ಸಾಂವಿಧಾನಿಕ ಹುದ್ದೆ ವ್ಯಕ್ತಿಗಳನ್ನು ಕೋರ್ಟ್ಗೆ ಕರೆಯಿಸಬೇಡಿ-ಹೈಕೋರ್ಟ್
ಬೆಂಗಳೂರು, ಆ.6. ಚುನಾವಣಾ ತಕರಾರು ಅರ್ಜಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಸುನಿಲ್ ಅರೋರಾ ಅವರಿಗೆ ಖುದ್ದು ಹಾಜರಾಗುವಂತೆ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ತಡೆ ನೀಡಿದೆ.
ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳನ್ನು ಸಾಕ್ಷಿ ಹೇಳಲು ಕೋರ್ಟ್ಗೆ ಕರೆಸಬೇಕಾಗಿಲ್ಲ ಕರೆಸುವುದು ಬೇಡ ಎಂದು ಹೈಕೋರ್ಟ್ ಹೇಳಿದೆ. ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾ. ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಪಿ.ಕೃಷ್ಣಭಟ್ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ಮಾಡಿದೆ.
ಅಲ್ಲದೆ, ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕಮಠಳ್ಳಿ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಚುನಾವಣಾ ಆಯೋಗದ ಮಾಜಿ ಆಯುಕ್ತ ಸುನಿಲ್ ಅರೋರಾ ಅವರಿಗೆ ಖುದ್ದು ಹಾಜರಾಗಲು ಸೂಚಿಸಿದ್ದ ಏಕಸದಸ್ಯಪೀಠದ ಆದೇಶಕ್ಕೆ ವಿಭಾಗೀಯಪೀಠ ತಡೆ ನೀಡಿದೆ.
ನ್ಯಾಯಾಲಯಗಳು ಭಾರತೀಯ ಚುನಾವಣಾ ಆಯೋಗದಿಂದ ಅಗತ್ಯ ದಾಖಲೆಗಳನ್ನು ತರಿಸಿಕೊಳ್ಳಬಹುದು. ಆದರೆ, ಸಾಂವಿಧಾನಿಕ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಅಥವಾ ನಿವೃತ್ತ ಅಧಿಕಾರಿಗಳನ್ನು ಸುಮ್ಮನೆ ಕೆಲವು ಪ್ರಶ್ನೆ ಕೇಳಲು ಸಮನ್ಸ್ ಜಾರಿಗೊಳಿಸುವುದು ಸಮಂಜಸವಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ ಹಾಗೂ ಸನ್ನಿವೇಶವನ್ನು ಗಮನಿಸಿದರೆ ಚುನಾವಣೆಯನ್ನು ಮುಂದೂಡುವ ಅಧಿಸೂಚನೆ ಹೊರಡಿಸಿರುವುದಕ್ಕೆ ಕೇವಲ ಮೌಖಿಕ ಸಾಕ್ಷದ ವಿಚಾರವಲ್ಲ. ಸಾಂವಿಧಾನಿಕ ಸಂಸ್ಥೆಯ ಮಾಜಿ ಮುಖ್ಯಸ್ಥರನ್ನು ಕರೆಸುವುದು, ಅವರಿಗೆ ದಾಖಲೆ ತರುವಂತೆ ಸೂಚಿಸುವುದು ಸರಿಯಲ್ಲ. ಕೆಲವು ಸಂದರ್ಭಗಳಲ್ಲಿಕೋರ್ಟ್ಗಳು ತಮ್ಮ ವಿವೇಚನೆ ಅಧಿಕಾರವನ್ನು ಬಳಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ''ಸಾಮಾನ್ಯವಾಗಿ ಸಿವಿಲ್ ವ್ಯಾಜ್ಯಗಳಲ್ಲಿ ಸಂವಿಧಾನಿಕ ಹುದ್ದೆಗಳಲ್ಲಿರುವವರನ್ನು ಕೋರ್ಟ್ಗೆ ಹಾಜರಾಗುವಂತೆ ಆದೇಶಿಸುವುದಿಲ್ಲ. ಅವರು ತಮ್ಮ ಕರ್ತವ್ಯವನ್ನು ನಿರ್ಭೀಡೆಯಿಂದ ಚಲಾಯಿಸಬೇಕಾದರೆ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ ಮತ್ತು ಅದರಂತೆ ನಡೆದುಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅವರನ್ನು ಸಾಕ್ಷ್ಯ ಎಂದು ಕರೆಯುವ ಭಯ ಹುಟ್ಟುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿ ರಕ್ಷಣೆಗೆ ರಕ್ಷಣಾತ್ಮಕ ವಿಧಾನದ ಮೊರೆ ಹೋಗುತ್ತಾರೆ'' ಎಂದು ಆದೇಶಿಸಿದೆ.
ಚುನಾವಣೆಯನ್ನು ಮುಂದೂಡಿದ್ದ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಚುನಾವಣಾ ತಕರಾರು ಅರ್ಜಿಯಲ್ಲಿ ನಿಗದಿಪಡಿಸಿದ್ದ ಹೆಚ್ಚುವರಿ ಅಂಶದ ಹಿನ್ನೆಲೆಯಲ್ಲಿ ಮಾಜಿ ಚುನಾವಣಾ ಆಯುಕ್ತರಿಗೆ ಸಮನ್ಸ್ ಜಾರಿಯಾಗಿತ್ತು. ಮೂಲ ದೂರುದಾರರು, ಏಕೆ ನಾಮಪತ್ರ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿತ್ತು ಎಂಬ ಬಗ್ಗೆ ವಿವರಣೆ ನೀಡಲು ಆಯುಕ್ತರಾಗಿದ್ದ ಆರೋರಾ ಅವರು ಖುದ್ದು ಸಾಕ್ಷಿಯಾಗಿ ಹಾಜರಾಗಬೇಕೆಂದು ಬಯಸಿದ್ದರು.