ಮಾಜಿ-ಹಾಲಿ ಕೆಪಿಸಿಸಿ ಅಧ್ಯಕ್ಷರ ಮುನಿಸು: ಸಭೆಗೆ ಗೈರಾದ ಪರಮೇಶ್ವರ್
ಬೆಂಗಳೂರು, ಸೆಪ್ಟೆಂಬರ್ 01: ಮಾಜಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಗೂ ಹಾಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮಧ್ಯೆ ಮುಸುಕಿನ ಗುದ್ದಾಟ ಚಾಲ್ತಿಯಲ್ಲಿದ್ದು. ಇಂದು ಅದು ಅಲ್ಪ ಮಟ್ಟಿಗೆ ಜಾಹೀರಾಗಿದೆ.
ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧ್ಯಕ್ಷತೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಗೈರಾಗಿದ್ದಾರೆ. ಅತಿ ಮುಖ್ಯವಾಗಿದ್ದ ಈ ಸಭೆಗೆ ಗೈರಾಗಿದ್ದಕ್ಕೆ ಪರಸ್ಪರರ ನಡುವಿನ ಮುನಿಸೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸಮನ್ವಯ ಸಮಿತಿ ಸಭೆಗೆ ಈ ಇಬ್ಬರು ಪ್ರಮುಖರಿಗೆ ಆಹ್ವಾನವಿಲ್ಲ!
ಇಂದು ಜಿಲ್ಲಾವಾರು ಮುಖಂಡರು ಹಾಗೂ ಕಾಂಗ್ರೆಸ್ ಶಾಸಕರ ಸಭೆ ಅತ್ಯಂತ ಮಹತ್ವದ್ದು ಎನ್ನಲಾಗಿತ್ತು ಆದರೆ ಅದಕ್ಕೇ ಪರಮೇಶ್ವರ್ ಅವರು ಗೈರಾಗಿದ್ದಾರೆ. ಪರಮೇಶ್ವರ್ ಅವರು ಸಭೆಯನ್ನು ಬಿಟ್ಟು ವೈಯಕ್ತಿಕ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ.
ಮುನಿಸಿಗೆ ಕಾರಣವೇನು
ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ರಚಿಸಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿ ನಿಷ್ಕ್ರಿಯವಾಗಿದ್ದು ಅವುಗಳನ್ನು ಬದಲಾಯಿಸುವ ಬಗ್ಗೆ ದಿನೇಶ್ ಗುಂಡೂರಾವ್ ಮಾತನಾಡಿದ್ದರು. ಪರಮೇಶ್ವರ್ ಅವರ ಆಪ್ತರೇ ಹೆಚ್ಚಿಗಿರುವ ಬ್ಲಾಕ್ ಕಾಂಗ್ರೆಸ್ ಅನ್ನು ಬದಲಾಯಿಸುವುದಕ್ಕೆ ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದರು ಹಾಗಾಗಿ ಇಬ್ಬರ ನಡುವೆ ಮುನಿಸು ತಲೆದೂರಿದೆ.
ಸಮನ್ವಯ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ-ಎಚ್ಡಿಕೆ ಜಟಾಪಟಿ
ಸಭೆಗೆ ಗೈರಾಗಿದ್ದು ಏಕೆ?
ಬ್ಲಾಕ್ ಕಾಂಗ್ರೆಸ್ ಸಮಿತಿಯ ನಿಷ್ಕ್ರಿಯತೆಯ ಬಗ್ಗೆ ಇಂದಿನ ಸಭೆಯಲ್ಲಿ ವೇಣುಗೋಪಾಲ್ ಅವರ ಮುಂದೆ ವಿಷಯ ಎತ್ತಿ ಅದನ್ನು ಬದಲಾಯಿಸುವ ಆದೇಶ ಪಡೆಯಲೆಂದು ದಿನೇಶ್ ಗುಂಡೂರಾವ್ ಅವರು ತಯಾರಾಗಿದ್ದರು. ಬ್ಲಾಕ್ ಕಾಂಗ್ರೆಸ್ ವಿಷಯ ತೆಗೆದರೆ ತಮಗೆ ಮುಜುಗರವಾಗುತ್ತದೆ ಎಂಬ ಕಾರಣದಿಂದ ಪರಮೇಶ್ವರ್ ಅವರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ ಹೋಗಿರುವುದು ಎಲ್ಲಿಗೆ?
ಪರಮೇಶ್ವರ್ ಅವರು ತಮ್ಮ ಒಡೆತನದ ಸಿದ್ದಾರ್ಥ ಕಾಲೇಜಿನ ವೈದ್ಯಕೀಯ ಶಿಕ್ಷಣ ವಿಭಾಗದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲು ತುಮಕೂರಿಗೆ ತೆರಳಿದ್ದಾರೆ.
ಮತ್ಯಾರು ಗೈರು
ಅತಿ ಮುಖ್ಯವಾದ ಈ ಸಭೆಯಲ್ಲಿ ಬೆಳಗಾವಿಯ ಪ್ರಮುಖ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಸಹ ಗೈರಾಗಿದ್ದರು. ತಮ್ಮ ಪೂರ್ವ ನಿರ್ಧಾರಿತ ಕಾರ್ಯಕ್ರಮ ಇರುವ ಕಾರಣ ಸಭೆಗೆ ಹೋಗುತ್ತಿಲ್ಲ ಎಂದು ಅವರು ಹೇಳಿದ್ದರು. ಸಚಿವ ಸ್ಥಾನ ಸಿಗದೆ ಅತೃಪ್ತರಾಗಿರುವ ಅವರು ಕೆಪಿಸಿಸಿಗೆ ಸಂದೇಶ ರವಾನಿಸಲೆಂದೇ ಸಭೆಗೆ ಗೈರಾಗಿದ್ದಾರೆ ಎನ್ನಲಾಗುತ್ತಿದೆ.