ಸಾರ್ವಜನಿಕ ಮನವಿ ಕುರ್ಚಿಯ ಕೆಳಗಿಟ್ಟು ಕೂರುವಂತಿಲ್ಲ-ಹೈಕೋರ್ಟ್ '
ಬೆಂಗಳೂರು,ಆ.5. ಸರ್ಕಾರದ ಇಲಾಖೆಗಳಿಗೆ ಸಾರ್ವಜನಿಕರು ಸಲ್ಲಿಸುವ ಮನವಿಗಳನ್ನು ಅಧಿಕಾರಿಗಳು ಕುರ್ಚಿಯ ಕೆಳಗಿಟ್ಟು ಕುಳಿತುಕೊಳ್ಳಬಾರದು ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೆ, ಮನವಿಗಳನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಬಗ್ಗೆ ನಿರ್ದಿಷ್ಟ ಕಾಲಮಿತಿಯಲ್ಲಿನಿರ್ಧಾರ ಕೈಗೊಳ್ಳಬೇಕು. ಅದನ್ನು ಬಿಟ್ಟು ಆ ಮನವಿಗಳನ್ನು ಸಾರ್ವಜನಿಕರು ನ್ಯಾಯಾಲಯದ ಕದ ತಟ್ಟುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಹಾಸನ ಜಿಲ್ಲೆಯ ಸಕಲೇಶಪುರದ ದೋಣಿಗಲ್ ಗ್ರಾಮದ ನಿವಾಸಿ ರಾಣಿ ಮಲ್ಲೇಶ್ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ ಅವರಿದ್ದ ಪೀಠ, ಸರ್ಕಾರದ ಇಲಾಖೆಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ.
ಪರಿಹಾರ ಕೋರಿ ಅರ್ಜಿದಾರರು 2019ರ ಜ. 17 ಹಾಗೂ ಏ.7ರಂದು ಸಲ್ಲಿಸಿರುವ ಮನವಿಗಳನ್ನು 8 ವಾರಗಳಲ್ಲಿಪರಿಗಣಿಸಿಬೇಕು ಎಂದು ಎನ್ಎಚ್ಎಐಗೆ ನಿರ್ದೇಶಿಸಿರುವ ಹೈಕೋರ್ಟ್, ನ್ಯಾಯಾಲಯದ ಆದೇಶ ಪ್ರತಿಯನ್ನು ಹೈಕೋರ್ಟ್ ವೆಬ್ಸೈಟ್ನಲ್ಲಿಪ್ರಕಟಿಸಲಾಗುತ್ತದೆ. ಈ ಆದೇಶದ ಪ್ರತಿ ಪಡೆದು ಪ್ರತಿವಾದಿಗಳು ಆದೇಶ ಪಾಲಿಸಬೇಕು. ಇಲ್ಲವೇ ಅರ್ಜಿದಾರರು ಈ ಆದೇಶದ ಪ್ರತಿ ನೀಡಿದರೆ ಅದನ್ನು ಪರಿಗಣಿಸಬೇಕು. ದೃಢೀಕೃತ ಆದೇಶ ಪ್ರತಿಗಾಗಿ ಕಾಯಬಾರದು. ಆದೇಶದ ಬಗ್ಗೆ ಅನುಮಾನಗಳಿದ್ದರೆ ವೆಬ್ಸೈಟ್ನಲ್ಲಿಪರಿಶೀಲಿಸಬಹುದು ಅಥವಾ ಪ್ರಕರಣದಲ್ಲಿಸರ್ಕಾರವನ್ನು ಪ್ರತಿನಿಧಿಸಿರುವ ವಕೀಲರಿಂದ ತಿಳಿದುಕೊಳ್ಳಬಹುದು ಎಂದು ನ್ಯಾಯಾಲಯ ಆದೇಶದಲ್ಲಿಹೇಳಿದೆ.
ಪ್ರಕರಣದ ವಿವರ:
ಅರ್ಜಿದಾರರು ದೋಣಿಗಲ್ ಗ್ರಾಮದ ಸರ್ವೇ ಸಂಖ್ಯೆ 15/3ರಲ್ಲಿ37 ಗುಂಟೆ ಹಾಗೂ ಸರ್ವೇ ಸಂಖ್ಯೆ 23ರಲ್ಲಿ1.29 ಎಕರೆ ಜಮೀನು ಹೊಂದಿದ್ದಾರೆ. ಈ ಭಾಗದಲ್ಲಿಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ರಸ್ತೆ ಅಗಲೀಕರಣ ಕಾಮಗಾರಿ ನಡೆಸಿತ್ತು. ಆದರೆ, ಕಾಮಗಾರಿಯನ್ನು ಸರಿಯಾಗಿ ಮಾಡದ ಕಾರಣ ನಾಲೆಯಲ್ಲಿ ನೀರು ತುಂಬಿ ತಮ್ಮ ತೋಟಕ್ಕೆ ನುಗ್ಗಿ ಫಸಲು ಹಾಳಾಗಿದೆ. 10 ವರ್ಷಗಳಿಂದ ಬೆಳೆಸಿದ್ದ ಕಾಫಿ ತೋಟಕ್ಕೆ ನುಗ್ಗಿ ಹಾನಿಯಾಗಿದೆ ಎಂದು ಆರೋಪಿಸಿದ್ದ ಅರ್ಜಿದಾರರು, ನಷ್ಟ ಪರಿಹಾರ ತುಂಬಿಕೊಡುವಂತೆ ಎನ್ಎಚ್ಎಐನ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ, ಮನವಿ ಪರಿಗಣಿಸಿ ಯಾವುದೇ ಕ್ರಮ ಕೈಗೊಳ್ಳೊದ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ ಕಟ್ಟಡ ಗಳಲ್ಲೂ ಹರ್ ಘರ್ ತಿರಂಗಾ ಹಾರಾಟ
ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಾಂಗ ಅಧಿಕಾರಿಗಳು ಆಗಸ್ಟ್ 13ರಿಂದ 15ರ ನಡುವೆ ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಾಡಲಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಆದೇಶಾನುಸಾರ ರಿಜಿಸ್ಟ್ರಾರ್ ಜನರಲ್ ಟಿ.ಜಿ. ಶಿವಶಂಕರೇ ಗೌಡ ಸುತ್ತೋಲೆ ಹೊರಡಿಸಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಚಿವರು ಪತ್ರ ಬರೆದು, ಸ್ವಾತಂತ್ರ್ಯ ಅಮೃತ ಮಹೋತ್ಸವ ಭಾಗವಾಗಿ ಮನೆ ಮನೆಯಲ್ಲಿತ್ರಿವರ್ಣ ಧ್ವಜವನ್ನು ಹಾಜರಿಸುವ ಅಭಿಯಾನದ ಮಾಹಿತಿ ನೀಡಿದ್ದಾರೆ . ಭಾರತೀಯ ತ್ರಿವರ್ಣ ಧ್ವಜವು ರಾಷ್ಟ್ರೀಯ ಹೆಮ್ಮಯ ಸಂಕೇತವಾಗಿದೆ. ಧ್ವಜಕ್ಕೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅನುಷ್ಠಾನ ಸಮಿತಿಯು ಪ್ರತಿ ಭಾರತೀಯ ಪ್ರಜೆ ತನ್ನ ಮನೆಯಲ್ಲಿತ್ರಿವರ್ಣ ಧ್ವಜ ಹಾರಿಸುವುದಕ್ಕೆ ಪ್ರೋತ್ಸಾಹ ನೀಡಲು ಅಮೃತ ಮಹೋತ್ಸವ ಅಡಿಯ 'ಹರ್ ಗರ್ ತಿರಂಗಾ' ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಜನರ ಹೃದಯದಲ್ಲಿ ರಾಷ್ಟ್ರಭಕ್ತಿ ಹುಟ್ಟುಹಾಕುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಕೊಡುಗೆ ನೀಡಿದವರರನ್ನು ಸ್ಮರಿಸಿಕೊಳ್ಳುವ ಆಲೋಚನೆ ಈ ಅಭಿಯಾನದ ಹಿಂದಿದೆ. ಹೀಗಾಗಿ, ಆಗಸ್ಟ್ 13ರಿಂದ 15ರ ನಡುವೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿರಾಷ್ಟ್ರ ಧ್ವಜ ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅಭಿಯಾನದಲ್ಲಿ ನ್ಯಾಯಾಂಗವು ಸಕ್ರಿಯವಾಗಿ ಪಾಲ್ಗೊಂಡರೆ ಜನಮಾನಸದ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ ಹಾಗೂ ಅಭಿಯಾನವು ದೊಡ್ಡ ಮಟ್ಟದ ಯಶಸ್ವಿಯಾಗಲು ಸಾಧ್ಯವಾಗುತ್ತದೆ.
ಆದ್ದರಿಂದ ಹೈಕೋರ್ಟ್ ಹಾಗೂ ಎಲ್ಲಾ ವಿಚಾರಣಾ ನ್ಯಾಯಾಲಯಗಳಲ್ಲಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಲ್ಲಿತಿರಂಗಾ ಹಾರಿಸಲು ಪ್ರೋತ್ಸಾಹ ನೀಡುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕೇಂದ್ರ ಕಾನೂನು ಸಚಿವರು ಕೋರಿದ್ದಾರೆ. ಹಾಗಾಗಿ, ರಾಜ್ಯದ ಎಲ್ಲಾಜಿಲ್ಲಾನ್ಯಾಯಾಲಯಗಳಲ್ಲಿಹಾಗೂ ನ್ಯಾಯಾಂಗ ಅಧಿಕಾರಿಗಳು ತಮ್ಮ ತಮ್ಮ ಮನೆಯಲ್ಲಿಆ.13ರಿಂದ 15ರ ನಡುವೆ ರಾಷ್ಟ್ರ ಧ್ವಜ ಹಾಜರಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.