ಇಐಎ ಅಧಿಸೂಚನೆ-2020: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಕರ್ನಾಟಕ ಹೈಕೋರ್ಟ್!
ಬೆಂಗಳೂರು, ಆಗಸ್ಟ್.06: ಪರಿಸರದ ಮೇಲಾಗುವ ಪರಿಣಾಮ ಮೌಲ್ಯಮಾಪನ-2020ರ ಅಂತಿಮ ಕರಡು ಅಧಿಸೂಚನೆಯನ್ನು ಪ್ರಕಟಿಸಲು ಮುಂದಾದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ಹೊರಡಿಸಿದೆ.
Recommended Video
ಇಐಎ-2020 ವಿರೋಧಿಸಿದ ಯುನೈಟೆಡ್ ಕನ್ಸರ್ವೇಷನ್ ಮ್ಯೂಮೆಂಟ್ ಹೈಕೋರ್ಟ್ ಮೊರೆ ಹೋಗಿತ್ತು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾ. ಎ.ಎಸ್. ಕಿನಾಗಿ ನೇತೃತ್ವದ ವಿಭಾಗೀಯ ಪೀಠವು ಇಐಎ-2020 ಜಾರಿಗೆ ತಡೆ ನೀಡಿದೆ.
ಎಲಿವೇಟೆಡ್ ಕಾರಿಡಾರ್ನಿಂದ ಪರಿಸರದ ಮೇಲಿನ ಪರಿಣಾಮ: ವರದಿ ಶೀಘ್ರ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಇಐಎ-2020 ಅಧಿಸೂಚನೆಯ ಬಗ್ಗೆ ಯಾವುದೇ ರೀತಿಯ ಪ್ರಚಾರ ಮಾಡಿಲ್ಲ ಎನ್ನುವುದನ್ನು ಹೈಕೋರ್ಟ್ ಗಮನಿಸಿ ಈ ಆದೇಶ ಹೊರಡಿಸಿದೆ. ಏಕೆಂದರೆ ಪ್ರಾದೇಶಿಕ ಭಾಷೆಗಳಲ್ಲಿ, ಅದರಲ್ಲೂ ವಿಶೇಷವಾಗಿ ಕನ್ನಡದಲ್ಲಿ ವ್ಯಾಪಕ ಪ್ರಚಾರವನ್ನು ನೀಡುವವರೆಗೆ ಮತ್ತು ನಾಗರಿಕರಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಂಜಸವಾದ ಅವಕಾಶ ನೀಡುವವರೆಗೆ ನ್ಯಾಯಾಲಯವು ಕರಡನ್ನು ಅಂತಿಮಗೊಳಿಸುವುದಕ್ಕೆ ತಡೆ ನೀಡಿದೆ.
ಪರಿಸರಕ್ಕೆ ಮಹಾಮಾರಿ, ಕೈಗಾರಿಕೆಗಳಿಗೆ ಉಪಕಾರಿ
ಅರಣ್ಯ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡುವ ಪರಿಸರ ಅನುಮತಿಗಳನ್ನು ತ್ವರಿತಗತಿಯಲ್ಲಿ ಇಐಎ 2020ರಲ್ಲಿ ಪ್ರಸ್ತಾಪಿಸಲಾಗಿದೆ.
ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ಕರಡು ಸಿದ್ಧ
ಅಧಿಕೃತ ಗೆಜೆಟ್ ಕರಡು ಅಧಿಸೂಚನೆಯನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಪ್ರಕಟಿಸಬಹುದು ಎಂದು ಕೇಂದ್ರ ಸರ್ಕಾರದ ವಕೀಲ ಶಿವಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು. ಲೈವ್ ಲಾ ಪ್ರಕಾರ "ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸಲು ನಾವು ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಕಾರಿಗಳನ್ನು ಸೂಚಿಸಿರುವುದಾಗಿ" ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸೆಪ್ಟೆಂಬರ್.07ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಕರಡು ಅಧಿಸೂಚನೆಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಎಲ್ಲಾ ಅನುಮತಿ ಕ್ರಮಗಳನ್ನು ತೆಗೆದುಕೊಳ್ಳಲು ಮುಕ್ತವಾಗಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಸೆಪ್ಟೆಂಬರ್.07ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಕರಡುಪ್ರದರ್ಶನಕ್ಕೆ ವ್ಯಾಪಕ ಪ್ರಚಾರ ನೀಡದ ಕಾರಣ ನ್ಯಾಯಾಲಯವು ಈ ಹಿಂದೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿತ್ತು. ಆಕ್ಷೇಪಣೆ ಸಲ್ಲಿಸಲು ಪ್ರಸ್ತುತ ಕೊನೆಯ ದಿನಾಂಕ ಆಗಸ್ಟ್ 11, 2020ನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೇಂದ್ರದ ವಿರುದ್ಧ ಎನ್ ಜಿಓಗಳು ದೂಷಣೆಗೆ ಕಾರಣವೇನು?
ಇಐಎ- 2020ರ ಕರಡುಗೆ ಸಾಮಾಜಿಕ ಸಂಸ್ಥೆಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿವೆ. ಏಕೆಂದರೆ ಇಐಎ-2020ರ ಕರಡು ದೊಡ್ಡ ಸಂಸ್ಥೆಗಳ ಪರವಾಗಿ ಪರಿಸರ ಮಾನದಂಡಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ದೇಶದ 22 ಅಧಿಕೃತ ಭಾಷೆಗಳಲ್ಲಿ ಕರಡು ಲಭ್ಯವಾಗುವಂತೆ ದೆಹಲಿ ಹೈಕೋರ್ಟ್ನ ಆದೇಶ ಪಾಲಿಸದ ಕಾರಣ ಪರಿಸರ ತಜ್ಞರು ಮತ್ತು ಎನ್ಜಿಒಗಳು ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆ.