ಸಿದ್ಧಾರ್ಥ ಹಾಗೂ ನನ್ನ ನಡುವಿನ ಸ್ನೇಹದ ಬಗ್ಗೆ ಸುಳ್ಳು ಸುದ್ದಿ: ಡಿಕೆಶಿ ಅಸಮಾಧಾನ
Recommended Video
ಬೆಂಗಳೂರು, ಆಗಸ್ಟ್ 02: ಈಗಾಗಲೇ ನಿಧನರಾಗಿರುವ ಸಿದ್ಧಾರ್ಥ ಅವರನ್ನು ಸುಳ್ಳು ಸುದ್ದಿಗಳ ಮೂಲಕ ಮತ್ತೆ ಮತ್ತೆ ಕೊಲ್ಲಬೇಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನನ್ನ ಹಾಗೂ ಸಿದ್ಧಾರ್ಥ ಅವರ ಗೆಳೆತನದ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನನ್ನ ಹಾಗೂ ಸಿದ್ಧಾರ್ಥ ಅವರ ಗೆಳೆತನ, ಬಾಂದವ್ಯದ ಬಗ್ಗೆ ನಮಗಿಬ್ಬರಿಗೆ ಮಾತ್ರವೇ ಗೊತ್ತಿದೆ, ನಮ್ಮಿಬ್ಬರ ಬಾಂದವ್ಯದ ಬಗ್ಗೆ ಅರಿವಿಲ್ಲದವರು ಸುಳ್ಳು-ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ನಾಪತ್ತೆ ಆಗುವ ಒಂದು ದಿನ ಮುಂಚೆ ಡಿಕೆಶಿಗೆ ಕರೆ ಮಾಡಿದ್ದ ಸಿದ್ಧಾರ್ಥ
ಸಿದ್ದಾರ್ಥ್ ಬದುಕಿದ್ದಾಗ ಅವರ ಉದ್ಯಮ ವ್ಯವಹಾರ-ವಹಿವಾಟಿನ ಬಗ್ಗೆ ಏನಾದರೂ ಹೇಳಿದ್ದರೂ ಸ್ಪಷ್ಟನೆ ನೀಡಲು ಅವಕಾಶವಿತ್ತು. ಆದರೆ ಈಗ ಅವರು ಗತಿಸಿದ ನಂತರ ಮನಬಂದಂತೆ ಸುದ್ದಿಗಳನ್ನು ಹಬ್ಬಿಸಿದರೆ ಅದಕ್ಕೆ ಉತ್ತರ ನೀಡುವವರು ಯಾರು? ಸ್ಪಷ್ಟನೆ ನೀಡುವವರು ಯಾರು? ಉತ್ತರ ನೀಡಲು ಅವಕಾಶ ಇಲ್ಲದವರ ಬಗ್ಗೆ ಸಲ್ಲದ ಸುದ್ದಿಗಳನ್ನು ಹಬ್ಬಿಸುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನೊಬ್ಬ ರಾಜಕಾರಣಿ ಮತ್ತು ಉದ್ಯಮಿ, ಸಿದ್ಧಾರ್ಥ ಅವರೂ ಸಹ ಉದ್ಯಮಿ, ಸಿದ್ಧಾರ್ಥ ಅವರಿಗೆ ರಾಜಕಾರಣ ಮಾಡಲು ಹಕ್ಕಿದೆ, ಅಂತೆಯೇ ನನಗೂ ರಾಜಕಾರಣ ಮಾಡಲು ಹಾಗೂ ವ್ಯವಹಾರ ಮಾಡಲು ಹಕ್ಕಿದೆ. ನನ್ನ ಹಾಗೂ ಸಿದ್ಧಾರ್ಥ ಅವರ ನಡುವೆ ಕೆಲವೇ ಸಣ್ಣ-ಪುಟ್ಟ ವ್ಯವಹಾರಗಳಿದ್ದವು, ಇದಕ್ಕೆ ಇಲ್ಲ-ಸಲ್ಲದ ಸುದ್ದಿಗಳನ್ನು ಸೃಷ್ಟಿಸಿ ಹರಿಬಿಡುತ್ತಿರುವುದು ತರವಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನನ್ನ ಮತ್ತು ಸಿದ್ಧಾರ್ಥ ಅವರ ನಡುವೆ ಸಣ್ಣ ಪುಟ್ಟ ವ್ಯವಹಾರವಿತ್ತು, ಆದರೆ ಇದನ್ನು ಸಿದ್ಧಾರ್ಥ ಅವರ ಸಾವಿನೊಂದಿಗೆ ತಳುಕು ಹಾಕುವುದು ಸರಿಯಲ್ಲ, ಸಿದ್ಧಾರ್ಥ ಅವರ ಸಾವಿನ ಹಿನ್ನೆಲೆಯಲ್ಲಿ ಉದ್ಯಮಿಗಳಾದ ಮೋಹನ ದಾಸ ಪೈ, ಕಿರಣ್ ಮಜೂಂದಾರ್ ಷಾ ಅವರು ನೀಡಿರುವ ಹೇಳಿಕೆಗಳತ್ತ, ಸಿದ್ಧಾರ್ಥ ಅವರನ್ನು ಮತ್ತೊಮ್ಮೆ ಕೊಲ್ಲುತ್ತಿರುವವರು ಗಮನ ಹರಿಸಬೇಕು ಎಂದು ಡಿಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಅಧಿಕಾರಕ್ಕೆ ಬರುತ್ತಿದ್ದಂತೆ ಬಿಎಸ್ವೈಗೆ ಸಂಕಷ್ಟ: ಹಳೆ ಕೇಸ್ ರೀಓಪನ್
ವ್ಯವಸ್ಥೆಯ ಹತಾಶೆ ಸಿದ್ದಾರ್ಥ್ ಅವರನ್ನು ಸಾವಿನ ಕೂಪಕ್ಕೆ ದೂಡಿದೆ. ಇದರಿಂದ ಅವರ ಕುಟುಂಬ ವರ್ಗವದವರು, ಬಂಧುಗಳು, ಅಭಿಮಾನಿಗಳು, ಅವರ ಉದ್ಯಮ ಅವಲಂಬಿಸಿರುವ ನೌಕರ ವರ್ಗಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಬಹಳ ದುಃಖವಾಗಿದೆ. ಕೆಫೆ ಕಾಫೀ ಡೇ ಮೂಲಕ ಕರ್ನಾಟಕದ ಹೆಸರನ್ನು ವಿಶ್ವ ಭೂಪಟದಲ್ಲಿ ಅಚ್ಚೂರುವಂತೆ ಮಾಡಿದ ಸಿದ್ದಾರ್ಥ್ ಈ ದೇಶದ ಹೆಮ್ಮೆ, ಈ ನಾಡಿನ ಆಸ್ತಿ. ಅವರ ಬಗ್ಗೆ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಅವರು ಸತ್ತ ನಂತರ ಹಬ್ಬಿಸುವುದು ಅವರ ಆತ್ಮಕ್ಕೆ ನೋವು ಹಾಗೂ ಆತ್ಮಗೌರವಕ್ಕೆ ಚ್ಯುತಿ ತರುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿದ್ಧಾರ್ಥ ಅವರ ಸಾವಿಗೆ ಕಾರಣ ಏನು ಎಂಬುದರ ಮೇಲೆ ಕಿರಣ್ ಮಜೂಂದಾರ್ ಷಾ, ಮೋಹನ ದಾಸ ಪೈ ಅವರುಗಳು ಬೆಳಕು ಚೆಲ್ಲಿದ್ದಾರೆ, ಆದರೂ ಸಿದ್ದಾರ್ಥ್ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದೆ. ಆದರೆ ಯಾರು ಯಾರಿಗೆ ಬೇಕಾದರೂ ಸುಳ್ಳು ಹೇಳಬಹುದು, ಮೋಸ ಮಾಡಬಹುದು. ಆದರೆ ಆ ದೇವರಿಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ಆ ಭಗವಂತನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.