ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಮದುವೆ ತಯಾರಿ ಹೇಗಿದೆ ಗೊತ್ತಾ?
ಬೆಂಗಳೂರು, ಫೆ. 10: ಮತ್ತೊಂದು ಹೈಪ್ರೊಫೈಲ್ ಮದುವೆಗೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆಗಳು ಆರಂಭವಾಗಿವೆ. ಹೌದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯ ಅವರ ವಿವಾಹ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮರ್ತ್ಯ ಹೆಗ್ಡೆ ಅವರೊಂದಿಗೆ ಇದೇ ಫೆಬ್ರುವರಿ 14 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಎರಡೂ ಕುಟುಂಬಗಳು ಮದುವೆ ಸಿದ್ಧತೆಯನ್ನು ಭರ್ಜರಿಯಾಗಿ ಆರಂಭಿಸಿದ್ದು, ವೆಲೆಂಟೈನ್ಸ್ ಡೇ ಅಂದೇ ಐಶ್ವರ್ಯ ಹಾಗೂ ಅಮರ್ತ್ಯ ಹೆಗ್ಡೆ ಅವರು ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಎಸ್.ಎಂ. ಕೃಷ್ಣ ಹಾಗೂ ಡಿ.ಕೆ. ಶಿವಕುಮಾರ್ ಅವರು ಕುಟುಂಬಗಳು ರಾಜ್ಯ ರಾಜಕೀಯದಲ್ಲಿ ಅತ್ಯಂತ ಪ್ರಭಾವಿಯಾಗಿವೆ. ಜೊತೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಮದುವೆ ತಯಾರಿ ಜೋರಾಗಿದೆ.
ವಿವಾಹದ ಹಿನ್ನೆಲೆಯಲ್ಲಿ ಸಹೋದರನೊಂದಿಗೆ ಮದುಮಗ ಅಮರ್ತ್ಯ ಹೆಗ್ಡೆ ಅವರು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬೀಗರಾದ ಎಸ್.ಎಂ. ಕೃಷ್ಣ ಹಾಗೂ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ವಿವಾಹದ ಪ್ರತಿಯೊಂದು ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಐಶ್ವರ್ಯ ಹಾಗೂ ಅಮರ್ತ್ಯ ಹೆಗ್ಡೆ ಅವರ ಮದುವೆ ಸಿದ್ಧತೆ ಹೇಗಿದೆ ಎಂಬುದರ ಸಂಪೂರ್ಣ ವಿವರ ವಿಡಿಯೋ/ಚಿತ್ರಸಹಿತ ಇಲ್ಲಿದೆ.
ವ್ಯಾಲೆಂಟೇನ್ ಡೇಯಂದು ವಿವಾಹ
ಅಮರ್ತ್ಯ ಹೆಗ್ಡೆ ಹಾಗೂ ಐಶ್ವರ್ಯಾ ಅವರ ವಿವಾಹ ವ್ಯಾಲೆಂಟೇನ್ ಡೇಯಂದು ನಡೆಯಲಿದೆ. ಬೆಂಗಳೂರಿನ ಶೇರಟಾನ್ ಹೊಟೇಲ್ನಲ್ಲಿ ಫೆಬ್ರವರಿ 14 ರಂದು ವಿವಾಹ ನಡೆಯಲಿದೆ. ಅದಕ್ಕೂ ಮೊದಲು ನಾಳೆ ಫೆ.12 ರಂದು ಡಿಕೆಶಿ ಅವರ ನಿವಾಸದಲ್ಲಿ ವಧು-ವರರಿಗೆ ಎಣ್ಣೆ ಶಾಸ್ತ್ರ ಆಗಲಿದೆ. ನಾಡಿದ್ದು ಅಂದರೆ ಫೆಬ್ರುವರಿ 13ರಂದು ಶುಕ್ರವಾರ ಸದಾಶಿವನಗರದ ನಿವಾಸದಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಲಿದೆ. ವಿವಾಹದ ಬಳಿಕ ಫೆಬ್ರುವರಿ 17 ರಂದು ಪ್ರೆಸ್ಟೀಜ್ ಗಾಲ್ಫ್ಶೈರ್ ರೇಸಾರ್ಟ್ನಲ್ಲಿ ಮದುವೆ ಆರತಕ್ಷತೆ ನಡೆಯಲಿದ್ದು, ಫೆ. 28 ರಂದು ಅರಮನೆ ಮೈದಾನದಲ್ಲಿ ಬೀಗರ ಊಟ ಏರ್ಪಡಿಸಲಾಗಿದೆ.
|
ಸಂಗೀತ ರಸಸಂಜೆ ಕಾರ್ಯಕ್ರಮ
ಅಮರ್ತ್ಯ ಹೆಗ್ಡೆ ಹಾಗೂ ಐಶ್ವರ್ಯಾ ಅವರ ವಿವಾಹ ಹಿನ್ನೆಲೆಯಲ್ಲಿ ಫೆಬ್ರವರಿ 5ರಂದು ಭರ್ಜರಿ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆದಿದೆ. ಎರಡು ಕುಟುಂಬಗಳ ಸದಸ್ಯರು ಮಾತ್ರ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿತ್ತು. ಜೊತೆಗೆ ಮದುವೆ ಗಂಡು ಅಮರ್ತ್ಯ ಹೆಗ್ಡೆ ಅವರು ತಮ್ಮ ಸಹೋದರನೊಂದಿಗೆ ಕಾದಲನ್ ಸಿನಿಮಾದ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿರುವುದು ವಿಶೇಷ. ಆ ಸಂದರ್ಭದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೂ ಉಪಸ್ಥಿತರಿದ್ದರು.
ನಾಡಿದ್ದು ನಡೆಯಲಿದೆ ಮೆಹಂದಿ ಕಾರ್ಯಕ್ರಮ
ಈಗಾಗಲೇ ಸಾಂಪ್ರದಾಯಿಕ ಮದುವೆ ಕಾರ್ಯಕ್ರಮಗಳು ಆರಂಭವಾಗಿವೆ. ನಿನ್ನೆ ಫೆಬ್ರುವರಿ 10ರಂದು ಅರಿಶಿಣ ಕಾರ್ಯಕ್ರಮ ಮುಗಿದಿದೆ. ನಾಳೆ ಫೆಬ್ರುವರಿ 12ರಂದು ಬೆಂಗಳೂರಿನ ಸದಾಶಿವನಗರದ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಲಿದ್ದು, ಆಯ್ದ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಮೆಹಂದಿ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ವಿಶೇಷವಾಗಿ ಮಾಡಲು ಎರಡೂ ಕುಟುಂಬಗಳು ಸಿದ್ಧತೆ ನಡೆಸಿವೆ.
Recommended Video
ಗಣ್ಯರಿಗೆ ಆಹ್ವಾನ
ಐಶ್ವರ್ಯಾ ಹಾಗೂ ಅಮರ್ತ್ಯ ಹೆಗ್ಡೆ ಅವರ ಮದುವೆ ಹೆಣ್ಣು ನೋಡುವ ಶಾಸ್ತ್ರದಿಂದ ಆರಂಭಿಸಿ ಪ್ರತಿಯೊಂದನ್ನು ಅತ್ಯಂತ ಸಾಂಪ್ರದಾಯಿಕವಾಗಿ ನಡೆಯುತ್ತಿದೆ. ವಿವಾಹದಲ್ಲಿನ ಪ್ರತಿಯೊಂದನ್ನು ಆಚರಣೆಯನ್ನು ತಮ್ಮ ಆಪ್ತ ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ಸಲಹೆಯಂತೆಯೆ ಡಿ.ಕೆ. ಶಿವಕುಮಾರ್ ಅವರು ನೆರವೇರಿಸುತ್ತಿದ್ದಾರೆ.
ಕಳೆದ ಜೂನ್ 12, 2020ರಂದು ಡಿ.ಕೆ. ಶಿವಕುಮಾರ್ ಕುಟುಂಬದವರು ಸದಾಶಿವನಗರದ ಎಸ್.ಎಂ. ಕೃಷ್ಣ ನಿವಾಸಕ್ಕೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು. ನಂತರ ನವೆಂಬರ್ 18, 2020ರಂದು ಐಶ್ವರ್ಯಾ ಹಾಗೂ ಅಮರ್ತ್ಯ ಹೆಗ್ಡೆ ಅವರ ಮದುವೆ ನಿಶ್ಚಿತಾರ್ಥ ಬೆಂಗಳೂರಿನ ಹೊರವಲಯದ ಹೋಟೆಲ್ನಲ್ಲಿ ನಡೆದಿತ್ತು. ಎಸ್ಎಂಕೆ ಅವರು ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದರು.
ಇದೀಗ ವಿವಾಹಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಗಣ್ಯರಿಗೆ ಎಸ್ಎಂಕೆ ಹಾಗೂ ಡಿಕೆಶಿ ಆಹ್ವಾನ ಕೊಟ್ಟಿದ್ದಾರೆ. ಹೀಗಾಗಿ ಫೆಬ್ರುವರಿ 14 ರಂದು ರಾಜ್ಯ ಹಾಗೂ ರಾಷ್ಟ್ರದ ರಾಜಕೀಯ ನಾಯಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.