ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಮೊದಲೆ ಗೊತ್ತಿತ್ತು: ಡಾ. ಸುಧಾಕರ್
ಬೆಂಗಳೂರು, ಏ. 15: ಮಾರಕ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಭಾರತದಲ್ಲಿಯೂ ಹೆಚ್ಚಾಗುತ್ತಿದೆ. ರಾಜ್ಯದಲ್ಲಿಯೂ ಕೊರೊನಾ ವೈರಸ್ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಕೋವಿಡ್ 19 ಶಂಕಿತರ ಪರೀಕ್ಷೆಯನ್ನು ಸರ್ಕಾರ ಹೆಚ್ಚಾಗಿ ಮಾಡುತ್ತಿಲ್ಲ. ಹೀಗಾಗಿ ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪವಿದೆ.
ಅಮೆರಿಕ, ಸ್ಪೇನ್, ಇಟಲಿ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಜನರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕಿನ ಲಕ್ಷಣ ಕಂಡು ಬರುವ ಹಾಗೂ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವುದರಿಂದ ಮಾತ್ರ ಕೊರೊನಾ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂಬ ಮಾತುಗಳಿವೆ.
ರಾಜ್ಯದಲ್ಲಿ ಪ್ರತಿದಿನ 1500 ಟೆಸ್ಟ್ಗಳು
ಹೆಚ್ಚಿನ ಪರೀಕ್ಷೆಯನ್ನು ರಾಜ್ಯದಲ್ಲಿ ಮಾಡುತ್ತಿಲ್ಲ ಎಂಬ ಆರೋಪಗಳಿಗೆ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯದಲ್ಲಿಯೂ ಅಗತ್ಯವಿದ್ದಷ್ಟು ಪರಿಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿಧಾನಸೌಧದಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಪಾಸಿಟಿವ್ ಸೂಚ್ಯಂಕ ಶೇ. 2.23 ಮಾತ್ರ: ಸುರೇಶ್ ಕುಮಾರ್
ಪ್ರತಿದಿನ ರಾಜ್ಯದಲ್ಲಿ 1500 ಕೋವಿಡ್ ಶಂಕಿತರ ಪರೀಕ್ಷೆ ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ವಾಸ್ತವದ ಆಧಾರದ ಮೇಲೆ ಆರೋಪ ಮಾಡಬೇಕು. ಪ್ರತಿದಿನದ 1500 ಕೊರೊನಾ ವೈರಸ್ ಶಂಕಿತರ ಟೆಸ್ಟ್ಗಳಲ್ಲಿ 10-15 ಪ್ರಕರಣಗಳು ಪತ್ತೆ ಆಗುತ್ತಿವೆ ಎಂದು ಹೇಳಿದ್ದಾರೆ.
279ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ 279ಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಇವತ್ತು ಒಂದೇ ದಿನದಲ್ಲಿ ರಾಜ್ಯದಲ್ಲಿ 19 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಅತಿಹೆಚ್ಚು ಅಂದರೆ 8, ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ 1, ಬಾಗಲಕೋಟೆ 1, ಬೆಂಗಳೂರು 2, ವಿಜಯಪುರ 3, ಕಲಬುರಗಿ 1, ಮೈಸೂರಿನಲ್ಲಿ 2, ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿಯಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿವೆ. ಈವರೆಗೆ ಸೋಂಕಿನಿಂದ ಒಟ್ಟು 12 ಜನರ ಮೃತರಾಗಿದ್ದು, 80 ಜನರು ಗುಣಮುಖರಾಗಿದ್ದಾರೆ.
ಸೋಂಕಿತರು ಹೆಚ್ಚಾಗುತ್ತಾರೆಂದು ಮೊದಲೆ ಗೊತ್ತಿತ್ತು
ಮೈಸೂರಿನಲ್ಲಿ ಕೋವಿಡ್ 19 ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಮೊದಲ ಕೇಸ್ ಪತ್ತೆ ಆದಾಗಲೇ ಗೊತ್ತಿತ್ತು ಎಂದು ಡಾ. ಸುಧಾಕರ್ ಹೇಳಿದ್ದಾರೆ. ಈಗ ಮೈಸೂರು ಜಿಲ್ಲೆಯಲ್ಲಿ ಪತ್ತೆಯಾಗಿರುವ ಹಾಗೂ ಪತ್ತೆ ಆಗುತ್ತಿರುವ ಎಲ್ಲ ಪೊಸಿಟಿವ್ ಕೇಸ್ಗಳು ಹೋಮ್ ಕ್ವಾರಂಟೈನ್ನಲ್ಲಿ ಇದ್ದವರು.
ರೂಂಮೇಟ್ ಗಳಾಗಿದ್ದ ಐವರು ಜುಬಿಲಿಯಂಟ್ ಕಾರ್ಮಿಕರಿಗೆ ಬಂತು ಕೊರೊನಾ
ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆ ಪ್ರಕರಣದಿಂದ ಅಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮುಂದೆ ಅಲ್ಲಿ ಪಾಸಿಟಿವ್ ಪ್ರಕರಣಗಳು ಬರ್ತಾ ಬರ್ತಾ ಕಡಿಮೆ ಆಗಲಿವೆ. ಯಾರೂ ಭಯ ಪಡೋದು ಬೇಡ. ನಮ್ಮ ರಾಜ್ಯದಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವ ಪ್ರಕರಣಗಳು 300ರ ಆಸುಪಾಸಿನಲ್ಲಿವೆ ಎಂದು ಡಾ. ಸುಧಾಕರ್ ಹೇಳಿದ್ದಾರೆ.
ತಲೆನೋವಾದ ಜ್ಯುಬಿಲೆಂಟ್ ಕಾರ್ಖಾನೆ ಪ್ರಕರಣ
ಮೈಸೂರು ಜಿಲ್ಲೆಯಲ್ಲಿ ಈವರೆಗೆ ಒಟ್ಟು 58 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ನಂಜನಗೂಡಿನ ಜ್ಯುಬಿಲೆಂಟ್ ಕಂಪನಿಯ P-52 ಪ್ರಕರಣ ಇಡೀ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಜ್ಯುಬಿಲೆಂಟ್ ಕಾರ್ಖಾನೆ ನೌಕರನಿಗೆ ಕೊರೊನಾ ವೈರಸ್ ಹೇಗೆ ಬಂದಿತು ಎಂಬುದು ಇನ್ನೂ ನಿಗೂಢವಾಗಿದೆ.
ಮೊದಲ ಕೇಸ್ ಪತ್ತೆಯಾದ ತಕ್ಷಣ ಕಾರ್ಖಾನೆಯ 1 ಸಾವಿರಕ್ಕೂ ಅಧಿಕ ನೌಕರರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಹೀಗಾಗಿ ಅಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ದೇಶದ ಕೊರೊನಾ ಹಾಟ್ಸ್ಪಾಟ್ಗಳಲ್ಲಿ ನಂಜನಗೂಡು ಗುರುತಿಸಲ್ಪಿಟ್ಟಿದೆ. ರಾಜ್ಯಾದ್ಯಂತ ಒಟ್ಟು 13,182 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.