ಪ್ರತಿ ಮನೆಗೂ ಕುಡಿಯುವ ನೀರು: ಯಡಿಯೂರಪ್ಪ ಸರ್ಕಾರದ ಹೊಸ ಯೋಜನೆ
ಬೆಂಗಳೂರು, ಜನವರಿ 28: ರಾಜ್ಯದ ಪ್ರತಿ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ತಲುಪಿಸಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ಹೊರತರಲಿದೆ.
'ಗಂಗಾ ಯೋಜನೆ' ಮೂಲಕ ಪ್ರತಿ ಮನೆಗೂ ಕುಡಿಯುವ ನೀರು ತಲುಪಿಸುವ ಮಹಾತ್ವಾಕಾಂಕ್ಷಿ ಯೋಜನೆ ಸರ್ಕಾರದ ಚಿಂತನೆಯಲ್ಲಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಿದ ಆರೋಗ್ಯ ಅಧಿಕಾರಿಗಳು
ಪ್ರತಿ ಮನೆ ಮನೆಗೂ ಗಂಗಾ ಯೋಜನೆಯಡಿ ನಲ್ಲಿ ಕೊಡಲು ತೀರ್ಮಾನ ಮಾಡಿದ್ದೇವೆ. ಇನ್ನೊಂದು ತಿಂಗಳಲ್ಲಿ ಈ ಯೋಜನೆ ಚಾಲ್ತಿಗೆ ಬರಲಿದೆ, ಕೊಳಾಯಿ ಮೂಲಕ ಮನೆ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಪ್ರಸ್ತುತ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿದ್ದು, ಅದನ್ನು ಕೇಂದ್ರಕ್ಕೆ ಕಳುಹಿಸಿ, ಕೇಂದ್ರ ನೀಡುವ ಅನುದಾನವನ್ನು ಲೆಕ್ಕ ಹಾಕಿಕೊಂಡು ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ.
ಪೈಪ್ಲೈನ್ಗಳನ್ನು ಹಾಕಿ, ಮನೆಗಳಿಗೆ ಕೊಳಾಯಿ ಸಂಪರ್ಕ ನೀಡಿ ನೀರು ತಲುಪಿಸಲಾಗುವುದು. ಜೊತೆಗೆ ತಿಂಗಳಿಗೆ ಇಂತಿಷ್ಟೆಂದು ಶುಲ್ಕವನ್ನೂ ವಿಧಿಸಲಾಗುವುದು. ಸರ್ಕಾರದ ಇಲಾಖೆಗಳೇ ಇದನ್ನು ನಿರ್ವಹಿಸುವುದರಿಂದ ಕಡಿಮೆ ವೆಚ್ಚದಲ್ಲಿ, ನೀರು ಪೋಲಾಗದಂತೆ ಜನರಿಗೆ ನೀರು ತಲುಪಿಸಲಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.
ಸೋಲಾರ್ ಅಳವಡಿಕೆ ಬಗ್ಗೆಯೂ ಮಾಹಿತಿ ನೀಡಿದ ಈಶ್ವರಪ್ಪ, 'ರಾಜ್ಯದ 6,021 ಗ್ರಾಮ ಪಂಚಾಯಿತಿಗಳಿಗೆ ಸೋಲಾರ್ ಅಳವಡಿಕೆ, ತ್ಯಾಜ್ಯ ಸಂಸ್ಕರಣ ಘಟಕಗಳ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಶುದ್ಧ ಕುಡಿಯವ ನೀರಿನ ಘಟಕಗಳ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ. ಹೀಗಾಗಿ ತನಿಖೆ ಮಾಡಿಸಲು ಒಂದು ಏಜೆನ್ಸಿ ನೇಮಕ ಮಾಡಲು ನಿರ್ಧರಿಸಲಾಗಿದೆ' ಎಂದರು.