋಪಿಸಿದ್ದ. ಇದನ್ನು ವಿರೋಧಿಸಿ ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತದಲ್ಲಿ ಒಂದೆರಡು ಬ್ಯಾನರ್ಗಳನ್ನು ಅಳವಡಿಸಿ ದಿಢೀರ್ ಪ್ರತಿಭಟನೆಗೆ ಇಳಿದಿದ್ದ.
ಚಾಕಲೇಟಿಸಂ ಎಂದು ಹೇಳಿಕೊಳ್ಳುತ್ತಾ ಸಾರ್ವಜನಿಕರಿಗೆ ಸಂದೀಪ್ ಚಾಕಲೇಟ್ಗಳನ್ನು ಹಂಚ ತೊಡಗಿದನು. ರಸ್ತೆ ನಡುವೆ ಮಾಡಿದ ಈತನ ಹುಚ್ಚಾಟದಿಂದ ಕೆಲಕಾಲ ಟ್ರಾಫಿಕ್ ಜಾಮ್ನ್ನು ಎದುರಿಸಬೇಕಾಯಿತು. ಕುಡಿದ ಅಮಲಿನಲ್ಲಿದ್ದ ಆತನ ಮನವೊಲಿಸುವ ಪ್ರಯತ್ನವನ್ನು ಪೊಲೀಸ್ ಅಧಿಕಾರಿಗಳು ಮಾಡಿದರು. [ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್]
ಸುರಿಯುವ ಮಳೆಯಲ್ಲಿ ಈತನ ವಿಚಿತ್ರ ವರ್ತನೆ ಕೆಲವರಿಗೆ ಅಚ್ಚರಿ ತಂದರೆ, ಮತ್ತೆ ಕೆಲವರು ಮನೋರಂಜನೆ ಎಂಬಂತೆ ನೋಡಿದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ವೃತ್ತ ನಿರೀಕ್ಷಕ ಐ.ಪಿ. ಮೇದಪ್ಪ, ಸಂದೀಪ್ನ ಮನವೊಲಿಸಿ ಠಾಣೆಗೆ ಬಂದು ಮಾತನಾಡುವಂತೆ ತಿಳಿಸಿದರು.
ತನ್ನ ಬಳಿಯಲ್ಲಿದ್ದ ಚಾಕೋಲೇಟ್ಗಳನ್ನು ರಸ್ತೆಯಲ್ಲೆ ಹಾಕಿ ಸ್ಥಳದಿಂದ ತೆರಳಿದ ಸಂದೀಪ್, ಸ್ವಲ್ಪ ಹೊತ್ತಿನ ನಂತರ ಮಾಧ್ಯಮಗಳೆದುರು ಪ್ರತ್ಯಕ್ಷನಾಗಿ, "ಈ ಹಿಂದೆ ನನ್ನ ಮೇಲೆ ಪೊಲೀಸರಿಂದ ಹಲ್ಲೆಯಾಗಿದೆ. ಅದು ನನ್ನ ವೈಯಕ್ತಿಕ ವಿಚಾರ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪ್ರತಿಭಟನೆ ನಡೆಸುತ್ತಿಲ್ಲ. ರಾಜ್ಯದ ಪೊಲೀಸ್ ವ್ಯವಸ್ಥೆ ಬದಲಾಗಬೇಕಾಗಿದೆ. ಪೊಲೀಸರು ದೂರು ನೀಡಲು ಹೋದವರ ಬಳಿ ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಅಲ್ಲದೆ ದೂರನ್ನು ದಾಖಲಿಸಿಕೊಳ್ಳುತ್ತಿಲ್ಲ" ಎಂದು ಆರೋಪಿಸಿದನು.