ಕೇಂದ್ರದ ವಿರುದ್ಧ ಸಿಡಿದೆದ್ದ ವೈದ್ಯರು: ದೇಶಾದ್ಯಂತ ಓಪಿಡಿ ಸೇವೆ ಸ್ಥಗಿತ
ಕಲಬುರಗಿ/ವಿಜಯಪುರ/ಬೆಳಗಾವಿ, ಜನವರಿ 2: ಭಾರತೀಯ ವೈದ್ಯಕೀಯ ಸಂಘ (ಐಎಂಎ) ದೇಶಾದ್ಯಂತ ಮಂಗಳವಾರ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್ಎಂಸಿ) ಮಸೂದೆ ವಿರೋಧಿಸಿ ಈ ಬಂದ್ ಗೆ ಕರೆ ನೀಡಿದ್ದು ಕಲಬುರಗಿ, ವಿಜಯಪುರ, ಬೆಳಗಾವಿ, ಹಾವೇರಿ ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ಸೂಚಿಸಿ ಓಪಿಡಿಗಳನ್ನು ಬಂದ್ ಮಾಡಲಾಗಿದೆ.
ಮುಷ್ಕರ: ಬೆಂಗಳೂರಿನಲ್ಲಿ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ'ದ ಬದಲು ಪಾರದರ್ಶಕತೆಗಾಗಿ ಬೇರೆಯದೇ ಸಂಸ್ಥೆಯನ್ನು ತೆರೆಯಲು ಕೇಂದ್ರ ಸರ್ಕಾರವು ಕೆಲವು ದಿನಗಳ ಹಿಂದೆ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿದೆ. ಈ ಮಸೂದೆ ಪ್ರಕಾರ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯರು ತಾವು ವೃತ್ತಿ ಆರಂಭಿಸುವ ಮೊದಲು 'ಬ್ರಿಡ್ಜ್ ಕೋರ್ಸ್' ಮಾಡಬೇಕಾಗಿದೆ.
ಆದರೆ ಇದು ವೈದ್ಯರ ಕಣ್ಣು ಕೆಂಪಗಾಗಿಸಿದ್ದು ಮಂಗಳವಾರ ಅಂದರೆ ಜನವರಿ 2ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರಗೆ ದೇಶದ ಎಲ್ಲಾ ಹೊರ ರೋಗಿ ವಿಭಾಗಗಳನ್ನು ಬಂದ್ ಮಾಡಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದೆ. ಇದರಿಂದ ದೇಶದಾದ್ಯಂತ ರೋಗಿಗಳು ಅಗತ್ಯ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳತ್ತ ರೋಗಿಗಳು ಮುಖ ಮಾಡಿದ್ದಾರೆ.
ವೈದ್ಯರ ಮುಷ್ಕರ, ಮಂಗಳವಾರ ದೇಶಾದ್ಯಂತ 'ಒಪಿಡಿ' ಬಂದ್
ಕಲಬುರಗಿ: ಎನ್ ಎಂಸಿ ಮಸೂದೆ ವಿರೋಧಿಸಿ ದೇಶಾದ್ಯಂತ ಮುಷ್ಕರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ 750 ಆಸ್ಪತ್ರೆಗಳ ಪೈಕಿ ರಲ್ಲಿ500 ಕ್ಕೂ ಅಧಿಕ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದೆ. ಕ್ಲಿನಿಕ್, ಡೈಯೋಗ್ನಿಸ್ಟಿಕ್ ವಿಭಾಗಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕಪ್ಪು ಪಟ್ಟಿ ಧರಿಸಿ ತುರ್ತು ಚಿಕಿತ್ಸಾ ಸೇವೆಗಳನ್ನು ನೀಡಲು ನಿರ್ಧರಿಸಲಾಗಿದೆ. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳ್ಳುತ್ತದೆ ಎಂದು ಜಿಲ್ಲಾ ವೈದ್ಯರ ಸಂಘದ ಅಧ್ಯಕ್ಷ ಡಾ. ಕಿರಣ ದೇಶಮುಖ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ವೈದ್ಯರ ಮುಷ್ಕರ, ನಾಳೆ ಒಪಿಡಿ ಬಂದ್
ವಿಜಯಪುರ: ವಿಜಯಪುರ ಜಿಲ್ಲೆಯಲ್ಲೂ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಮಾಡಲಾಗಿದೆ. ಕೇಂದ್ರ ವೈದ್ಯಕೀಯ ಆಯೋಗದ ಸ್ಥಾಪನೆಗೆ ವಿರೋಧಿಸಿ ಐಎಂಎ ನೀಡಿದ ಬಂದ್ ಕರೆಗೆ ವಿಜಯಪುರ ಜಿಲ್ಲಾಸ್ಪತ್ರೆಗಳು ಬೆಂಬಲ ಸೂಚಿಸಿವೆ. ಬೆಳಗ್ಗೆಯಿಂದ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಸ್ಥಗಿತಗೊಳಿಸಲಾಗಿದೆ. ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆ ಸರ್ಕಾರಿ ವೈದ್ಯರು ರಜೆ ಇದ್ದು, ರೋಗಿಗಳಿಗೆ ತೊಂದರೆಯಾಗದಂತೆ ಡಿಎಚ್ ಓ ರಾಜ್ ಕುಮಾರ್ ಯರಗಲ್ ಸೂಚನೆ ನೀಡಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ನೀಡಲು ಸೂಚನೆ ನೀಡಿದ್ದಾರೆ.
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲೂ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಮಾಡಲಾಗಿದೆ. ಬೆಳಗ್ಗೆ6 ಗಂಟೆಯಿಂದ ಹೊರ ರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಲಾಗಿದೆ. ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರಿ ವೈದ್ಯರ ರಜೆಗಳನ್ನು ರದ್ದುಮಾಡಲಾಗಿದೆ. ರೋಗಿಗಳಿಗೆ ತೊಂದರೆ ಆಗಬಾರದೆಂದು ಬೆಳಗಾವಿ ಡಿಎಚ್ ಓ ಅಪ್ಪಾಸಾಬ ನರಹಟ್ಟಿ ಸೂಚನೆ ನೀಡಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಬೆಳಗಾವಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇದ್ದು ಸೇವೆ ನೀಡಲು ಸೂಚನೆ ನೀಡಿದ್ದಾರೆ.