ತಾಯಿ ಚಾಮುಂಡಿಯ ಪುಣ್ಯಕ್ಷೇತ್ರವನ್ನು ಅಪವಿತ್ರ ಗೊಳಿಸಬೇಡಿ
ಬೆಂಗಳೂರು, ಅ 16: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮತ್ತು ಮಾಜಿ ಸಚಿವ ಸಾ.ರಾ.ಮಹೇಶ್ ನಡುವಿನ ವಾಕ್ಸಮರ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಮೆಟ್ಟಲೇರಿದೆ.
ಈ ಬಗ್ಗೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, " ಎಚ್.ವಿಶ್ವನಾಥ್ ಅವರೇ, ನೀವೆಷ್ಟು ಪ್ರಾಮಾಣಿಕರು, ಯೋಗ್ಯರು ಎಂಬುದು ರಾಜ್ಯಕ್ಕೇ ತಿಳಿದಿದೆ".
"ನಾಡಿನ ಅಧಿದೇವತೆ ತಾಯಿ ಚಾಮುಂಡಿಯ ಪುಣ್ಯಕ್ಷೇತ್ರವನ್ನು ನಿಮ್ಮ ಆಣೆ ಪ್ರಮಾಣದ ರಾಜಕೀಯ ದೊಂಬರಾಟದ ಅಖಾಡ ಮಾಡಿಕೊಂಡು ಅಪವಿತ್ರ ಗೊಳಿಸಬೇಡಿ. ಮುಂದೆ ಚುನಾವಣೆಗಳು ಬರುತ್ತಿವೆ, ಜನತಾ ನ್ಯಾಯಾಲಯದ ಮುಂದೆ ನಿಮ್ಮ ಯೋಗ್ಯತೆ ಸಾಬೀತು ಪಡಿಸಿ" ಎಂದು ದಿನೇಶ್ ಗುಂಡೂರಾವ್ ಸವಾಲೆಸೆದಿದ್ದಾರೆ.
"ರಾಜ್ಯದಲ್ಲಿ ಭೀಕರ ಪ್ರವಾಹ ಇದ್ದಾಗ ದೇಶದ ಪ್ರಧಾನಿಗಳು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಜನರ ಬದುಕಿನ ಬಗ್ಗೆ ಕನಿಷ್ಠ ಕಾಳಜಿಯನ್ನು ತೋರುವುದಿಲ್ಲ. ರಾಜ್ಯಕ್ಕೆ ಬಂದಾಗಲೂ ಈ ಬಗ್ಗೆ ಮಾತನಾಡುವುದಿಲ್ಲ".
"ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಬೇಕೆಂದು ಶಾಸಕರು ಬಯಸಿದ್ದರೂ ಅದಕ್ಕೆ ಯಡಿಯೂರಪ್ಪ ಸರ್ಕಾರ ಅವಕಾಶ ಕೊಡಲಿಲ್ಲ" ಎಂದು ದಿನೇಶ್ ಗುಂಡೂರಾವ್ ಬೇಸರ ವ್ಯಕ್ತ ಪಡಿಸಿದರು.
"ಚುನಾವಣಾ ಆಯೋಗದ ತೀರ್ಮಾನ ಸರಿಯಿಲ್ಲ. ಬಿಜೆಪಿ ಸರ್ಕಾರ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ. ಚುನಾವಣೆ ನಡೆಯಬೇಕಿದ್ದ ಕ್ಷೇತ್ರಗಳ ಬಿಜೆಪಿ ನಾಯಕರನ್ನ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದೆ. ಆ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದನ್ನು ಉಪ ಚುನಾವಣೆಯ ಉದ್ದೇಶಕ್ಕಾಗಿಯೇ ಮಾಡಲಾಗುತ್ತಿದೆ" ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.