ಶನಿವಾರ ಡಿಕೆಶಿ ಬೆಂಗಳೂರಿಗೆ; ಕೆಪಿಸಿಸಿ ಕಚೇರಿಗೆ ಭೇಟಿ
Recommended Video
ಬೆಂಗಳೂರು, ಅಕ್ಟೋಬರ್ 24 : ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ಶನಿವಾರ ಕರ್ನಾಟಕಕ್ಕೆ ವಾಪಸ್ ಆಗಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರು ಬುಧವಾರ ರಾತ್ರಿ ದೆಹಲಿ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿ ಸಹೋದರ ಡಿ. ಕೆ. ಸುರೇಶ್ ನಿವಾಸದಲ್ಲಿದ್ದಾರೆ. ಗುರುವಾರ ಕರ್ನಾಟಕದ ವಿವಿಧ ರಾಜಕೀಯ ನಾಯಕರು, ಆಪ್ತರು, ಸಂಬಂಧಿಕರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಡಿ. ಕೆ. ಶಿವಕುಮಾರ್ ಎಐಸಿಸಿಯ ಕೆಲವು ನಾಯಕರನ್ನು ಭೇಟಿಯಾದರು.
ಡಿಕೆಶಿ ಅಪ್ಪಿಕೊಂಡು ಸ್ವಾಗತಿಸಿದ ಕೆ. ಸಿ. ವೇಣುಗೋಪಾಲ್
ಶುಕ್ರವಾರ ಡಿ. ಕೆ. ಶಿವಕುಮಾರ್ ಎಐಸಿಸಿಯ ಕೆಲವು ನಾಯಕರನ್ನು ಭೇಟಿಯಾಗಲಿದ್ದಾರೆ. ಬಳಿಕ ವಕೀಲರ ಜೊತೆ ಮಾತಕತೆ ನಡೆಸಲಿದ್ದಾರೆ. ಶನಿವಾರ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದು, ಅವರನ್ನು ಸ್ವಾಗತಿಸಲು ಅಪಾರ ಅಭಿಮಾನಿಗಳು ಕಾಯುತ್ತಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
ಗುರುವಾರ ಸಂಜೆ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ಮಾಡಿದರು. ಬೆಳಗ್ಗೆ ಎಐಸಿಸಿ ಕಚೇರಿಗೆ ಭೇಟಿ ನೀಡಿದ್ದ ಅವರು, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಭೇಟಿಯಾಗಿದ್ದರು.
ಸೋನಿಯಾ ಗಾಂಧಿ ಭೇಟಿ
ಸೋನಿಯಾ ಗಾಂಧಿ ಭೇಟಿ ಬಳಿಕ ಮಾತನಾಡಿದ ಡಿ. ಕೆ. ಶಿವಕುಮಾರ್, "ನಾನು ಜೈಲಿನಲ್ಲಿದ್ದಾಗ ಸೋನಿಯಾ ಗಾಂಧಿ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಆದ್ದರಿಂದ, ಬಿಡುಗಡೆ ಬಳಿಕ ಅವರನ್ನು ಭೇಟಿಯಾಗಿದ್ದೇನೆ. ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ" ಎಂದು ಸ್ಪಷ್ಟಪಡಿಸಿದರು.
ವಕೀಲರನ್ನು ಭೇಟಿ ಮಾಡುವೆ
ಶುಕ್ರವಾರ ವಕೀಲ ಅಭಿಷೇಕ್ ಸಿಂಘ್ವಿ ಸೇರಿದಂತೆ ಇತರರನ್ನು ಭೇಟಿಯಾಗಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ತಾಯಿ, ಪತ್ನಿಗೂ ಸಮನ್ಸ್ ಜಾರಿಯಾಗಿದೆ. ಈ ಕುರಿತು ವಕೀಲರ ಜೊತೆ ಚರ್ಚೆ ನಡೆಸಲಿದ್ದಾರೆ. ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ
ಶನಿವಾರ ಡಿ. ಕೆ. ಶಿವಕುಮಾರ್ ಬೆಂಗಳೂರಿಗೆ ಬರಲಿದ್ದಾರೆ. ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿಗೆ ಅವರು ಆಗಮಿಸಲಿದ್ದು, ಕಾರ್ಯಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ. ಬಳಿಕ ಅವರು ಕನಕಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಜೈಲು ವಾಸ ಅಂತ್ಯ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧಿತರಾಗಿದ್ದ ಡಿ. ಕೆ. ಶಿವಕುಮಾರ್ಗೆ ದೆಹಲಿ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಬುಧವಾರ ರಾತ್ರಿ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದು, ದೆಹಲಿಯಲ್ಲಿಯೇ ಇದ್ದಾರೆ.