ಅಯ್ಯೋ ಇದೇನಿದು? ಕೆಪಿಸಿಸಿ ಅಧ್ಯಕ್ಷರು ಹೀಗೆ ಹೇಳೋದಾ? ಜನ ಏನಂದಾರು?
ಬೆಂಗಳೂರು, ಅ. 05: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆಯನ್ನು ಕಾಂಗ್ರೆಸ್ ಪಕ್ಷ ಉಗ್ರವಾಗಿ ವಿರೋಧಿಸಿದೆ. ಘಟನೆ ಖಂಡಿಸಿ ಕಾಂಗ್ರೆಸ್ ನಾಯಕರು ದೇಶದಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ರೈತರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಪಂಜಿನ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಜೊತೆಗೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ನಾಯಕರು ಮನವಿಯನ್ನೂ ಸಲ್ಲಿಸಿದ್ದಾರೆ. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.
ಅದೇ ವೇಳೆ ಹತ್ಯೆಗೊಳಗಾದ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ತೆರಳಿದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಅವರ ಮೇಲೆ ಪೊಲೀಸರ ದೌರ್ಜನ್ಯ, ಕಾನೂನು ಬಾಹಿರ ಬಂಧನ ಎಂದು ಆರೋಪಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ಪಂಜಿನ ಮೆರವಣಿಗೆ ನಡೆಸಿದ್ದಾರೆ.
ಅದಕ್ಕೂ ಮೊದಲು ರಾಜ್ಯಪಾಲರನ್ನು ಭೇಟಿ ಮಾಡಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದು ಈಗ ವೈರಲ್ ಆಗಿದೆ. ಅಯ್ಯೋ ಇದೇನಿದು? ಕೆಪಿಸಿಸಿ ಅಧ್ಯಕ್ಷರು ಹೀಗೆ ಹೇಳೋದಾ? ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ. ಅಷ್ಟಕ್ಕೂ ಅವರು ಹೇಳಿದ್ದಾದರೂ ಏನು?
ಡಿಕೆಶಿ ಮಾತನಾಡಿದ್ದ ವಿಡಿಯೋ ವೈರಲ್!
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಬೆಂಗಾವಲು ಕಾರು ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಿದ್ದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಜೊತೆಗೆ ತಕ್ಷಣ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿದೆ.
ಇದೇ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕರು ದಿಢೀರ್ ಮೆರವಣಿಗೆ, ಖಂಡನೆ ವ್ಯಕ್ತಪಡಿಸಿದ್ದರು. ಜೊತೆಗೆ ಪ್ರತಿಭಟನೆ, ಪಂಜಿನ ಮೆರವಣಿಗೆಯನ್ನೂ ಮಾಡಿದ್ದಾರೆ. ಅದರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಹೀಗೆ ಮನವಿ ಸಲ್ಲಿಸಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ.
"ಜಲಿಯನ್ ವಾಲಾಬಾಗ್' ಪ್ರಸ್ತಾಪಿಸಲು ಪರದಾಟ!
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಬಳಿಕ ಕಾಂಗ್ರೆಸ್ ನಾಯಕರು ರಾಜಭವನದ ಹೊರಗೆ ಮಾತನಾಡಿದರು. ರಾಜ್ಯಪಾಲರೊಂದಿಗೆ ಮಾನಾಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಘಟನೆಯನ್ನು "ಜಲಿಯನ್ ವಾಲಾಬಾಗ್' ಘಟನೆಗೆ ಹೋಲಿಕೆ ಮಾಡಿದ್ದರಂತೆ ಅದನ್ನು ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಡವರಿಸಿದ್ದು ಈಗ ವೈರಲ್ ಆಗಿದೆ. ಅದಕ್ಕೆ ಹಲವು ವಿವಾದಾತ್ಮಕ ಟೀಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಾಡಲಾಗುತ್ತಿದೆ.
ರಾಜ್ಯಪಾಲರನ್ನು ಭೇಟಿ ಮಾಡಿ ರಾಜಭವನದಿಂದ ಹೊರಗೆ ಬಂದಿದ್ದ ಕಾಂಗ್ರೆಸ್ ನಾಯಕರು, ಅವರಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಮುಂದಿನ ಹೋರಾಟದ ಬಗ್ಗೆ ವಿವರಿಸುತ್ತಿದ್ದರು. ಜೊತೆಗೆ ರಾಜ್ಯಪಾಲರೊಂದಿಗೆ ಮಾತನಾಡುವಾದ ಸಿದ್ದರಾಮಯ್ಯ ಅವರು ಹೇಳಿದ್ದ ಘಟನೆಯನ್ನು ಪುನಾವರ್ತನೆ ಮಾಡಲು ಡಿಕೆ ಶಿವಕುಮಾರ್ ಪರದಾಡಿದರು.
ಇದು ಜಲಿಯನ್ ವಾಗಾ ವಾಗಾ ವಾಗಾಬಾದ್
"ಸಿದ್ದರಾಮಯ್ಯ ಸಾಹೇಬ್ರು ಹೇಳ್ತಾ ಇದ್ರು, ಒಳಗಡೆ ಗೌರ್ನರ್ ಹತ್ರ. ಇದು ಜಲಿಯನ್ ವಾಗಾ ವಾಗಾ ವಾಗಾಬಾದ್ ಆ್ಞಂ? ಎಂದರು. ಪಕ್ಕದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, "ಜಲಿಯನ್ ವಾಲಾಬಾಗ್" ಎಂದು ತಿದ್ದಲು ಪ್ರಯತ್ನಿಸಿದರು. ಆದರೂ ಅದನ್ನು ಉದ್ಘರಿಸಲು ಡಿಕೆಶಿ ಅವರಿಂದಾಗಲಿಲ್ಲ. "ಜನುವಾಲಾ ಬಾದ್ಕಿನ್ನ' ಎಂದು ಡಿಕೆಶಿ ಅವರು ಹೇಳಿದರು. ಮತ್ತೊಮ್ಮೆ ಸಿದ್ದರಾಮಯ್ಯ ಅವರು, "ಜಲಿಯನ್ ವಾಲಾಬಾಗ್' ಎಂದು ಮತ್ತೊಮ್ಮೆ ಹೇಳಿದರು. ಆದರೆ ಡಿಕೆ ಶಿವಕುಮಾರ್ ಅವರು ಅವಸರದಲ್ಲಿ "ಅದಕ್ಕಿನ್ನ ಬಾಳಾ ಹೀನವಾದಂತಹ ಪರಿಸ್ಥಿತಿ. ಬ್ರಿಟಿಷರು ಕೂಡ ಬಾಳಾ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಬ್ರಿಟಿಷರು ಇಷ್ಟು "ಅಮಾನಿಯಿಂದ ನೋಡ್ತಾ ಇರ್ಲಿಲ್ಲ' ಎಂದುರು. ಇದೀಗ ಆ ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋ ಹಿಂದೆ ಯಾರಿದ್ದಾರೆ?
ಇದೀಗ ತಪ್ಪಾಗಿ ಉದ್ಘರಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಜೊತೆಗೆ ಅದಕ್ಕೊಂದಿಷ್ಟು ಮಸಾಲೆಯನ್ನೂ ಸಾಮಾಜಿಕ ಜಾಲತಾಣಿಗರು ಸೇರಿಸಿದ್ದಾರೆ. ಜೊತೆಗೆ ಈ "ವೈರಲ್ ವಿಡಿಯೋ' ಹಿಂದೆ ಯಾವುದೋ ರಾಜಕೀಯ ಪಕ್ಷದ ಸೋಶಿಯಲ್ ಮಿಡಿಯಾ ಟೀಂ ಕೆಲಸ ಮಾಡಿರಬಹುದು ಎಂಬ ಆರೋಪಗಳೂ ಕೇಳಿ ಬಂದಿವೆ. ಒಂದು ತೊದಲು ನುಡಿಯನ್ನು ಹೀಗೆ ವೈರಲ್ ಮಾಡುವುದು ಕೂಡ ತಪ್ಪು ಎಂಬ ಅಭಿಪ್ರಾಯವೂ ಸಾಮಾಜಿಕ ಜಾಲತಾಣದಲ್ಲಿಯೇ ವ್ಯಕ್ತವಾಗಿದೆ. ಒಟ್ಟಾರೆ ರಾಜಕೀಯ ನಾಯಕರ ಒಂದು ಕ್ಷಣದ ತಪ್ಪು ಉಚ್ಛಾರಣೆ ಹೀಗೊಂದು ಆರೋಪಕ್ಕೆ ಗುರಿಯಾಗಿದೆ.
Recommended Video