ಡ್ರಗ್ಸ್: ಮಹಾಲಯ ಅಮಾವಾಸ್ಯೆಯ ದಿನದಂದು ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್
ಬೆಂಗಳೂರು, ಸೆ 17: ರಾಜ್ಯದಲ್ಲಿ ವ್ಯಾಪಕ ಸಂಚಲನ ಮೂಡಿಸಿರುವ ಡ್ರಗ್ಸ್ ಹಗರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಸೂಕ್ತ ತನಿಖೆಯಾಗಲಿ ಎಂದು ಬಿಎಸ್ವೈ ಸರಕಾರವನ್ನು ಒತ್ತಾಯಿಸಿದ್ದಾರೆ.
ಡ್ರಗ್ ಮಾಫಿಯಾದಲ್ಲಿ ರಾಜಕಾರಣಿಗಳೂ ಇದ್ದಾರೆ ಎನ್ನುವ ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚಿಸಿರುವ ಕುಮಾರಸ್ವಾಮಿ, ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ಉರುಳಲು ಆ ಮಾಫಿಯಾವೇ ಕಾರಣ ಎಂದಿದ್ದಾರೆ.
ಸ್ಪೋಟಕ ರಹಸ್ಯಕ್ಕೆ ತಾರ್ಕಿಕ ಅಂತ್ಯ ಕಾಣಿಸುವಲ್ಲಿ ಕುಮಾರಸ್ವಾಮಿ ವಿಫಲ
ಸೆಪ್ಟಂಬರ್ 2018ರಲ್ಲಿ ಕುಮಾರಸ್ವಾಮಿ, "ತನ್ನ ಸರಕಾರವನ್ನು ಉರುಳಿಸಲು ಮಾಫಿಯಾ ಜಗತ್ತಿನ ದುಡ್ಡು ಚಲಾವಣೆಯಲ್ಲಿದೆ. ಬಟ್, ನನ್ನ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ, ಬಿಜೆಪಿಯ ಪ್ರಯತ್ನ ಕೈಗೂಡುವುದಿಲ್ಲ" ಎನ್ನುವ ಮಾತನ್ನು ಹೇಳಿದ್ದರು.
ರಾಜಕಾರಣಿಗಳೂ ಡ್ರಗ್ ಮಾಫಿಯಾದಲ್ಲಿದ್ದಾರೆ: ಸಂಚಲನ ಸೃಷ್ಟಿಸಿದ HDK
"ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಡ್ಯಾನ್ಸ್ ಬಾರ್ ಗಳ ಹಣದಿಂದ ನಮ್ಮ ಸರ್ಕಾರ ತೆಗೆಯಲು ಬಳಸಿದ್ದರು ಎಂದು ನಾನು ಹೇಳಿದ್ದೆ. ನನ್ನ ಅವಧಿಯಲ್ಲೇ ಇದಕ್ಕೆ ಕಡಿವಾಣ ಹಾಕುವ ವಸ್ತುನಿಷ್ಠ ಪ್ರಯತ್ನ ಮಾಡಿದ್ದೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ ಜಗತ್ತಿನ ಕಿಂಗ್ ಪಿನ್
ಮಾಫಿಯಾ ಜಗತ್ತಿನ ಕಿಂಗ್ ಪಿನ್ ಗಳು ಯಾರು ಎನ್ನುವುದು ನನಗೆ ಗೂತ್ತಿಲ್ಲದ ವಿಚಾರವಲ್ಲ. ಸರಕಾರವನ್ನು ಉರುಳಿಸಲು 15-17 ಶಾಸಕರಿಗೆ ಈ ಮಾಫಿಯಾದಿಂದ ಅಡ್ವಾನ್ಸ್ ಪೇಮೆಂಟ್ ಕೂಡಾ ಹೋಗಿದೆ. ನನ್ನ ಅವಧಿಯಲ್ಲಿ ಡೈನಾಮಿಕ್ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ಪೋಸ್ಟಿಂಗ್ ಮಾಡಿದ್ದೆ" ಎಂದು ಎಚ್ಡಿಕೆ ಹೇಳಿದ್ದರು.
ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಚಿತ್ರರಂಗದವರು ಮಾತ್ರ ಇಲ್ಲ
ಈ ವಿಚಾರವನ್ನು ಮತ್ತೆ ಪ್ರಸ್ತಾವಿಸಿರುವ ಎಚ್ಡಿಕೆ, "ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಚಿತ್ರರಂಗದವರು ಮಾತ್ರ ಇಲ್ಲ. ರಾಜಕಾರಣಿಗಳೂ ಇದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಹಾಗೂ ಡ್ರಾನ್ಸ್ ಬಾರ್ ಸೇರಿದಂತೆ ಅಕ್ರಮ ದಂಧೆಗಳನ್ನು ಮುಚ್ಚಬೇಕು ಎಂದು ನನ್ನ ಅವಧಿಯಲ್ಲಿ ಸೂಚನೆ ಕೊಟ್ಟಿದೆ. ಹಲವು ಪ್ರದೇಶಗಳಲ್ಲಿ ಅಧಿಕಾರಿಗಳು ದಾಳಿ ಕೂಡಾ ನಡೆಸಿದ್ದರು. ಆ ವೇಳೆ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಶ್ರೀಲಂಕಾಗೆ ಓಡಿ ಹೋಗಿದ್ದ"ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಎಲ್ಲರ ಮುಂದೆ ತೋರಿಸಿದ್ದೆ
"ಶ್ರೀಲಂಕಾಗೆ ಓಡಿ ಹೋಗಿದ್ದ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಯ ಫೋಟೋವನ್ನು ವಿಧಾನಸೌಧದಲ್ಲಿ ಎಲ್ಲರ ಮುಂದೆ ತೋರಿಸಿದ್ದೆ. ಅದಾದ ನಂತರ, ಜಾಮೀನು ಪಡೆದ ಆ ವ್ಯಕ್ತಿ ವಾಪಸ್ ಆಗಿದ್ದ. ಆತ ಮುಂಬೈಗೆ ಹಾರಿ ಹೋದ ಶಾಸಕರೊಂದಿಗೆ ಇದ್ದ, ಆ ವಿಡಿಯೋ ಎಲ್ಲರ ಬಳಿಯೂ ಇದೆ"ಎನ್ನುವ ಹೊಸ ಬಾಂಬ್ ಅನ್ನು ಕುಮಾರಸ್ವಾಮಿ ಸಿಡಿಸಿದ್ದಾರೆ.
Recommended Video
ಜನರಲ್ಲಿ ಹೆಚ್ಚು ಜಾಗೃತಿ ಮೂಡಲಿ ಎಂದು ಆಶಿಸುತ್ತೇನೆ
ಡ್ರಗ್ ಮಾಫಿಯಾದಲ್ಲಿ ರಾಜಕಾರಣಿಗಳು, ಉದ್ಯಮಿಗಳು ಇದ್ದಾರೆ. ಡ್ರಗ್ಸ್ ಇವತ್ತಿನ ಪಿಡುಗಲ್ಲ, ಹಿಂದಿನಿಂದಲೂ ಇದೆ. ಇದು ಸಂಪೂರ್ಣವಾಗಿ ನಿಂತು ಬಿಡುತ್ತದೆ ಎಂದೂ ನಾನು ಹೇಳುವುದಿಲ್ಲ. ಆದರೆ ಈ ಮೂಲವಾಗಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಲಿ ಎಂದು ಆಶಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.