ಎಲ್ಲಿಗೆ ಹೋಯ್ತು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಹಣ?
ಬೆಂಗಳೂರು, ಸೆ. 20: ಕೋವಿಡ್ ನಿಯಂತ್ರಿಸಲು ಇಡೀ ದೇಶಾದ್ಯಂತ ಏಕಾಏಕಿ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಕೊರೊನಾ ವೈರಸ್ಗಿಂತ ಹೆಚ್ಚಾಗಿ ಲಾಕ್ಡೌನ್ ಅಡ್ಡ ಪರಿಣಾಮಗಳಿಂದ ಜನರಿಗೆ ಹೆಚ್ಚು ತೊಂದರೆ ಆಗಿದ್ದವು. ಲಾಕ್ಡೌನ್ ಕಾರಣದಿಂದಲೇ ಹಲವರು ವಲಸೆ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ನಂತರ ಎಚ್ಚೆತ್ತುಕೊಂಡಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ನ್ನು ಜನರ ಸಂಕಷ್ಟ ಕಡಿಮೆ ಮಾಡಲು ಘೋಷಣೆ ಮಾಡಿತ್ತು.
ಕೊರೋನಾ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಣೆ ಮಾಡಿರುವ ಆರ್ಥಿಕ ಪರಿಹಾರ ಪ್ಯಾಕೇಜ್ನಿಂದ ರಾಜ್ಯದ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎಂಬುದರ ಬಗ್ಗೆ ಅಂಕಿ-ಅಂಶಗಳ ದಾಖಲೆ ನೀಡಿ.
1610 ಕೋಟಿ ರೂಪಾಯಿ ಪ್ಯಾಕೇಜ್ ಹಾಗೂ ನಂತರದ ದಿನಗಳಲ್ಲಿ ಘೋಷಿಸಿದ ಪ್ಯಾಕೇಜ್ ಗಳಿಂದ ಎಷ್ಟು ಚಾಲಕರಿಗೆ, ಸವಿತಾ ಸಮಾಜದವರಿಗೆ, ದರ್ಜಿಗಳಿಗೆ, ಮಾಡಿವಾಳರಿಗೆ ಪರಿಹಾರ ಸಿಕ್ಕಿದೆ? ಯಾವ ಯಾವ ವರ್ಗಗಳಿಗೆ ನೀಡಲಾಗಿದೆ ಎಂಬುದರ ಕುರಿತು ಸರ್ಕಾರ ತನ್ನ ದಾಖಲೆಯನ್ನು, ಅಂಕಿ ಅಂಶಗಳ ಮಾಹಿತಿಯನ್ನು ಅಧಿವೇಶನದ ಆರಂಭದ ದಿನದಲ್ಲೇ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Recommended Video
ಯಡಿಯೂರಪ್ಪ ದೆಹಲಿ ಪ್ರವಾಸ ಏನಾಯ್ತು?
ಸರ್ಕಾರ ವಿಧಾನ ಮಂಡಲ ಅಧಿವೇಶನ ಕರೆದಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳು ದೆಹಲಿ ಪ್ರವಾಸ ಮುಗಿಸಿದ್ದಾರೆ. ರಾಜ್ಯದ ಜನರು ಬಿಜೆಪಿ ಹಾಗೂ ಕೇಂದ್ರ ಸರ್ಕಾರಕ್ಕೆ 25 ಸಂಸದರನ್ನು ಕೊಟ್ಟಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿಗಳು, ಕೇಂದ್ರ ವಿತ್ತ ಸಚಿವರ ಮುಂದೆ ಕರೆದುಕೊಂಡು ಹೋಗದಿದ್ದರೂ, ಕೇವಲ ಬಿಜೆಪಿ ಸಂಸದರನ್ನು ಕರೆದುಕೊಂಡು ಹೋಗಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಿ ಆಗುತ್ತಿರುವ ಅನ್ಯಾಯ ತಡೆದು, ಜನರ ಬೇಡಿಕೆ ಹಾಗೂ ಅನುದಾನ ತರುವ ಪ್ರಯತ್ನ ಮಾಡುವ ನಿರೀಕ್ಷೆ ಇತ್ತು. ಆದರೆ ಅದನ್ನು ಮಾಡಲಿಲ್ಲ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕೊರೊನಾ ಸಂಕಷ್ಟದ ಮಧ್ಯೆ ಬಿಜೆಪಿಗೆ ಮತ್ತೊಂದು ಏಟು ಕೊಟ್ಟ ಡಿಕೆಶಿ!
ಸಿಎಂ ಯಡಿಯೂರಪ್ಪ ವಿಫಲ
ಈ ಹಿಂದೆ ಅಧಿವೇಶನ ನಡೆಯುವಾಗ ಎಲ್ಲ ಪಕ್ಷದ ಸದಸ್ಯರನ್ನು ಕರೆದು, ಪಕ್ಷಭೇದ ಮರೆತು ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡುವ ಸಂಪ್ರದಾಯ ನಡೆದುಕೊಂಡು ಬರುತ್ತಿತ್ತು.
ಈ ಬಾರಿ ಸಂಸತ್ ಅಧಿವೇಶನ ನಡೆಯುವಾಗ ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದರೂ ಯಾವ ಸಂಸದರನ್ನೂ ಕರೆದು ಸಭೆ ಮಾಡಿಲ್ಲ. ನಮ್ಮ ಸಂಸದರನ್ನು ಕರೆದುಕೊಂಡು ಹೋಗಲು ಇಷ್ಟವಿಲ್ಲದಿದ್ದರೆ ಬೇಡ. ಅವರ ಸಂಸದರನ್ನೇ ಕರೆದುಕೊಂಡು ಹೋಗಿ ಸರ್ಕಾರದ ಮೇಲೆ ಒತ್ತಡ ಹೇರಬಹುದಾಗಿತ್ತು. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
20 ಲಕ್ಷ ಕೋಟಿ ರೂ. ಪ್ಯಾಕೇಜ್ ಏನಾಯ್ತು?
ಈ ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ಸಂದರ್ಭದಲ್ಲಿ ನಾವು ರಾಜ್ಯದ ಪರವಾಗಿ ಒಂದು ವಿಚಾರವನ್ನು ನಿರೀಕ್ಷೆ ಮಾಡುತ್ತಿದ್ದೇವೆ.
ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಹಣಕಾಸು ಸಚಿವರು ಘೋಷಣೆ ಮಾಡಿದ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ರಾಜ್ಯಕ್ಕೆ ಎಷ್ಟು ಬಂದಿದೆ. ಈ ಪ್ಯಾಕೇಜ್ ನಿಂದ ರಾಜ್ಯದಲ್ಲಿ ಯಾವಾಗ? ಯಾರಿಗೆ? ಎಷ್ಟು ಪ್ರಮಾಣದ ಹಣ ನೀಡಲಾಗಿದೆ? ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಬ್ಯಾಂಕ್ ಗಳ ಜತೆ ಎಷ್ಟು ಸಭೆ ನಡೆಸಿದ್ದಾರೆ? ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಪಿಎಂ ಕೇರ್ ನಿಧಿಯ ದೇಣಿಗೆಯನ್ನು ರಾಜ್ಯದ ಜನರಿಗೆ ಯಾವ ರೀತಿ ಬಳಸಲಾಗಿದೆ? ಎಂಬುದರ ಮಾಹಿತಿಯನ್ನು ಕೊಡಿ ಎಂದು ರಾಜ್ಯ ಸರ್ಕಾರವನ್ನು ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಪಿಂಚಣಿ ಹಣವನ್ನೇ ಕೊಡುತ್ತಿಲ್ಲ ಸರ್ಕಾರ
ರಾಜ್ಯ ಸರ್ಕಾರ ಪಿಂಚಣಿ ಹಣವನ್ನೇ ನೀಡಿಲ್ಲ. ಕೊರೋನಾ ಸಮಯದಲ್ಲಿ ಸರ್ಕಾರ ಎಷ್ಟು ಆದೇಶ, ಘೋಷಣೆಗಳನ್ನು ಮಾಡಿತ್ತು, ಅದರಲ್ಲಿ ಎಷ್ಟು ಕಾರ್ಯರೂಪಕ್ಕೆ ಬಂದಿವೆ ಎಂಬ ಮಾಹಿತಿಯನ್ನು ಘೋಷಣೆ ಮಾಡಬೇಕು. ಮಾಧ್ಯಮಗಳು ಕಳೆದ ಆರು ತಿಂಗಳಲ್ಲಿ ಅನೇಕ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತಂದಿವೆ. ನಮಗಿಂತ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿವೆ. ನಿಮ್ಮ ಜತೆ ಕೈಜೋಡಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೆಹಲಿ ಪ್ರವಾಸದಲ್ಲಿ ಎಷ್ಟು ಬೇಡಿಕೆ ಮುಂದಿಟ್ಟಿದ್ದರು. ಅದರಲ್ಲಿ ಎಷ್ಟು ಹಣ ತಂದಿದ್ದಾರೆ? ಅವರ ಭೇಟಿಯಿಂದ ಎಷ್ಟು ಅನುಕೂಲ ಆಗಿದೆ? ಎಂಬುದರ ಮಾಹಿತಿಯನ್ನು ರಾಜ್ಯದ ಜನರ ಮುಂದೆ ಇಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ.