ಡೈರಿಗೇಟ್ ವಿಡಿಯೋಗೆ ಫೇಸ್ಬುಕ್ಕಲ್ಲಿ ಭಾರೀ ಸ್ಪಂದನೆ
ಜನರ ದುಡ್ಡು ಪೋಲಾಗುತ್ತಿದೆ, ಜನರನ್ನು ಆಳುವವರೇ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಸಂಗತಿ ಗೊತ್ತಿದ್ದರೂ ಲೋಕಾಯುಕ್ತದಂಥ ಸಂಸ್ಥೆ ಕಣ್ಣುಮುಚ್ಚಿ ಕುಳಿತಿದ್ದೇಕೆ ಎಂಬ ಪ್ರಶ್ನೆಗೆ ಸೋಷಿಯಲ್ ಮೀಡಿಯಾ ಸ್ನೇಹಿತರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, ಮಾರ್ಚ್ 01 : ಕಾಂಗ್ರೆಸ್ ನಾಯಕರು ತಮ್ಮ ಹೈಕಮಾಂಡಿಗೆ, ಬಿಜೆಪಿ ಮುಖಂಡರು ತಮ್ಮ ಹೈಕಮಾಂಡಿಗೆ ಕಪ್ಪಕಾಣಿಕೆ ನೀಡಿದ್ದರ ಬಗ್ಗೆ ಕರ್ನಾಟಕ ಲೋಕಾಯುಕ್ತಕ್ಕೆ ಮೊದಲೇ ಮಾಹಿತಿ ಇದ್ದರೂ ಸುಮ್ಮನಿದ್ದಿದ್ದೇಕೆ? ಎಂದು ಒನ್ಇಂಡಿಯಾ ಕನ್ನಡ ವಿಡಿಯೋ ಮೂಲಕ ಆರಂಭಿಸಿದ ಚರ್ಚೆಗೆ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗಿದೆ.
ಕಾಂಗ್ರೆಸ್ ನಲ್ಲಿ ಆದ ಭ್ರಷ್ಟಾಚಾರದ ಬಗ್ಗೆ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ವಾಗ್ದಾಳಿ ಶುರು ಮಾಡಿದ ಮೇಲೆ, ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಯಲ್ಲಿ ನಡೆದ ಕಪ್ಪಕಾಣಿಕೆಯ ವ್ಯವಹಾರದ ಬಗ್ಗೆ ಕಾಂಗ್ರೆಸ್ (2013ರಲ್ಲಿ ಬರೆದಿದೆಯೆನ್ನಲಾದ) ಹಳೆಯ ಡೈರಿಯೊಂದನ್ನು ಬಿಡುಗಡೆ ಮಾಡಿದೆ. ಟಿಟ್ ಫಾರ್ ಟ್ಯಾಟ್!
ಆ ಡೈರಿಯಲ್ಲಿದ್ದದ್ದೆಲ್ಲ ಸುಳ್ಳು, ಆ ಡೈರಿ ನಾನು ಸಹಿಯೇ ಮಾಡಿಲ್ಲ, ಆ ಸಮಯದಲ್ಲಿ ಅಲ್ಲಿ ಹೆಸರಿರುವ ನಾಯಕರು ಅಧಿಕಾರದಲ್ಲಿಯೇ ಇರಲಿಲ್ಲ ಎಂಬಿತ್ಯಾದಿ ಪ್ರತ್ಯಾರೋಪಗಳನ್ನು ಬಿಜೆಪಿ ನಾಯಕರು ಮಾಡಲು ಆರಂಭಿಸಿದರು. ಈ ವಿಷಯದ ಸತ್ಯಾಸತ್ಯತೆ ಏನೇ ಇರಲಿ, ಯಾವ ರಾಜಕಾರಣಿಯೂ ಕಪ್ಪಕಾಣಿಕೆ ಸಲ್ಲಿಸದೆ ಬದುಕಲು ಸಾಧ್ಯವಿಲ್ಲ ಎಂಬುದು ಜನರಿಗೆ ತಿಳಿಯದ ವಿಷಯವೇನಿಲ್ಲ.
ಆದರೆ, ಇಂಥ ಹಗರಣಗಳು ನಡೆಯುತ್ತಿವೆ, ಜನರ ದುಡ್ಡು ಪೋಲಾಗುತ್ತಿದೆ, ಜನರನ್ನು ಆಳುವವರೇ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಸಂಗತಿ ಗೊತ್ತಿದ್ದರೂ ಲೋಕಾಯುಕ್ತದಂಥ ಸಂಸ್ಥೆ ಕಣ್ಣುಮುಚ್ಚಿ ಕುಳಿತಿದ್ದೇಕೆ ಎಂಬ ಪ್ರಶ್ನೆಗೆ ಸೋಷಿಯಲ್ ಮೀಡಿಯಾ ಸ್ನೇಹಿತರು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ 90 ಸಾವಿರಕ್ಕೂ ಹೆಚ್ಚು ಜನರನ್ನು ತಲುಪಿದ್ದು, ಎರಡೂವರೆ ಸಾವಿರಕ್ಕೂ ಹೆಚ್ಚು ಲೈಕ್ ಮಾಡಿದ್ದು, 250ಕ್ಕೂ ಹೆಚ್ಚು ಶೇರ್ ಆಗಿದ್ದು, ಲೆಕ್ಕವಿಲ್ಲದಷ್ಟು ಕಾಮೆಂಟುಗಳನ್ನು ಪಡೆದಿವೆ. [ಡೊನೇಷನ್ ಗೇಟ್ ಪಿತೂರಿ : ಯಾವುದು ಸತ್ಯ, ಯಾವುದು ಮಿಥ್ಯ?]
ಅವುಗಳಲ್ಲಿ ಕೆಲವೊಂದು ಇಂಟರೆಸ್ಟಿಂಗ್ ಕಾಮೆಂಟುಗಳನ್ನು ಹೆಕ್ಕಿ ಇಲ್ಲಿ ನೀಡಿದ್ದೇವೆ. [ವಿಡಿಯೋ ಇಲ್ಲಿದೆ ನೋಡಿ]
ಸಂತೋಷ್ ಹೆಗ್ಡೆ ಮತ್ತೆ ಲೋಕಾಯುಕ್ತರಾಗಲಿ
ಬೇಲಿಯೇ ಎದ್ದು ಹೊಲ ಮೇಯುವಾಗ ಯಾರು ಏನು ಮಾಡಲು ಸಾಧ್ಯ? ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಪಕ್ಷಭೇದ ಇಲ್ಲದಿದ್ದರೆ ಈ ವಿಷಯದ ಬಗ್ಗೆ ದನಿ ಎತ್ತಲಿ. ಇಲ್ಲದಿದ್ದರೆ, ಸಂತೋಷ್ ಹೆಗಡೆ ಅವರೇ ಮತ್ತೆ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಲಿ ಎಂದು ಕೆಲವರು ವಾದ ಮಂಡಿಸಿದ್ದಾರೆ. ಹಿತ್ತಾಳೆ ಕಿವಿಗಳ ರಾಜಕಾರಣಿಗಳಿಗೆ ಇದು ಕೇಳುವುದಾದರೂ ಹೇಗೆ?
ಬ್ರಿಟಿಷರಿಗಿಂತ ಜಾಸ್ತಿ ಲೂಟಿಯಾಗಿರಬಹುದು
60 ವರ್ಷಗಳಲ್ಲಿ ಇನ್ನೆಷ್ಟು ಡೈರಿಗಳು ತುಂಬಿರಬೇಕು, ನೀವೇ ಲೆಕ್ಕ ಹಾಕಿ. ಬ್ರಿಟಿಷರಿಗಿಂತ ಜಾಸ್ತಿ ಲೂಟಿಯಾಗಿರಬಹುದು ನಮ್ಮ ರಾಜಕಾರಣಿಗಳಿಂದ. ಓನ್ಇಂಡಿಯಾ ಡೈರಿ ಲೂಟಿ ವಿಚಾರ ಚರ್ಚೆ ಮುಖಾಂತರ ಮಾಡುತ್ತಿರುವುದು ಗಮನಾರ್ಹ ಎಂದು ಸತೀಶ್ ಬಸವಾರಾಧ್ಯ ಎಂಬುವವದು ಕಾಮೆಂಟ್ ಮಾಡಿ ಬೆನ್ನುತಟ್ಟಿದ್ದಾರೆ.
ಜನ ಕುಡಿಯುವ ನೀರಿಲ್ಲದೆ ಸಾಯುತ್ತಿದ್ದಾರೆ
ಕರ್ನಾಟಕದಲ್ಲಿ ಬರ ಬಂದು ಜನ ಕುಡಿಯುವ ನೀರಿಲ್ಲದೆ ಸಾಯುತ್ತಿದ್ದಾರೆ, ಜಾನುವಾರುಗಳು ನೀರಿಲ್ಲದೆ ಮೇವಿಲ್ಲದೆ ಬಲಿಯಾಗುತ್ತಿವೆ. ಇಂಥದ್ದರಲ್ಲಿ ಇವರ ರಾಜಕೀಯ ಜಗಳದಿಂದ ನಮ್ಮ ರಾಜ್ಯದ ಮಾನ ಮರ್ಯಾದೆ ಹೋಗುತ್ತಿದೆ. ಇದರ ಲಾಭವನ್ನು ಬೇರೆ ರಾಜ್ಯಗಳು ಪಡೆಯುತ್ತವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ ನಂದೀಶ್ ಎನ್ನುವವರು. [ಅನ್ನದಾತನ ತಟ್ಟೆಯೇ ಖಾಲಿಖಾಲಿ]
ಎಲ್ಲರನ್ನೂ ಜೈಲಿಗೆ ಹಾಕಬೇಕು
ಕರೆಕ್ಟಾಗಿ ಹೇಳಿದ್ದಿರಿ ಮೇಡಂ, ಡೈರಿನಲ್ಲಿ ಹೆಸರು ಇರುವ ಎಲ್ಲರನ್ನೂ ಜೈಲಿಗೆ ಹಾಕಬೇಕು. ಇವರು ಹೊಡೆದಿರೋ ದುಡ್ಡು ಜನರ ದುಡ್ಡು. ಮೊದಲು ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕು. ತನಿಖೆಯನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಒಂದಿಬ್ಬರು ಸೂಕ್ತ ಸಲಹೆ ಕೊಟ್ಟಿದ್ದಾರೆ. ದೂರೇ ಕೊಡದಿದ್ದ ಮೇಲೆ ತನಿಖೆ ನಡೆಯುವುದಾದರೂ ಹೇಗೆ?
ಜನರನ್ನು ಮೂರ್ಖರನ್ನಾಗಿಸುವ ನಾಟಕಗಳು
ಇವೆಲ್ಲ ಜನರನ್ನು ಮೂರ್ಖರನ್ನಾಗಿಸುವ ನಾಟಕಗಳು. ನೀವು ಉತ್ತಮ ಮಾಹಿತಿ ನೀಡಿರಬಹುದು. ಆದರೆ ಇದು ಭಾರತ, ಇಲ್ಲಿ ಯಾವುದನ್ನೂ ಅಷ್ಟು ಸಲೀಸಾಗಿ ಬದಲಾಯಿಸಲು ಸಾಧ್ಯವಿಲ್ಲ. ಈ ದೇಶದಲ್ಲಿನ ಬಡವರ, ರೈತರ ಗೋಳು ಕೇಳುವವರ್ಯಾರು ಎಂದು ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿವೆ. [ಬಂಡಳ್ಳಿಯಲ್ಲಿ ಮಹಿಳೆಯರಿಗೆ ನೀರು ತರುವುದೇ ಕೆಲಸ]
ರಾಜಕೀಯಕ್ಕೆ ಮತ್ತೊಂದು ಹೆಸರೇ ಕೆಸರು
ಇಡೀ ರಾಜಕೀಯವೇ ಹೊಲಸೆದ್ದು ಹೋಗಿದೆ. ರಾಜಕೀಯಕ್ಕೆ ಮತ್ತೊಂದು ಹೆಸರೇ ಕೆಸರು. ಇಂಥ ಹೊಲಸು ರಾಜಕಾರಣವನ್ನು ನಮ್ಮ ಕರ್ನಾಟಕದ ರಾಜರಕಾರಣಿಗಳು ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಶಿವರಾಜ್ ಎಂಬುವವರು ಮನದಾಳದ ಆಕ್ರೋಶ ಹೊರಹಾಕಿದ್ದಾರೆ. ಸ್ವಚ್ಛ ರಾಜಕಾರಣವನ್ನು ನಮ್ಮ ರಾಜಕಾರಣಿಗಳು ಯಾರು ಮಾಡಿದ್ದಾರೆ ಹೇಳಿ?
ಸಿಬಿಐಗೆ ತನಿಖೆಗೆ ವಹಿಸಬೇಕು
ನಮ್ಮ ಕರ್ನಾಟಕಕ್ಕೆ ಹೊಸ ಲೋಕಾಯುಕ್ತರು ಯಾವಾಗ ಬರುತ್ತಾರೆ? ಲೋಕಾಯುಕ್ತ ನೇಮಕವಾಗದಿದ್ದರೆ ಈ ಡೈರಿಗೇಟ್ ಪ್ರಕರಣವನ್ನು ಸಿಬಿಐಗಾಗಲಿ ತನಿಖೆಗೆ ವಹಿಸಬೇಕು. ಎಷ್ಟು ದಿನ ಈ ಭ್ರಷ್ಟಾಚಾರವನ್ನು ಸಹಿಸಿಕೊಂಡು ಇರುವುದು? ಇವರಿಗೆ ಹೇಳೋರು ಕೇಳೋರು ಯಾರೂ ಇಲ್ವಾ ಎಂದು ಫೇಸ್ ಬುಕ್ ಸ್ನೇಹಿತರು ಸಿಟ್ಟನ್ನು ಹೊರಹಾಕಿದ್ದಾರೆ.