ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ: ಮೌನವೇ ಉತ್ತರ ಎಂದ ಡಿಕೆಶಿ!
Recommended Video
ಬೆಂಗಳೂರು, ಜನವರಿ 30: ಕಾಂಗ್ರೆಸ್ ಶಾಸಕರು ಅಸಂಬದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಿದಿದ್ದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಿರಾಕರಿಸಿದ್ದಾರೆ.
ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಡಿಸ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಡಿಕೆಶಿ ಅವರನ್ನು ಪತ್ರಕರ್ತರು ರಾಜ್ಯದ ರಾಜಕೀಯ ಬೆಳವಣಿಗೆಯ ಬಗ್ಗೆ ಪ್ರಶ್ನಿಸಿದರು.
ರಾಜೀನಾಮೆಗೆ ಸಿದ್ಧ: ಎಚ್ಡಿಕೆ ಶಾಕಿಂಗ್ ಹೇಳಿಕೆಗೆ ಕಾರಣವೇನು?
ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಡಿಕೆ ಶಿವಕುಮಾರ್, ಮೌನವಾಗಿಯೇ ಮುನ್ನಡೆದುಬಿಟ್ಟರು. ಅಷ್ಟಕ್ಕೂ ಡಿಕೆ ಶಿವಕುಮಾರ್ ಅವರ ಮೌನದ ಅರ್ಥವೇನು? ಕರ್ನಾಟಕ ಕಾಂಗ್ರೆಸ್ ಪಾಲಿನ ಆಪದ್ಬಾಂಧವ ಡಿಕೆಶಿ ಯಾವುದೇ ಅರ್ಥವಿಲ್ಲದೆ ಮೌನದ ಪ್ರತಿಕ್ರಿಯೆ ನೀಡುವುದಕ್ಕೆ ಸಾಧ್ಯವೇ? ಮಾತು ಮೈತ್ರಿ ಕೆಡಿಸಿದರೆ ಎಂಬ ಆತಂಕವೇ ಅವರನ್ನು ಮೌನವಾಗಿರಿಸಿತೆ?!
ಡಿಕೆಶಿ ಮೌನಕ್ಕೆ ನೂರಿವೆ ಅರ್ಥ!
ಮಾತಿಗೆ ಒಂದರ್ಥವಾದರೆ ಮೌನಕ್ಕೆ ನೂರರ್ಥ. ಡಿಕೆ ಶಿವಕುಮಾರ್ ಅವರ ಮೌನದ ಅರ್ಥವನ್ನೂ ಹುಡುಕುವುದಕ್ಕೆ ಹೊರಟರೆ ಹಲವು ಅರ್ಥಗಳು ಕಾಣಸಿಗುತ್ತವೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದಿನೇ ದಿನೇ ಏಳುತ್ತಿರುವ ಅಸಮಾಧಾನ, ವೈಮನಸ್ಯ ಅವರಲ್ಲಿ ರೇಜಿಗೆ ಹುಟ್ಟಿಸಿದ ಕಾರಣ ಅವರು ಮೌನವಾಗುಳಿದರೆ? ಅಥವಾ ಎಚ್ ಡಿ ಕುಮಾರಸ್ವಾಮಿ ಅವರು ಇಂಥ ಹೇಳಿಕೆ ನೀಡುವುದೇನು ಹೊಸತಲ್ಲ ಎಂಬ ಭಾವನೆಯಿಂದ ಸುಮ್ಮನಾದರೆ? ಈ ವಿಷಯದಲ್ಲಿ ಯಾರ ಪರ ಅಥವಾ ವಿರೋಧವಾಗಿ ಮಾತನಾಡುವುದೂ ತನಗೇ ಕಷ್ಟ ಎಂದು ಯೋಚಿಸಿ ಮೌನ ಕಾಯ್ದುಕೊಂಡರೆ...?
ಕುಮಾರಸ್ವಾಮಿ ಹೇಳಿಕೆಗೆ ಕಾರಣವೇನು?
ಅಷ್ಟಕ್ಕೂ ಇದ್ದಕ್ಕಿದ್ದಂತೆ ತಾವು ರಾಜೀನಾಮೆಗೆ ಸಿದ್ಧ ಎಂದು ಎಚ್ ಡಿ ಕುಮಾರಸ್ವಾಮಿ ಮುನಿಸಿಕೊಂಡು ಹೇಳಿದ್ದೇಕೆ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡು ಆರೇಳು ತಿಂಗಳಾದರೂ, ಇಂದಿಗೂ ಕಾಂಗ್ರೆಸ್ಸಿನ ಕೆಲ ನಾಯಕರು, 'ಸಿದ್ದರಾಮಯ್ಯ ಅವರೇ ನಮ್ಮ ನಾಯಕ, ಅವರೇ ಮುಖ್ಯಮಂತ್ರಿಯಾಗಬೇಕು, ಮೈತ್ರಿ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ' ಎಂದಿರುವುದು ಎಚ್ಡಿಕೆ ಅವರಿಗೆ ಮುಜುಗರವನ್ನುಂಟು ಮಾಡಿದೆ. ಅದೇ ಕಾರಣಕ್ಕೇ ಅವರು ರಾಜೀನಾಮೆಗೆ ಸಿದ್ಧ ಎಂಬ ಹೇಳಿಕೆ ನೀಡಿದ್ದರು.
ಎಚ್ಡಿಕೆ ರಾಜೀನಾಮೆ ಹೇಳಿಕೆಗೆ ಕಾರಣವಾಗಿದ್ದು 5 ನಾಯಕರು!
ಎಚ್ ಡಿ ರೇವಣ್ಣ ನಿಗೂಢ ನಡೆ
ಈ ಎಲ್ಲ ಬೆಳವಣಿಗೆಯ ನಡುವಲ್ಲೇ, ಜೆಡಿಎಸ್ ಮುಖಂಡ, ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಬಿಜೆಪಿ ನಾಯಕರನ್ನು ಮಂಗಳವಾರ ರಾತ್ರಿ ಭೇಟಿಯಾಗಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿ ಕಾಂಗ್ರೆಸ್ ಪಾಳೆಯದಲ್ಲಿ ನಡುಕ ಹುಟ್ಟಿಸಿದೆ. ಆದರೆ ಕೆಲವು ಮೂಲಗಳು ಈ ವದಂತಿಯನ್ನು ತಳ್ಳಿಹಾಕಿವೆ.
ಸಜೀವವಾಗಿಯೇ ಇದೆ ಆಪರೇಷನ್ ಕಮಲದ ಗುಂಗು!
ಲೋಕಸಭಾ ಚುನಾವಣೆಗೂ ಮುನ್ನ ತಾನು ಸರ್ಕಾರ ರಚಿಸಲೇಬೇಕು ಎಂದು ರೊಚ್ಚಿಗೆ ಬಿದ್ದಿರುವ ಬಿಜೆಪಿ ಆಪರೇಷನ್ ಕಮಲ ಗುಂಗನ್ನು ಸಜೀವವಾಗಿರಿಸಿಕೊಂಡಿದೆ. ಸಂಕ್ರಾಂತಿಯ ಗಡುವು ಮುಗಿಯಿತು, ಇನ್ನು ಶಿವರಾತ್ರಿಗೋ, ಯುಗಾದಿಗೋ ಗಡುವು ಇಟ್ಟುಕೊಂಡು ಮತ್ತೊಮ್ಮೆ ಬಿಜೆಪಿ ಆಪರೇಷನ್ ಕಮಲದ ಮೊರೆ ಹೋದರೆ ಅಚ್ಚರಿಯೇನಿಲ್ಲ!