ಫಲಿತಾಂಶ ಏನೇ ಬರಲಿ ಡಿ ಕೆ ಶಿವಕುಮಾರ್ 'ಖದರ್' ಗೊಂದು ಭಲೇ..ಭಲೇ..
Recommended Video
ಕಾಂಗ್ರೆಸ್ ಮುಖಂಡರೇ ಹೇಳುವಂತೆ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯವರು ಸದ್ಯದ ರಾಜಕೀಯ ಅಸ್ಥಿರತೆ ರೀತಿಯಲ್ಲಿ ಸರಕಾರದ ಬುಡ ಅಲ್ಲಾಡಿಸಲು ಪ್ರಯತ್ನಿಸುತ್ತಿರುವುದು ಇದೇನು ಮೊದಲಲ್ಲ. ಆರು ಬಾರಿ ಬಿಜೆಪಿಯವರು ಸರಕಾರಕ್ಕೆ ತೊಂದರೆ ಮಾಡಲು ಪ್ರಯತ್ನಿಸಿದ್ದಾರೆಂದು ಕಾಂಗ್ರೆಸ್ಸಿಗರೇ ಹೇಳುತ್ತಾರೆ.
ರಮೇಶ್ ಜಾರಕಿಹೊಳಿಯನ್ನು ನಂಬಿ ಹಲವು ಬಾರಿ ಯಾಮಾರಿದ್ದ ಬಿಜೆಪಿ ತದನಂತರ ಎಚ್ಚರಿಕೆಯ ಹೆಜ್ಜೆಯನ್ನು ಇಡಲಾರಂಭಿಸಿತು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಇದರಿಂದ ಮುಜುಗರವನ್ನೂ ಎದುರಿಸಬೇಕಾಯಿತು. ಒಂದರ್ಧದಲ್ಲಿ ಹೇಳಬೇಕಾದರೆ, ಹಲವು ಬಾರಿ ಆಪರೇಷನ್ ಕಮಲ ಪ್ಲಾಫ್ ಆಗಲು ಕಾರಣ ಡಿ ಕೆ ಶಿವಕುಮಾರ್ ಅವರ ತಂತ್ರಗಾರಿಕೆ.
ಪ್ರತೀ ಬಾರಿಯೂ ಸರಕಾರಕ್ಕೆ ತೊಂದರೆಯಾದಾಗ, ಅಕ್ಷರಸಃ ಸಮ್ಮಿಶ್ರ ಸರಕಾರದ ಬೆನ್ನಿಗೆ ಬೆನ್ನಾಗಿ ನಿಂತವರು ಡಿ ಕೆ ಶಿವಕುಮಾರ್. ಅಲ್ಲಿಂದ ಅವರಿಗೆ 'ಟ್ರಬಲ್ ಶೂಟರ್' ಎನ್ನುವ ಬಿರುದು ಬಂತು. ಅದಕ್ಕೆ ತಕ್ಕಹಾಗೇ ಸರಕಾರ ಉಳಿಸಲು ಯಾವ ಮಟ್ಟಕ್ಕಾದರೂ ನಿಂತು ಕಾರ್ಯಾಚರಣೆಗೆ ನಿಲ್ಲುವ ಡಿಕೆಶಿ, ಸದ್ಯ ಮುಂಬೈ ಹೋಟೆಲ್ ನಲ್ಲಿದ್ದಾರೆ.
ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಕೇವಲ ಹೃದಯವಿದೆ: ಡಿಕೆ ಶಿವಕುಮಾರ್
ಡಿಕೆಶಿ ಬರುತ್ತಾರೆಂದು ಗೊತ್ತಾದ ಬಿಜೆಪಿ, ಒಂದು ಐಷಾರಾಮಿ ಹೋಟೆಲ್ ನಿಂದ ಇನ್ನೊಂದು ಐಷಾರಾಮಿ ಹೋಟೆಲ್ ಗೆ ಅತೃಪ್ತ ಶಾಸಕರನ್ನು ಶಿಫ್ಟ್ ಮಾಡಿದೆ. ಅಲ್ಲಿಗೂ ಡಿಕೆಶಿ ಹೋಗಬಹುದು ಎನ್ನುವ ವಾಸನೆಯನ್ನು ಅರಿತ ಬಿಜೆಪಿ, ಹೇಗೂ ತಮ್ಮದೇ ಸರಕಾರ ಮಹಾರಾಷ್ಟ್ರದಲ್ಲಿ ಇರುವುದರಿಂದ, ಪೊಲೀಸರ ಮೂಲಕ ಡಿಕೆಶಿ ಅವರನ್ನು ತಡೆದಿದ್ದಾರೆ.
ಏನೇ ಆಗಲಿ ಅವರನ್ನು ಕಾಣದೇ ನಾನು ಬೆಂಗಳೂರಿಗೆ ವಾಪಸ್ ಆಗುವುದಿಲ್ಲ
ರಾಜಕಾರಣ ಬೇರೆ, ಸ್ನೇಹ ಬೇರೆ ಎಂದು ಹೇಳಿರುವ ಅತೃಪ್ತರು ನಾವು ಯಾವುದೇ ಕಾರಣಕ್ಕೂ ಡಿಕೆಶಿಯವರನ್ನು ಭೇಟಿಯಾಗುವುದಿಲ್ಲ ಎಂದಿದ್ದಾರೆ. ಅವರೆಲ್ಲಾ ನನ್ನ ಸ್ನೇಹಿತರು, ಅವರ ಕಷ್ಟಸುಖ ಕೇಳಲು ಬಂದಿದ್ದೇನೆಂದು ಡಿಕೆಶಿ ಹೋಟೆಲ್ ಹೊರಗೆ ಠಿಕಾಣಿ ಹೂಡಿದ್ದಾರೆ. ಏನೇ ಆಗಲಿ ಅವರನ್ನು ಕಾಣದೇ ನಾನು ಬೆಂಗಳೂರಿಗೆ ವಾಪಸ್ ಆಗುವುದಿಲ್ಲ ಎಂದು ಡಿಕೆಶಿ ಹಠ ಹಿಡಿದು ಕೂತಿದ್ದಾರೆ.
ಎಚ್ ಡಿಕೆ, ಡಿಕೆಶಿಯನ್ನು ಭೇಟಿ ಮಾಡಲು ಇಷ್ಟವಿಲ್ಲ: ಪೊಲೀಸರಿಗೆ ಅತೃಪ್ತರ ಪತ್ರ
ಅತೃಪ್ತರು ಬೆಂಗಳೂರಿಗೆ ಬಂದು ಮತ್ತೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ
ರಾಜೀನಾಮೆ ನೀಡಿದ ಹದಿಮೂರು ಶಾಸಕರ ಪೈಕಿ ಐದು ಜನರ ರಾಜೀನಾಮೆ ಮಾತ್ರ ಸರಿಯಾಗಿದೆ, ಮಿಕ್ಕವರದ್ದು ಸರಿಯಿಲ್ಲ ಎಂದು ಸ್ಪೀಕರ್ ಹೇಳಿದ ನಂತರ, ಅತೃಪ್ತರು ಬೆಂಗಳೂರಿಗೆ ಬಂದು ಮತ್ತೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರನ್ನು ತಡೆಯುವುದೇ ಡಿ ಕೆ ಶಿವಕುಮಾರ್ ಅವರ ಉದ್ದೇಶ. ಅದಕ್ಕಾಗಿಯೇ ಡಿಕೆಶಿ ಮುಂಬೈನಲ್ಲಿರುವುದು.
ಡಿ ಕೆ ಶಿವಕುಮಾರ್ ಬುಧವಾರ ನಡೆಸುವ ರಾಜಕೀಯದ ಮೇಲೆ ನಿಂತಿದೆ
ಒಂದು ಲೆಕ್ಕದಲ್ಲಿ ಇಡೀ ಸಮ್ಮಿಶ್ರ ಸರಕಾರ ಡಿ ಕೆ ಶಿವಕುಮಾರ್ ಬುಧವಾರ ನಡೆಸುವ ರಾಜಕೀಯದ ಮೇಲೆ ನಿಂತಿದೆ. ಯಾಕೆಂದರೆ, ಎಂಟು ಶಾಸಕರು ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿದ್ದೇ ಆದಲ್ಲಿ, ಬಹುತೇಕ ಸಮ್ಮಿಶ್ರ ಸರಕಾರಕ್ಕೆ ಕೊನೆಯ ಮೊಳೆ ಹೊಡೆದಂತೆ. ಸಿದ್ದರಾಮಯ್ಯ ಅವರ ಅನರ್ಹತೆಯ ಎಚ್ಚರಿಕೆಗೂ ಅತೃಪ್ತರು ಬಗ್ಗದ ನಂತರ, ಡಿ ಕೆ ಶಿವಕುಮಾರ್ ಮಂಗಳವಾರ ಮುಂಬೈಗೆ ದೌಡಾಯಿಸಿದ್ದರು.
ದೇವೇಗೌಡ್ರ ಕುಟುಂಬ ಮತ್ತು ಡಿ ಕೆ ಶಿವಕುಮಾರ್ ನಡುವೆ ಯಾವ ಮಟ್ಟದ ಜಿದ್ದು
ದೇವೇಗೌಡ್ರ ಕುಟುಂಬ ಮತ್ತು ಡಿ ಕೆ ಶಿವಕುಮಾರ್ ನಡುವೆ ಯಾವ ಮಟ್ಟದ ಜಿದ್ದು ಇತ್ತು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತು. ಆದರೆ, ಇತ್ತೀಚಿನ ಒಂದು ವರ್ಷಗಳಲ್ಲಿ ಕುಮಾರಸ್ವಾಮಿಯ ಗಳಸ್ಯ ಕಂಠಸ್ಯ ರೀತಿಯಲ್ಲಿ ಇರುವ ಡಿಕೆಶಿ, ಸಮ್ಮಿಶ್ರ ಸರಕಾರಕ್ಕೆ ಲೆಫ್ಟ್ ಹ್ಯಾಂಡ್ ರೈಟ್ ಹ್ಯಾಂಡ್ ಎಲ್ಲಾ. ಹಿಂದೆ ತಮಗೆ ಆಪ್ತರಾಗಿದ್ದ ತೇಜಸ್ವಿನಿಯವರನ್ನು ಗೌಡ್ರು ಎದುರು ನಿಲ್ಲಿಸಿ, ಗೆಲ್ಲಿಸಿದ ಉದಾಹರಣೆ, ಅವರ ಮತ್ತು ಗೌಡ್ರ ಕುಟುಂಬಕ್ಕೆ ಇದ್ದ ಜಿದ್ದಿಗೊಂದು ಉದಾಹರಣೆ.
ಸರಕಾರಕ್ಕೆ ತೊಂದರೆ ಬಂದಾಗ ಮಂಚೂಣಿಯಲ್ಲಿ ನಿಲ್ಲುವ ಅವರ ಕಮಿಟ್ಮೆಂಟ್
ಈಗಿನ ಸರಕಾರದ ತುರ್ತು ಪರಿಸ್ಥಿತಿಯಲ್ಲಿ ಡಿ ಕೆ ಶಿವಕುಮಾರ್ ಮೇಲುಗೈ ಸಾಧಿಸುತ್ತಾರೋ ಇಲ್ಲವೋ ಅದು ಆಮೇಲಿನ ಪ್ರಶ್ನೆ, ಆದರೆ, ಸರಕಾರಕ್ಕೆ ತೊಂದರೆ ಬಂದಾಗ ಮಂಚೂಣಿಯಲ್ಲಿ ನಿಲ್ಲುವ ಅವರ ಕಮಿಟ್ಮೆಂಟ್ ಮತ್ತು ಖದರ್ ಗೆ ಸಲಾಂ ಹೇಳಲೇ ಬೇಕು. ಯಡಿಯೂರಪ್ಪ ಅವರ ಆಪ್ತರಲ್ಲಿ ಡಿ ಕೆ ಶಿವಕುಮಾರ್ ಕೂಡಾ ಒಬ್ಬರು. ಆದರೆ, ರಾಜಕೀಯ ಸ್ನೇಹಕ್ಕಿಂತಲೂ ಮೇಲು ಎನ್ನುವುದನ್ನು ಡಿಕೆಶಿ ಹಲವು ಬಾರಿ ಬಿಎಸ್ವೈಗೆ ರುಜುವಾತು ಮಾಡಿದ್ದಾರೆ.