ಬಿಜೆಪಿ ಟಿಕೆಟ್ ರಾಜಕಾರಣ: ಕೆಜಿಎಫ್ನಲ್ಲಿ ಕೇಂದ್ರ ಸಚಿವರಿಗೇ ಮುತ್ತಿಗೆ
ಕೋಲಾರ, ಮಾರ್ಚ್ 16: ಕೋಲಾರದಲ್ಲಿ ಬಿಜೆಪಿ ಟಿಕೆಟ್ಗಾಗಿ ನಡೆಯುತ್ತಿರುವ ಜಟಾಪಟಿ ತಾರಕಕ್ಕೆ ಹೋಗಿದ್ದು, ಇಂದು ಟಿಕೆಟ್ ಆಕಾಂಕ್ಷಿಯ ಬೆಂಬಲಿಗರು ಕೇಂದ್ರ ಸಚಿವರಿಗೆ ಮುತ್ತಿಗೆ ಹಾಕಿ ಟಿಕೆಟ್ಗೆ ಒತ್ತಾಯಿಸಿದ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಜಟಾಪಟಿ ನಡೆಯುತ್ತಿದ್ದು, ಇಂದು ಮಾಜಿ ಶಾಸಕ ವೈ.ಸಂಪಂಗಿ ಅಥವಾ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿ ಕೆಲವು ಬಿಜೆಪಿ ಕಾರ್ಯಕರ್ತರು ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರ ಕಾರಿಗೆ ಶುಕ್ರವಾರ ಮುತ್ತಿಗೆ ಹಾಕಿದರು.
ಕೇಂದ್ರ ಸಚಿವ ತಾವರ್ ಚಂದ್ ಅವರು ಕೆಜಿಎಫ್ನಲ್ಲಿ ಆಯೋಜನೆಯಾಗಿದ್ದ ಪಕ್ಷದ ಬೂತ್ ಸಮಿತಿ ಸಭೆಗೆ ಬರುತ್ತಿದ್ದಾಗ ಕಾರ್ಯಕರ್ತರು ಮಾರ್ಗಮಧ್ಯೆ ರಾಬರ್ಟ್ಸನ್ಪೇಟೆಯಲ್ಲಿ ಅವರ ಕಾರನ್ನು ಅಡ್ಡಗಟ್ಟಿದರು. ವೈ.ಸಂಪಂಗಿ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದರು. ಈ ವೇಳೆ ಸಂಪಂಗಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಸಚಿವರೊಂದಿಗೆ ವಾಹನದಲ್ಲೇ ಇದ್ದರು.
'ಸಂಪಂಗಿ ಹಾಗೂ ಕುಟುಂಬ ಸದಸ್ಯರು ಹೊರಗಿನಿಂದ ವಲಸೆ ಬಂದವರು. ಚುನಾವಣೆಯಲ್ಲಿ ಗೆದ್ದ ನಂತರ ಅವರು ಕ್ಷೇತ್ರದತ್ತ ತಿರುಗಿಯೂ ನೋಡುವುದಿಲ್ಲ. ಈ ಬಾರಿ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ಕೊಡಬಾರದು. ಪಕ್ಷದಲ್ಲಿನ ಸ್ಥಳೀಯ ಮುಖಂಡರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು' ಎಂದು ಕಾರ್ಯಕರ್ತರು ಒತ್ತಾಯಿಸಿದರು. ಅಲ್ಲದೇ, ಸಚಿವರ ಎದುರೇ ಸಂಪಂಗಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಾಹನದಿಂದ ಕೆಳಗಿಳಿದ ತಾವರ್ ಚಂದ್, 'ಕಾರ್ಯಕರ್ತರ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸುತ್ತೇನೆ. ವರಿಷ್ಠರು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ' ಎಂದು ಭರವಸೆ ನೀಡಿದರು. ಬಳಿಕ ಪೊಲೀಸರು ಕಾರ್ಯಕರ್ತರ ಗುಂಪನ್ನು ಚದುರಿಸಿ ಸಚಿವರಿಗೆ ಮುಂದೆ ತೆರಳಲು ಅವಕಾಶ ಮಾಡಿಕೊಟ್ಟರು.
ಸಂಪಗಿ ಅವರು ತಮ್ಮ ತಾಯಿ ರಾಮಕ್ಕ ಅವರಿಗೆ ಟಿಕೆಟ್ ಕೊಡಿಸಿದ್ದು ಈ ಬಾರಿ ಸಂಪಗಿ ಅವರ ಮಗಳಿಗೆ ಟಿಕೆಟ್ ಕೇಳಿರುವುದು ಕೆಜಿಎಫ್ ಬಿಜೆಪಿಯಲ್ಲಿ ಕಾರ್ಯಕರ್ತರಲ್ಲಿಯೇ ಅಸಮಾಧಾನ ಹುಟ್ಟುಹಾಕಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ.