ಸಿದ್ದರಾಮಯ್ಯ ಬಂದ ಮೇಲೆ ಹೆಂಗಿದ್ದ ಪರಮೇಶ್ವರ್ ಹೇಗಾಗಿ ಹೋದ್ರು!
ಜುಲೈ 2006ರಲ್ಲಿ ಅಂದರೆ, ಇಂದಿಗೆ ಹನ್ನೆರಡು ವರ್ಷಗಳ ಹಿಂದೆ, ಜನತಾ ಪರಿವಾರದಲ್ಲಿದ್ದ ದೇವೇಗೌಡರ ಗರಡಿಯ ಸಿದ್ದರಾಮಯ್ಯ, ಕಾಂಗ್ರೆಸ್ಸಿಗೆ ಸೇರಿದಾಗ, ದೆಹಲಿಯಲ್ಲಿ ಅವರಿಗೆ ರತ್ನಗಂಬಳಿಯ ಸ್ವಾಗತವನ್ನು ನೀಡಲಾಗಿತ್ತು. ಒಲ್ಲದ ಮನಸ್ಸಿನಿಂದಲೇ ಇಲ್ಲಿನ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯಗೆ ಸ್ವಾಗತವನ್ನೂ ಕೋರಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಂದಿನಿಂದ, ಪ್ರಸಕ್ತ ಲೋಕಸಭಾ ಚುನಾವಣೆಯ ಹೊಸ್ತಿಲವರೆಗೆ ರಾಜ್ಯ ಕಾಂಗ್ರೆಸ್ಸಿನ ಸ್ಥಿತಿಗತಿಯನ್ನು ಅವಲೋಕಿಸುವುದಾದರೆ ಸಿದ್ದರಾಮಯ್ಯನವರೇ ಇಲ್ಲಿ ಟಗರು.. ತಾವಾಡಿದ್ದೇ ವೇದವ್ಯಾಕ, ತಾವಿಟ್ಟಿದ್ದೇ ದಿಟ್ಟಹೆಜ್ಜೆ ಎಂದು ಹಂತಹಂತದಲ್ಲೂ ಮೂಲ ಕಾಂಗ್ರೆಸ್ಸಿಗರಿಗೆ ತನ್ನ ಚಾಣಾಕ್ಷ ನಡೆಯಿಂದ ತೋರಿಸಿಕೊಂಡು ಬರುತ್ತಲೇ ಇದ್ದಾರೆ.
ತುಮಕೂರು ಕೈತಪ್ಪಿದ್ದಕ್ಕೆ ಪರಮೇಶ್ವರ್ ಗರಂ, ಸಭೆಯಿಂದ ದೂರ
ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ದ ಸಿದ್ದರಾಮಯ್ಯ ಸೆಟೆದು ನಿಂತಷ್ಟು ಬೇರೆಯಾವ ರಾಜ್ಯ ಕಾಂಗ್ರೆಸ್ಸಿಗರೂ ನಿಲ್ಲಲಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಇದೇ ಕಾರಣಕ್ಕಾಗಿಯೇ ಏನೋ, ಸಿದ್ದರಾಮಯ್ಯ, ಕಡಿಮೆ ಅವಧಿಯಲ್ಲಿ ಹೈಕಮಾಂಡ್ ವಿಶ್ವಾಸಕ್ಕೆ ಪಾತ್ರರಾದವರು ಅಥವಾ ಹೈಮಾಂಡಿಗೆ ಬೇರೆ ವಿಧಿಯಿಲ್ಲದೇ ಇವರ ಮಾತಿಗೆ ಬೆಲೆಕೊಟ್ಟಿದ್ದರೂ ಕೊಟ್ಟಿರಬಹುದು.
ಮೈತ್ರಿ ಧರ್ಮದ ಪಾಲನೆಯ ಅನುಸಾರ, ಜೆಡಿಎಸ್ ವರಿಷ್ಠ ದೇವೇಗೌಡ್ರು, ತುಮಕೂರಿನಲ್ಲಿ ಸೋಮವಾರ (ಮಾ 25) ನಾಮಪತ್ರ ಸಲ್ಲಿಸಿದ್ದಾರೆ. ಸೀಟು ಚೌಕಾಸಿಯ ವಿಷಯದಲ್ಲಿ ಪರಮೇಶ್ವರ್ ಅವರು ತಮ್ಮ ಉಸ್ತುವಾರಿಯ ತುಮಕೂರು ಕ್ಷೇತ್ರವನ್ನು ಉಳಿಸಿಕೊಳ್ಳಲಾಗಲಿಲ್ಲ. ಒಂದು ಲೈನ್ ನಲ್ಲಿ ಹೇಳಬಹುದಾದರೆ, ಪರಮೇಶ್ವರ್ ಮುಂದೆ ಸಿದ್ದರಾಮಯ್ಯನವರ ರಾಜಕೀಯ ಮೇಲುಗೈ ಮುಂದುವರಿಯುತ್ತಿರುವುದಕ್ಕೆ ಇದು ಮತ್ತೊಂದು ಸೇರ್ಪಡೆ.
ಕಾಂಗ್ರೆಸ್-ಜೆಡಿಎಸ್ ನಾಯಕರ ಸಭೆಗೆ ಗೈರು, ಪರಮೇಶ್ವರ ಸ್ಪಷ್ಟನೆ
ತುಮಕೂರು ಕ್ಷೇತ್ರದ ಹಾಲೀ ಸಂಸದ ಮುದ್ದಹನುಮೇಗೌಡ ಬಂಡಾಯ
ತುಮಕೂರು ಕ್ಷೇತ್ರದ ಹಾಲೀ ಸಂಸದ ಮುದ್ದಹನುಮೇಗೌಡರನ್ನು ಒಬ್ಬರನ್ನು ಬಿಟ್ಟು, ಮಿಕ್ಕೆಲ್ಲರಿಗೂ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅತ್ತ, ಮೈಸೂರು ಕ್ಷೇತ್ರವನ್ನು ಕಳೆದ ಬಾರಿ ಸೋತಿದ್ದರೂ, ಸಿದ್ದರಾಮಯ್ಯ ಉಳಿಸಿಕೊಳ್ಳುವುದರ ಮೂಲಕ, ಮತ್ತೆ ಕಾಂಗ್ರೆಸ್ ನಲ್ಲಿ ತನ್ನ ಹಿಡಿತ ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ನಲ್ಲಿ ಏನೇ ಆಗಬೇಕಿದ್ದರೂ, ಸಿದ್ದರಾಮಯ್ಯನವರನ್ನು ಭೇಟೀಯಾಗುವ ಪರಿಪಾಠದ ಪ್ರಮಾಣ ಹೆಚ್ಚಾಗುತ್ತಿದೆ.
ಪರಮೇಶ್ವರ್ ಹೊಂದಿದ್ದ ಆಯಕಟ್ಟಿನ ಗೃಹ ಖಾತೆ
ಕಳೆದ ಕ್ಯಾಬಿನೆಟ್ ವಿಸ್ತರಣೆಯ ವೇಳೆ, ಪರಮೇಶ್ವರ್ ಹೊಂದಿದ್ದ ಆಯಕಟ್ಟಿನ ಗೃಹ ಖಾತೆಯನ್ನು ಅವರ ಕೈಯಿಂದ ಕಿತ್ತು, ತಮ್ಮ ಆಪ್ತವಲಯದಲ್ಲಿ ಕಾಣಿಸಿಕೊಳ್ಳುತ್ತಿರುವ ಎಂ ಬಿ ಪಾಟೀಲರಿಗೆ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆಯ ವಿಚಾರದಲ್ಲೂ, ಸಿದ್ದರಾಮಯ್ಯ ತನ್ನ ಮಾತಿಗೆ ಎರಡೂ ಕಡೆಯಿಂದ ಸಹಮತಗಿಟ್ಟಿಸುಕೊಳ್ಳುವಲ್ಲಿ ಸೈಎನಿಸಿಕೊಂಡರು.
ಪರಮೇಶ್ವರಗೆ 3 ಬಾರಿ ಕೈಕೊಟ್ಟ ಸಿಎಂ ಪಟ್ಟ, ನಿಗೂಢ ಕಾರಣ ಬಹಿರಂಗ
ಸಿದ್ದರಾಮಯ್ಯ ನಡೆಸುವಷ್ಟು ಖಡಕ್ ರಾಜಕಾರಣ ಮತ್ತೊಬ್ಬರು ನಡೆಸುತ್ತಿರುವ ಉದಾಹರಣೆಗಳು ಕಮ್ಮಿ
ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷ, ಉಪಮುಖ್ಯಮಂತ್ರಿ, ಯಾವುದೇ ಕ್ಯಾಬಿನೆಟ್ ಸಚಿವರಾಗಲಿ, ಸಿದ್ದರಾಮಯ್ಯ ನಡೆಸುವಷ್ಟು ಖಡಕ್ ರಾಜಕಾರಣ ಮತ್ತೊಬ್ಬರು ನಡೆಸುತ್ತಿರುವ ಉದಾಹರಣೆಗಳು ಕಮ್ಮಿ. ಆ ಕಾರಣಕ್ಕಾಗಿಯೇ ಏನೋ, ಸಿದ್ದರಾಮಯ್ಯ ದಿನದಿಂದ ದಿನಕ್ಕೆ ತನ್ನ ಹಿಡಿತವನ್ನು ಮುಂದುವರಿಸಿಕೊಂಡು ಬರುತ್ತಲೇ ಇದ್ದಾರೆ. ಕ್ಯಾಬಿನೆಟ್ ವಿಸ್ತರಣೆ, ಸೀಟು ಹಂಚಿಕೆಯ ವಿಚಾರದಲ್ಲಿ ಪರಮೇಶ್ವರ್ ಸಿಟ್ಟಿಗೆ ಬೆಲೆಯೇ ಇಲ್ಲವೇ ಎನ್ನುವ ವಾತಾವರಣ ನಿರ್ಮಾಣವಾದಂತಿದೆ.
ತುಮಕೂರಿಂದ ಸ್ಪರ್ಧಿಸಲು ಕಾಂಗ್ರೆಸ್ಸೇ ಒಪ್ಪಿಗೆ ಕೊಟ್ಟಿರುವುದು, ಗೌಡ್ರ ಹೇಳಿಕೆ
ದೇವೇಗೌಡ್ರು ಮತ್ತು ಕುಮಾರಸ್ವಾಮಿ, ಪದೇಪದೇ ತುಮಕೂರಿಂದ ಸ್ಪರ್ಧಿಸಲು ಕಾಂಗ್ರೆಸ್ಸೇ ಒಪ್ಪಿಗೆ ಕೊಟ್ಟಿರುವುದು ಎನ್ನುವ ಮೂಲಕ, ಪರಮೇಶ್ವರ್ ಅವರಿಗೆ ಇನ್ನಷ್ಟು ಕಸಿವಿಸಿಯನ್ನು ತಂದೊಡ್ಡುತ್ತಿದ್ದಾರೆ. ಈಗ, ಕ್ಷೇತ್ರದ ಹಾಲೀ ಸಂಸದ ಮುದ್ದಹನುಮೇಗೌಡರನ್ನು ಮತ್ತು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಪರಮೇಶ್ವರ್ ಹರಸಾಹಸ ಪಡುತ್ತಿದ್ದಾರೆ. ಧಿಕ್ಕಾರ ಕೂಗುತ್ತಿದ್ದಾರೆ, ಜೆಡಿಎಸ್-ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಎಲ್ಲದಕ್ಕೂ ಈಗ ಪರಮೇಶ್ವರ್ ಕಡೆ ಬೊಟ್ಟು ತೋರಿಸಲಾಗುತ್ತಿದೆ. ಮುದ್ದಹನುಮೇಗೌಡರು ತುಮಕೂರಿನಲ್ಲಿ ನಾಮಪತ್ರವನ್ನೂ ಸಲ್ಲಿಸಿದ್ದಾರೆ.
ಕ್ಷೇತ್ರ ಹಂಚಿಕೆ ಅಂತಿಮವಾದ ನಂತರ ತುಮಕೂರು ನಮಗೆ ಬೇಕು ಎಂದರೆ ಹೇಗೆ
ಕ್ಷೇತ್ರ ಹಂಚಿಕೆ ಅಂತಿಮವಾದ ನಂತರ ತುಮಕೂರು ನಮಗೆ ಬೇಕು ಎಂದರೆ ಹೇಗೆ, ಮಾತುಕತೆಯ ವೇಳೆಯೇ ಖಡಕ್ ಆಗಿ ನಿಲ್ಲಬೇಕಾಗಿತ್ತಲ್ಲ ಎನ್ನುವ ಕ್ಷೇತ್ರದ ಮುಖಂಡರ ಮಾತಿಗೆ ಪರಮೇಶ್ವರ್ ಬಳಿ ಉತ್ತರವಿಲ್ಲ. 20-8 ಘೋಷಣೆಯಾದ ನಂತರ ಪರಮೇಶ್ವರ್ ಅವರ ಯಾವ ಮಾತಿಗೂ ಕಾಂಗ್ರೆಸ್ ಹೈಕಮಾಂಡ್ ತಲೆಕೆಡಿಸಿಕೊಳ್ಳುತ್ತಿಲ್ಲ. ಸಿದ್ದರಾಮಯ್ಯ, ಕಾಂಗ್ರೆಸ್ ಸೇರಿದ ನಂತರ ಪರಮೇಶ್ವರ್ ಅವರಿಗೆ ಸತತವಾಗಿ ಹಿನ್ನಡೆಯಾಗುತ್ತಿರುವ ಉದಾಹರಣೆಗಳ ಪಟ್ಟಿಗೆ ತುಮಕೂರು ಕ್ಷೇತ್ರದ ಲೋಕಸಭಾ ಚುನಾವಣೆ ಇನ್ನೊಂದು ಸೇರ್ಪಡೆ ಅಷ್ಟೇ..