ಯಡಿಯೂರಪ್ಪ ಬದಲಾವಣೆ ಕುರಿತು ಡಾ. ಸುಧಾಕರ್ ಮಹತ್ವದ ಹೇಳಿಕೆ!
ಬೆಂಗಳೂರು, ಸೆ. 20: ಸಂಪುಟ ವಿಸ್ತರಣೆ ಮೂಲಕ ತಮ್ಮನ್ನು ಮುಖ್ಯಮಂತ್ರಿ ಮಾಡಿದವರಿಗೆ ಋಣ ಸಂದಾಯ ಮಾಡುವ ಧಾವಂತದಲ್ಲಿ ಸಿಎಂ ಯಡಿಯೂರಪ್ಪ ಇದ್ದಾರೆ. ಆದರೆ ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿ ಬಂದಿರುವುದು ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿ ಸೇರುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 16 ಜನರಿಗೆ ಆತಂಕ ತಂದಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಕೊಟ್ಟಿದ್ದ ಭರವಸೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಆದಲ್ಲಿ ಅದರ ನೇರ ಪರಿಣಾಮ ಮೊದಲು ಆಗುವುದು ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ 16 ಜನರ ಮೇಲೆ.
ಮಳೆಗಾಲದ ಅಧಿವೇಶನಕ್ಕೂ ಮೊದಲು ಕೊಟ್ಟ ಮಾತಿನಂತೆ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡಲು ಯಡಿಯೂರಪ್ಪ ಅವರು ಹೈಕಮಾಂಡ್ ಬಾಗಿಲು ತಟ್ಟಿದ್ದಾರೆ. ಆದರೆ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಲವು ತೋರಿಲ್ಲ. ಹೀಗಾಗಿ ಹೈಕಮಾಂಡ್ ಕಡೆಗೆ ಕೈತೋರಿಸಿ ಯಡಿಯೂರಪ್ಪ ಸುಮ್ಮನಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಅನರ್ಹತೆಯ ಶಾಪ ವಿಮೋಚನೆ ಮಾಡಿಕೊಂಡಿರುವವರಿಗೆ ಆತಂಕ ತಂದಿವೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಹತ್ವದ ಮಾತನಾಡಿದ್ದಾರೆ.
ಅಷ್ಟು ದೊಡ್ಡವನಲ್ಲ!
ತುಮಕೂರಿನಲ್ಲಿ ಮಾತನಾಡಿರುವ ಡಾ. ಸುಧಾಕರ್ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೇಳಿಕೆ ನೀಡುವಷ್ಟು ನಾನು ದೊಡ್ಡವನಲ್ಲ ಎಂದು ಹೇಳಿದ್ದಾರೆ.
ಪಕ್ಷದೊಳಗಿನ ಭಿನ್ನಮತೀಯರಿಗೆ ದೆಹಲಿಯಿಂದ ಯಡಿಯೂರಪ್ಪ ಖಡಕ್ ಸಂದೇಶ
ದೆಹಲಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬೆಂಗಳೂರಿಗೆ ಹಿಂದುರಿಗಿದ್ದಾರೆ. ಅವರಿಂದಲೇ ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳಿ. ಸತ್ಯ ಗೊತ್ತಿಲ್ಲದೇ ಮನಸೋ ಇಚ್ಛೆ ಮಾತನಾಡುವುದು ಸರಿಯಲ್ಲ. ನಾನು ಸಹ ಈ ಬಗ್ಗೆ ಏನೂ ಹೇಳುವುದಿಲ್ಲ. ಕೆಲವರು ಮಂತ್ರಿ ಆಗುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ, ಅದೇನು ಅಪರಾಧ ಅಲ್ಲವಲ್ಲಾ? ಈ ಎಲ್ಲಾ ಪ್ರಶ್ನೆಗಳಿಗೂ ಮುಖ್ಯಮಂತ್ರಿಗಳೇ ಉತ್ತರಿಸುತ್ತಾರೆ ಎಂದು ಗರಂ ಆಗಿ ಉತ್ತರಿಸಿದ್ದಾರೆ.
ಎಲ್ಲದರಲ್ಲೂ ರಾಜಕೀಯ ಸರಿಯಲ್ಲ
ರಾಜ್ಯದಲ್ಲಿ ಕೋರೋನ ಪ್ರಕರಣ 5 ಲಕ್ಷಕ್ಕೇರಿದೆ ಎನ್ನುವುದಕ್ಕಿಂತ ಸೋಂಕಿತರ ಪೈಕಿ 4 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂಬುದು ಗಮನಾರ್ಹ. ಅಷ್ಟೆ ಅಲ್ಲದೆ, ಕೋವಿಡ್ನಿಂದ ರಾಜ್ಯದಲ್ಲಿ ಸಾವಿನ ಪ್ರಮಾಣ, ದೇಶದ ಸಾವಿನ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಶೇ.1.56 ರಷ್ಟು ಕಡಿಮೆ ಇದೆ. ಹೀಗಿರುವಾಗ ನಿರ್ಲಕ್ಷ್ಯದ ಪ್ರಶ್ನೆ ಎಲ್ಲಿಂದ ಬರುತ್ತದೆ. ವಿರೋಧ ಪಕ್ಷದ ನಾಯಕರು ಅಂಕಿ-ಅಂಶ ಆಧರಿಸಿ ಹೇಳಿಕೆ ನೋಡಲಿ. ಎಲ್ಲದರಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಡಾ. ಸುಧಾಕರ್ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆದರೆ, ಮುಂದೆಯೂ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಗುಜರಾತ್ ರಾಜ್ಯದ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೊರತೆ ಬಿದ್ದರೆ ಅಲ್ಲಿಂದ ಆಕ್ಸಿಜನ್ ತರಿಸಲಾಗುವುದು. ಕೇವಲ ಸರಕಾರಿ ಆಸ್ಪತ್ರೆ ಅಲ್ಲದೆ, ಖಾಸಗಿ ಆಸ್ಪತ್ರೆಯಲ್ಲಿ ಕೊರತೆಯಾದರೂ ಅವರಿಗು ಸಹ ವ್ಯವಸ್ಥೆ ಮಾಡಲಾಗುವುದು ಎಂದರು.
ಕೆಲ ಆಸ್ಪತ್ರೆಗಳಲ್ಲಿ ಆಕ್ಸಿಜೆನ್ ಕೊರತೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಸಾಧ್ಯವಾದಷ್ಟು ಆಯಾ ಜಿಲ್ಲೆಯಲ್ಲಿ ಕೈಗಾರಿಕಾ ವಲಯಗಳ ಸಹಕಾರದೊಂದಿಗೆ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದಲ್ಲಿ ಕೊರತೆ ನೀಗಿಸಲು ಸರಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದರು.
Recommended Video
ಹೆಚ್ಚು ಶುಲ್ಕ ವಸೂಲಿ ತಡೆಗೆ ಕ್ರಮ
ಕೋವಿಡ್ ಚಿಕಿತ್ಸೆ ಹೆಸರಿನಲ್ಲಿ ಹೆಚ್ಚು ಶುಲ್ಕ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲೆಂದೇ ಸರಕಾರ ಕೊರೊನಾ ವೈರಸ್ ಚಿಕಿತ್ಸೆಗೆ ಶುಲ್ಕ ನಿಗದಿ ಮಾಡಿದೆ. ಆದರೂ, ಹೆಚ್ಚು ಶುಲ್ಕ ವಿಧಿಸುತ್ತಿದ್ದರೆ ದೂರು ನೀಡಬಹುದು. ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.
ಹೆಚ್ಚು ಶುಲ್ಕ ಆರೋಪವನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕು. ಕೆಲವೊಮ್ಮೆ ಕೊರೊನಾ ಇರುವ ವ್ಯಕ್ತಿಗೆ ಬಹು ಅಂಗಗಳ ವೈಫಲ್ಯವಾಗಿರುತ್ತದೆ. ಅಂಥ ಚಿಕಿತ್ಸೆಗೆ ಪ್ರತ್ಯೇಕ ಶುಲ್ಕವಿರುತ್ತದೆ. ಅದಕ್ಕೂ ಕೊರೋನ ಚಿಕಿತ್ಸೆಗೂ ಸಂಬಂಧವಿರುವುದಿಲ್ಲ. ಇದನ್ನು ಸಹ ಗಮನದಲ್ಲಿಡಬೇಕು ಎಂದರು.