ಕರ್ನಾಟಕದಲ್ಲಿ ಶೇ.83ರಷ್ಟು ಜನರಿಗೆ ಕೊವಿಡ್-19 ಲಸಿಕೆ ವಿತರಣೆ
ಬೆಂಗಳೂರು, ಅಕ್ಟೋಬರ್ 22: ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಕರ್ನಾಟಕವೂ ಟಾಪ್-10 ರಾಜ್ಯಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಈವರೆಗೂ ಶೇ.83ರಷ್ಟು ಅಂದರೆ 4.15 ಕೋಟಿ ಜನರಿಗೆ ಕೊವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 2.05 ಕೋಟಿ ಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ ಎಂದು ಸಚಿವ ರಾಜ್ಯದ ಸಹಕಾರ, ಉನ್ನತ ಶಿಕ್ಷಣ, ಐಟಿ, ಬಿಟಿ ಮತ್ತು ಎಸ್ಟಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರದ ಕಬಡ್ಡಿ ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಗಿದೆ ಎಂದರು. 3 ಜನ ವೈದ್ಯರು ಮತ್ತು ಇಬ್ಬರು ಪೌರಕಾರ್ಮಿಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎಂ. ಶಂಕರಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಬಿ. ನಾರಾಯಣ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಜಿ. ಮಂಜುನಾಥ್ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಎನ್. ಆರ್. ರಮೇಶ್, ಮಾಜಿ ಕಾರ್ಪೋರೇಟರ್ ಹೇಮಲತಾ ಶೇಟ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಜನಜೀವನ ಎಂದಿನಂತೆ ನಡೆಯಲು ಆರೋಗ್ಯ ಸಚಿವರು ಮತ್ತು ಸಚಿವ ಸಂಪುಟ ಶ್ರಮಿಸಿದೆ. ಆರ್ಥಿಕ ವಹಿವಾಟು ಕೋವಿಡ್ ಪೂರ್ವ ಅವಧಿಗಿಂತ ಹೆಚ್ಚು ಉತ್ತಮ ಹಂತಕ್ಕೆ ತಲುಪಿದೆ. ಲಸಿಕೆ ಆಶಾದಾಯಕ ಮತ್ತು ಭರವಸೆ ಮೂಡಿಸಿದೆ. ಮೂರನೇ ಡೋಸ್ ಲಸಿಕೆ ನೀಡುವ ಕೊಡುವ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೊವಿಡ್-19 ಲಸಿಕೆಗಾಗಿ 34,515 ಕೋಟಿ ಖರ್ಚು:
ಕೋವಿಡ್ ನಿಯಂತ್ರಣ ಮತ್ತು ಜನರ ಜೀವನ ರಕ್ಷಣೆ ವಿಚಾರದಲ್ಲಿ ಲಸಿಕೆ ಮಹತ್ವದ ಪಾತ್ರ ವಹಿಸಿದೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಶ್ರಮ ಹಾಗೂ ದೇಶದ ನಾಗರಿಕರ ಸಹಕಾರದಿಂದ 100 ಕೋಟಿ ಲಸಿಕೆ ಡೋಸ್ ಕೊಡಲು ಸಾಧ್ಯವಾಗಿದೆ. ಕೆಲವು ಮುಂದುವರಿದ ದೇಶಗಳಲ್ಲಿ ಶೇ.20ರಷ್ಟು ಲಸಿಕೆ ನೀಡುವುದಲ್ಲೂ ಸಾಧ್ಯವಾಗಿಲ್ಲ. ಇದು ಜನರು ನರೇಂದ್ರ ಮೋದಿಯವರ ನಾಯಕತ್ವ ಮತ್ತು ಜನಪರ ಕಾರ್ಯಕ್ರಮಗಳ ಬಗ್ಗೆ ನಂಬಿಕೆ, ವಿಶ್ವಾಸ ಮತ್ತು ಭರವಸೆ ಹೊಂದಿರುವುದರ ಸಂಕೇತವಾಗಿದೆ. ಸುಮಾರು 30 ಕೋಟಿ ಜನರಿಗೆ ಎರಡೂ ಲಸಿಕೆ ಕೊಡಲಾಗಿದೆ. 34,515 ಕೋಟಿ ರೂಪಾಯಿ ಒಟ್ಟು ವೆಚ್ಚವಾಗಿದೆ ಎಂದು ತಿಳಿಸಿದರು.
ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯಡಿ ಲಸಿಕೆ:
ಆತ್ಮ ನಿರ್ಭರ್ ಭಾರತ್ ಪರಿಕಲ್ಪನೆಯಡಿ ನಮ್ಮದೇ ಲಸಿಕೆಯನ್ನು ನಮ್ಮ ಜನರಿಗೆ ನೀಡಲಾಗಿದೆ. 18 ವರ್ಷ ಮೇಲ್ಪಟ್ಟ ಅರ್ಹ 90 ಕೋಟಿ ಜನರ ಪೈಕಿ 70 ಕೋಟಿ ಜನರಿಗೆ ಈಗಾಗಲೇ ಮೊದಲನೇ ಲಸಿಕೆ ಕೊಡಲಾಗಿದೆ. ದೀನದಲಿತರು, ವಂಚಿತರಿಗೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲ ಜನರಿಗೆ ಯಾವುದೇ ತಾರತಮ್ಯವಿಲ್ಲದೆ ಲಸಿಕೆ ಕೊಡಲಾಗಿದೆ. ಸಮಾನತೆಯ ಸಂದೇಶ ಈ ಮೂಲಕ ಕೊಟ್ಟಿದ್ದೇವೆ. ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳ ಪ್ರಯತ್ನದಿಂದ ಈ ಕಾರ್ಯ ಸಾಧ್ಯವಾಗಿದೆ ಎಂದರು.
ರಾಜ್ಯದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆಯಿಲ್ಲ:
2021ರ ಜನವರಿ 16ರಂದು ಪ್ರಧಾನಿಯವರು ಲಸಿಕೆ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಆರಂಭದಲ್ಲಿ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಲಸಿಕೆ ಕೊಡಲಾಯಿತು. ನಂತರ ಮುಂಚೂಣಿ ಕಾರ್ಯಕರ್ತರು, ಮಾರ್ಚ್ನಲ್ಲಿ 60ರಿಂದ ಮೇಲ್ಪಟ್ಟ ವಯಸ್ಕರಿಗೆ, ಏಪ್ರಿಲ್ ತಿಂಗಳಿನಿಂದ 45 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ, ಮೂರನೇ ಹಂತದಲ್ಲಿ ಮೇ 2021ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಕೊಡಲಾಯಿತು ಎಂದ ಅವರು.
ಜನವರಿ 2021ರಲ್ಲಿ 2.15 ಕೋಟಿ ಲಸಿಕೆ ನೀಡಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ 23.51 ಕೋಟಿ, ಅಕ್ಟೋಬರ್ ತಿಂಗಳ ಈವರೆಗೆ ಸುಮಾರು 26.61 ಕೋಟಿ ಲಸಿಕೆ ಕೊಡಲಾಗಿದೆ. ಮುಂದಿನ ತಿಂಗಳು ಇನ್ನೂ ಹೆಚ್ಚು ಲಸಿಕೆ ಕೊಡಲಾಗುವುದು. ಎಲ್ಲಿಯೂ ಲಸಿಕೆ ಕೊರತೆ ಇಲ್ಲ ಎಂದು ತಿಳಿಸಿದರು.
ವಿಶ್ವಗುರು ಆಗುವತ್ತ ಸಾಗುತ್ತಿದೆ ಭಾರತ:
ಮಾಸ್ಕ್, ವೆಂಟಿಲೇಟರ್, ಆಮ್ಲಜನಕ, ಹಾಸಿಗೆಗಳು ಸೇರಿದಂತೆ ಅನೇಕ ಸವಾಲುಗಳು ದೇಶದ ಮುಂದಿದ್ದವು. ಈ ಸವಾಲುಗಳಿಗೆ ಯಶಸ್ವಿಯಾಗಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎದುರಿಸಿದೆ. ಈಗ ಲಸಿಕೆಯನ್ನು ವಿಶ್ವದ ಇತರ ದೇಶಗಳಿಗೂ ಸರಬರಾಜು ಮಾಡಲಾಗುತ್ತಿದೆ. ಇತರ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ ಕನಿಷ್ಠ ಸೋಂಕಿತರು, ಅತ್ಯಂತ ಕಡಿಮೆ ಸಾವಿನ ಪ್ರಮಾಣ ನಮ್ಮ ದೇಶದ್ದಾಗಿದೆ. ಭರವಸೆಯ ನಾಡು ನಮ್ಮದು, ಭಾರತ ಭರವಸೆಯ ದೇಶ ಎಂಬುದು ಇದರಿಂದ ಸಾಬೀತಾಗಿದೆ. ವಿಶ್ವಗುರುವಾಗುವತ್ತ ನಮ್ಮ ದೇಶ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ವಿಶ್ವನಾಯಕರೇ ಹೊಗಳುತ್ತಿರುವಾಗ ಕಾಂಗ್ರೆಸ್ ಟೀಕೆ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಋಣಾತ್ಮಕ ಹೇಳಿಕೆ ನೀಡುವ ಮೂಲಕ ಏನು ತಿಳಿಸಲು ಹೊರಟಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಲಸಿಕೆ ಸಾಧನೆ ಬಗ್ಗೆ ವಿದೇಶಗಳ ನಾಯಕರೇ ಹೊಗಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಆರಂಭದ ದಿನಗಳಲ್ಲಿ ಲಸಿಕೆ ವಿರುದ್ಧ ಪ್ರಚಾರ ಮಾಡಿದ್ದರು ಎಂದು ನೆನಪಿಸಿದರು. ವಿಶ್ವವೇ ಬೆರಗಾಗುವ ಮಾದರಿಯಲ್ಲಿ 100 ಕೋಟಿ ಲಸಿಕೆ ನೀಡಿದ್ದು ಅಸಾಧಾರಣ ಸಾಧನೆ. ಅದನ್ನು ನಾವೀಗ ಆಚರಿಸುತ್ತಿದ್ದೇವೆ. ಸಿದ್ದರಾಮಯ್ಯನವರು ಕೀಳುಮಟ್ಟದ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
Recommended Video