ಛೆ, ಇದೆಂಥ ಮಾತು! ಗೌರಿಯನ್ನು ನಾಯಿಗೆ ಹೋಲಿಸಿದರೇ ಮುತಾಲಿಕ್?!
Recommended Video
ಬೆಂಗಳೂರು, ಜೂನ್ 18: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿಯೇ ಸುದ್ದಿಯಾಗಿರುವ ಶ್ರೀ ರಾಮ ಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯಿಂದಾಗಿ ಸುದ್ದಿಯಾಗಿದ್ದಾರೆ.
ಪ್ರಮೋದ್ ಮುತಾಲಿಕ್ ಅವರು ನೀಡಿದ ಹೇಳಿಕೆಯೊಂದು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಅವರು ಗೌರಿ ಲಂಕೇಶ್ ಅವರನ್ನು ನಾಯಿಗೆ ಹೋಲಿಸಿದ್ದಾರೆ ಎಂದು ದೂರಲಾಗುತ್ತಿದೆ.
'ಕರ್ನಾಟಕದಲ್ಲಿ ಯಾವುದಾದರೂ ನಾಯಿ ಸತ್ತರೆ ಅದಕ್ಕೆ ಮೋದಿಯವರನ್ನು ಹೊಣೆ ಎನ್ನಲಾಗುತ್ತದೆಯೇ?' ಎಂದು ಪ್ರಮೋದ್ ಮುತಾಲಿಕ್ ಕೇಳಿದ್ದರು. ಈ ಹೇಳಿಕೆಯ ಮೂಲಕ ಅವರು ಪರೋಕ್ಷವಾಗಿ ಗೌರಿ ಲಂಕೇಶ್ ಅವರನ್ನು ನಾಯಿಗೆ ಹೋಲಿಸಿದ್ದಾರೆ ಎನ್ನಲಾಗುತ್ತಿದೆ.
ಗೌರಿ ಹತ್ಯೆ ಆರೋಪಿ ಪರುಶುರಾಮ್ ಬಗ್ಗೆ ಗೊತ್ತಿಲ್ಲ: ಮುತಾಲಿಕ್
ಗೌರಿ ಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇಕೆ ಚಕಾರವೆತ್ತುತ್ತಿಲ್ಲ ಎಂದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದಲ್ಲಿ ಯಾವುದಾದರೂ ನಾಯಿ ಸತ್ತರೂ ಅದಕ್ಕೆ ಪ್ರಧಾನಿ ಮೋದಿಯವರೇ ಹೊಣೆಯೇ? ಎಂದು ಅವರು ಪ್ರತಿಪ್ರಶ್ನೆ ಎಸೆದಿದ್ದಾರೆ.
ನಾಯಿ ಸತ್ತರೂ ಮೋದಿಯವರೇ ಹೊಣೆಯೇ?
"ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ತಲಾ ಎರಡು ಹತ್ಯೆಗಳು ನಡೆದವು. ಆದರೆ ಆಗ ಇವುಗಳ ಕುರಿತು ಯಾರೊಬ್ಬರೂ ಮಾತನಾಡಲಿಲ್ಲ. ಇದನ್ನು ಕೇಂದ್ರ ಸರ್ಕಾರದ ವೈಫಲ್ಯ ಎಂದು ಕರೆಯಲಿಲ್ಲ. ಆದರೆ ಈಗ ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರಧಾನಿ ಮೋದಿಯವರೇಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಯಾವುದಾದರೂ ನಾಯಿ ಸತ್ತರೂ ಅದಕ್ಕೆ ಮೋದಿಯವರೇ ಜವಾಬ್ದಾರಿಯೇ?" ಎಂದು ಪ್ರಮೋದ್ ಮುತಾಲಿಕ್ ಪತ್ರಕರ್ತರ ಬಳಿ ಖಾರವಾಗಿ ಪ್ರಶ್ನಿಸಿದ್ದಾರೆ.
ಪರಶುರಾಮ ವಾಘ್ಮೊರೆ ಮತ್ತು ಪ್ರಮೋದ್ ಮುತಾಲಿಕ್
ಗೌರಿ ಹತ್ಯೆ ಆರೋಪಿ ಪರಶುರಾಮ ವಾಘ್ಮೊರೆ ಮತ್ತು ಪ್ರಮೋದ್ ಮುತಾಲಿಕ್ ಜೊತೆಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ ಸುದ್ದಿ ಮಾಡಿತ್ತು. ಇದರಿಂದಾಗಿ ಶ್ರೀರಾಮ ಸೇನೆಗೂ ಗೌರಿ ಹತ್ಯೆಗೂ ಸಂಬಂಧವಿದೆ ಎಂಬ ಕುರಿತು ಶಂಕೆ ವ್ಯಕ್ತವಾಗಿತ್ತು. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮುತಾಲಿಕ್, ಪರಶುರಾಮ ವಾಘ್ಮೊರೆ ಯಾರು ಎಂಬುದು ನನಗೆ ಗೊತ್ತಿಲ್ಲ. ಅವನಿಗೂ ಶ್ರೀರಾಮ ಸೇನೆಗೂ ಸಂಬಂಧವಿಲ್ಲ. ನನ್ನೊಂದಿಗೆ ಸಾಕಷ್ಟು ಜನ ಫೋಟೊ ತೆಗೆಸಿಕೊಳ್ಳುತ್ತಾರೆ. ಆದರೆ ಅವರೆಲ್ಲರೂ ನನಗೆ ಪರಿಚಿತರು ಎನ್ನುವುದಕ್ಕಾಗುವುದಿಲ್ಲ ಎಂದು ಮುತಾಲಿಕ್ ಸಮಜಾಯಿಷಿ ನೀದಿದ್ದರು.
ಗೌರಿ ಹತ್ಯೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಆರೋಪಿ ಪರಶುರಾಮ್
ವಾಘ್ಮೊರೆ ಆರೆಸ್ಸೆಸ್ ಕಾರ್ಯಕರ್ತನೆ?
ಆರೋಪಿ ಪರಶುರಾಮ ವಾಘ್ಮೊರೆ ಆರೆಸ್ಸೆಸ್ ಕಾರ್ಯಕರ್ತನೇ? 'ಇದಕ್ಕೂ ಮುನ್ನವೇ ವಿವಾದವೊಂದರ ಸಮಯದಲ್ಲಿ ವಾಘ್ಮೊರೆ ಶ್ರೀ ರಾಮ ಸೇನೆಯ ಕಾರ್ಯಕರ್ತನೆ ಎಂಬ ಬಗ್ಗೆ ಪ್ರಶ್ನೆ ಎದ್ದಿತ್ತು. ಆಗ ಆತ ಆರೆಸ್ಸೆಸ್ ಸಮವಸ್ತ್ರ ತೊಟ್ಟಿದ್ದ ಚಿತ್ರವನ್ನು ನಾನೇ ಶೇರ್ ಮಾಡಿದ್ದೆ. ಆತನ ಆರೆಸ್ಸೆಸ್ ಕಾರ್ಯಕರ್ತನಾಗಿರಬಹುದು, ಶ್ರೀರಾಮ ಸೇನೆಯ ಕಾರ್ಯಕರ್ತನಲ್ಲ ಎಂದು ಆಗ ನಾನೇ ಹೇಳಿದ್ದೆ ಎಂದು ಮುತಾಲಿಕ್ ಹೇಳಿದ್ದಾರೆ.
ಧರ್ಮ ರಕ್ಷಕ ವಾಘ್ಮೊರೆ!
ಪರಶುರಾಮ ವಾಘ್ಮೊರೆಯನ್ನು ಧರ್ಮ ರಕ್ಷಕ ಎಂದು ಶ್ರೀ ರಾಮ ಸೇನೆಯ ಮುಖಂಡರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದುದು ವಿವಾದ ಸೃಷ್ಟಿಸಿತ್ತು. ಈ ಎಲ್ಲ ಕಾರಣದಿಂದಲೇ ಪರಶುರಾಮ್ ಗೂ ಶ್ರೀ ರಾಮ ಸೇನೆಗೂ ಸಂಬಂಧವಿದೆಯೇ ಎಂಬ ಅನುಮಾನ ಎದ್ದಿತ್ತು. 2017 ಸೆಪ್ಟೆಂಬರ್ 05ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಆವರಣದಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಂದಿದ್ದ. ಈ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿಸತ್ತು.