ಸಿನಿ ಸ್ಟಾರ್ ಗಳ ಡ್ರಗ್ ನಂಟಿನ ಹೇಳಿಕೆ ಇಂದ್ರಜಿತ್ ಲಂಕೇಶ್ ಗೆ ಮುಳುಗು ನೀರು ತರುತ್ತಾ?
ಪತ್ರಕರ್ತ- ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಗಳು ಅವರಿಗೇ ಮುಳುಗು ನೀರು ತರುತ್ತದಾ? ಮಾಹಿತಿ ತಂತ್ರಜ್ಞಾನ ಕಾಯ್ದೆ 2000, 66 (E) ವಿವರಣೆ ಗಮನಿಸಿದರೆ ಹಾಗೇ ಅನಿಸುತ್ತದೆ. ನಿಮಗೇ ಈ ಬಗ್ಗೆ ಪ್ರಶ್ನೆ ಇದ್ದಲ್ಲಿ IT Act 2000, Section 66(E) ಎಂದು ಗೂಗಲ್ ನಲ್ಲಿ ಸರ್ಚ್ ಕೊಟ್ಟು ನೋಡಿ. ಇಂಗ್ಲಿಷ್ ನಲ್ಲಿ ಸ್ಪಷ್ಟವಾದ ವಿವರಣೆ ಇದೆ
Recommended Video
ಅದರ ಪ್ರಕಾರ, ಯಾರೇ ಆಗಲಿ ಉದ್ದೇಶಪೂರ್ವಕವಾಗಿ ಆಥವಾ ಗೊತ್ತಿದ್ದೂ ಒಬ್ಬ ವ್ಯಕ್ತಿಯ ಖಾಸಗಿ ಪ್ರದೇಶವನ್ನು ಆತನ ಅಥವಾ ಆಕೆಯ ಒಪ್ಪಿಗೆ ಇಲ್ಲದೆ ಚಿತ್ರೀಕರಣ ಮಾಡಿದರೆ ಅಥವಾ ಫೋಟೋ ತೆಗೆದರೆ ಹಾಗೂ ಅದನ್ನು ಹಂಚಿದರೆ ಆ ವ್ಯಕ್ತಿಯ ಖಾಸಗಿತನವನ್ನು ಉಲ್ಲಂಘಿಸಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಜೈಲು ಶಿಕ್ಷೆ ಆಗಬಹುದು ಅಥವಾ ದಂಡ ವಿಧಿಸಬಹುದು.
ಡ್ರಗ್ಸ್ ಸೇವಿಸಿ, ಒಬ್ಬ ಮಹಿಳೆ ಹೇಗೆಂದರೆ ಹಾಗೆ ನೃತ್ಯ ಮಾಡುತ್ತಿದ್ದಳು. ಅಂಥ ಸನ್ನಿವೇಶದ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಿದೆ ಹಾಗೂ ಕೆಲವು ಫೋಟೋಗಳನ್ನು ನೀಡಿದ್ದೇನೆ ಎಂದಿದ್ದಾರೆ ಇಂದ್ರಜಿತ್ ಲಂಕೇಶ್. ಹೀಗೆ ಮಾಡುವುದು ಖಾಸಗಿತನದ ಉಲ್ಲಂಘನೆಯೇ ಆಗುತ್ತದೆ ಎನ್ನುತ್ತಾರೆ ಒನ್ ಇಂಡಿಯಾ ಕನ್ನಡದ ಜತೆಗೆ ಮಾತನಾಡಿದ ವಕೀಲರಾದ ಬಾಲನ್.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಿಂದ ಆರಂಭ
ಮೊದಲಿಗೆ ಅಂಥ ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಚಿತ್ರೀಕರಿಸುವುದೇ ತಪ್ಪು. ಇನ್ನು ಚಿತ್ರೀಕರಿಸಿದ ತಕ್ಷಣವೇ ಪೊಲೀಸರಿಗೆ ಏಕೆ ನೀಡಲಿಲ್ಲ? ಅಂಥ ವಿಡಿಯೋ- ಫೋಟೋಗಳನ್ನು ನೋಡಿ ಲೈಂಗಿಕ ತೃಪ್ತಿ ಪಡುತ್ತಿದ್ದರೆ ಎಂಬ ಪ್ರಶ್ನೆ ಕೂಡ ಉದ್ಭವ ಆಗುತ್ತದೆ ಎನ್ನುತಾರೆ ವಕೀಲರು.
ಇನ್ನು ಡ್ರಗ್ಸ್ ಬಗ್ಗೆ ವಿಪರೀತ ಮಾತು ಕೇಳಿಬರುತ್ತಿದೆ. ಇವೆಲ್ಲ ಶುರುವಾದದ್ದು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಿಂದ. ಕ್ರಿಮಿನಲ್ ಲಾ ಪ್ರಾಕ್ಟೀಸ್ ಮಾಡುವ ವಕೀಲನಾಗಿ ಹೇಳುತ್ತಿದ್ದೇನೆ. ಇದು ಆತ್ಮಹತ್ಯೆ ಪ್ರಕರಣವೇ. ಯಾವ ಅನುಮಾನವೂ ಇಲ್ಲ. ಆದರೆ 'ಮೀಡಿಯಾ ಟ್ರಯಲ್' ನಡೆಯುತ್ತಿದೆ. ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಆದರೆ ಸಿನಿಮಾ, ಕ್ರಿಕೆಟ್ ಇದಕ್ಕೆ ಸಂಬಂಧಿಸಿದ ಕ್ರೈಂ ಅಂದಾಕ್ಷಣ ಉತ್ಸಾಹ ಜಾಸ್ತಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾತು ಈಗ ಕರ್ನಾಟಕದಲ್ಲಿನ ಸದ್ಯದ ಪರಿಸ್ಥಿತಿ ಕಡೆಗೆ ತಿರುಗಿತು. Narcotic Drugs and Psychotropic Substances (NDPS) Act, 1985 ಏನನ್ನು ಹೇಳುತ್ತದೆ ಎಂಬುದನ್ನು ವಿವರಿಸುತ್ತಾ ಸಾಗಿದರು ಬಾಲನ್. ಆ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ಮಾದಕದ್ರವ್ಯ ಸೇವನೆ ಅಪರಾಧ. ಸೆಕ್ಷನ್ 23ರ ಅಡಿಯಲ್ಲಿ ಮಾದಕದ್ರವ್ಯ ಆಮದು- ರಫ್ತು, ಅವುಗಳನ್ನು ಇರಿಸಲು ಜಾಗ ಕೊಟ್ಟಿದ್ದಲ್ಲಿ ಸೆಕ್ಷನ್ 25 ಅಡಿಯಲ್ಲಿ ಅಪರಾಧ.
ಔಷಧ ತಯಾರಿಕೆಗೂ ಬಳಕೆ
ಆದರೆ, ಸಾಮಾನ್ಯ ಜನರಿಗೂ ಗೊತ್ತಾಗಬೇಕಾದದ್ದು ಏನೆಂದರೆ, ಹಲವು ಡ್ರಗ್ ಗಳನ್ನು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಅನಸ್ತೇಷಿಯಾ ತೆಗೆದುಕೊಂಡು ಆಪರೇಷನ್ ಮಾಡಿಸಿಕೊಂಡಿದ್ದ ವ್ಯಕ್ತಿಯಲ್ಲಿ, ನಿದ್ದೆ ಬಾರದೆ ಅದಕ್ಕಾಗಿ ಮಾತ್ರೆ ತೆಗೆದುಕೊಂಡ ಹೃದಯ ಸಂಬಂಧಿ ಸಮಸ್ಯೆ ಇರುವ ರೋಗಿಯಲ್ಲಿ ಕೂಡ ಕಾಣಿಸುತ್ತದೆ. ಅಷ್ಟೇ ಏಕೆ, ಕೆಮ್ಮಿನ ಔಷಧಿ ಎಂದು ತೆಗೆದುಕೊಳ್ಳುವುದರಲ್ಲಿ ಆಲ್ಕೋಹಾಲ್ ಅಂಶ ಇರುತ್ತದೆ. ಅದು ಒಬ್ಬ ವ್ಯಕ್ತಿಗೆ ಬೇಕಾದಷ್ಟು ಎನ್ನುವಂತಿರುತ್ತದೆ ಎಂದರು ವಕೀಲರು.
ಗಾಂಜಾ, ಕೊಕೇನ್, ಚರಸ್ ಹೀಗೆ ನಾನಾ ಹೆಸರಲ್ಲಿ ಕರೆಯಲಾಗುತ್ತದೆ. ಇದರಲ್ಲಿ ಚರಸ್ ಹೆಚ್ಚು ಅಪಾಯಕಾರಿ. ಮಾಂಡ್ರೆಕ್ ಮಾತ್ರೆಗಳ ರೂಪದಲ್ಲಿ ಕೂಡ ತೆಗೆದುಕೊಳ್ಳುತ್ತಾರೆ. ಇವನ್ನೆಲ್ಲ ಒಬ್ಬ ವ್ಯಕ್ತಿಯ ಬಳಿ ಇರುವಾಗಲೇ ಹಿಡಿಯಬೇಕು. ಯಾರೋ ಡ್ರಗ್ ಪೆಡ್ಲರ್ ಹೇಳಿದ ಅನ್ನೋ ಕಾರಣಕ್ಕೋ ಮತ್ಯಾರೋ ಹೇಳಿದರು ಅಂತ ಪೊಲೀಸರು ಕೂಡ ನೋಟಿಸ್ ನೀಡುವುದಕ್ಕೆ ಬರಲ್ಲ ಎಂದರು.
ಇಂಥ ಸನ್ನಿವೇಶದಲ್ಲಿ ಯಾರದಾದರೂ ಹೆಸರು ಹೇಳಿದರೆ ಅದು ಅಪಾಯಕಾರಿ. ಏಕೆಂದರೆ, ಆ ವ್ಯಕ್ತಿಯು ಡ್ರಗ್ಸ್ ತಗೊಂಡಿದ್ದನ್ನು ಸಾಬೀತು ಮಾಡಬೇಕು ಹಾಗೂ ಅದರ ಹಿಂದೆ ಇದ್ದದ್ದು ವೈದ್ಯಕೀಯ ಉದ್ದೇಶ ಎಂದೇನಾದರೂ ಸೂಕ್ತ ದಾಖಲೆಗಳೊಂದಿಗೆ ಕೋರ್ಟ್ ಮುಂದಿಟ್ಟರೆ ಕೋಟಿಗಟ್ಟಲೆ ಮಾನ ನಷ್ಟ ಪರಿಹಾರ ಕಟ್ಟಿಕೊಡಬೇಕಾಗಬಹುದು.
ಹೆಸರು ಹೇಳಿ ದಕ್ಕಿಸಿಕೊಳ್ಳುವುದು ಸಾಧ್ಯವೇ ಇಲ್ಲ
ಇಂದ್ರಜಿತ್ ಲಂಕೇಶ್ ಈಗ ಏಕಾಏಕಿ ಬೋಲ್ತಿ ಬಂದ್ ಆಗಿದ್ದರ ಹಿಂದೆ ಇದೇ ಕಾರಣವೇ ಇರುತ್ತದೆ. ಏಕೆಂದರೆ, ಹೆಸರು ಹೇಳಿ ದಕ್ಕಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಚಿರಂಜೀವಿ ಸರ್ಜಾ ಹೆಸರು ಹೇಳಿಯೇ ಯೂ ಟರ್ನ್ ಹೊಡೆದಿದ್ದಾರೆ ಇಂದ್ರಜಿತ್. ಪೋಸ್ಟ್ ಮಾರ್ಟಮ್ ಯಾವ ಸಂದರ್ಭಗಳಲ್ಲಿ ಮಾಡುತ್ತಾರೆ ಎಂಬ ಬೇಸಿಕ್ ಸೆನ್ಸ್ (ಪ್ರಾಥಮಿಕ ಜ್ಞಾನ) ಇಲ್ಲದೆ ಅವರು ಹೇಳಿದ್ದು ಸರಿಯಾಗಿ ಉಲ್ಟಾ ಹೊಡೆದಿದೆ.
ಡ್ರಗ್ ಪೆಡ್ಲರ್ ಗಳ ಹೇಳಿಕೆಯನ್ನು ನೆಚ್ಚಿಕೊಂಡು, ಇಂದ್ರಜಿತ್ ಲಂಕೇಶ್ ಮಾತು ನಂಬಿಕೊಂಡು ಸೆಲೆಬ್ರಿಟಿಗಳ ಹೆಸರು ಹೇಳಿದರೆ ಅದೆಂಥ ಅವಮಾನ ಎಂಬುದು ಪೊಲೀಸರಿಗೂ ಗೊತ್ತು. ಇನ್ನು ಈಗ, ತನಿಖೆಯ ಹಂತದಲ್ಲಿ ಹೆಸರು ಹೇಳಿದರೆ ಸರಿಹೋಗುವುದಿಲ್ಲ ಎಂದು ಹೇಳುತ್ತಿರುವ ಇಂದ್ರಜಿತ್ ಲಂಕೇಶ್, ಈ ಹಿಂದೆ ಕಮಿಷನರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಹಗರಣಗಳಲ್ಲಿ ಏಕೆ ಆ ನಟಿಯರ ಹೆಸರು ಬಹಿರಂಗ ಮಾಡಲಿಲ್ಲ ಎಂಬುದು ತಿಳಿಯುತ್ತಿಲ್ಲವೇಕೆ ಅನ್ನೋದೇ ಪ್ರಶ್ನೆ.
ಹಾಗಂತ ಈ ಪ್ರಕರಣ ಕೈ ಬಿಡಬೇಕು ಎಂಬರ್ಥದಲ್ಲಿ ಹೇಳ ಹೊರಟಿರುವುದಲ್ಲ ಈ ವರದಿ. "ಆರು ತಿಂಗಳು ಜೈಲು- ಮೂರು ಸಾವಿರ ರುಪಾಯಿ ದಂಡ ವಿಧಿಸುವಂಥ ಸೆಕ್ಷನ್ ಗಳನ್ನು ಹಾಕುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು, ದಾರಿ ತಪ್ಪಿಸುವ ಹೇಳಿಕೆಗಳನ್ನು ಬಿಡಬೇಕು" ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ಹೇಳಿದರು. ಅದೇ ಧ್ವನಿಯು ಈ ವರದಿಯದೂ ಆಗಿದೆ.