Exclusive: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್, ಘೋಷಣೆ ಬಾಕಿ!
ಕೆಪಿಸಿಸಿ ನೂತನ ಸಾರಥಿಯಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುವ ಕಾಲ ಕೂಡಿ ಬಂದಿದೆ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.
ನವದೆಹಲಿ, ಮಾರ್ಚ್ 13: ಕೆಪಿಸಿಸಿ ನೂತನ ಸಾರಥಿಯಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುವ ಕಾಲ ಕೂಡಿ ಬಂದಿದೆ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಈ ಸಂಬಂಧ ಹೈಕಮಾಂಡ್ ಜತೆ ಅಂತಿಮ ಮಾತುಕತೆ ನಡೆಸಲು ಡಿಕೆ ಶಿವಕುಮಾರ್ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.[ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಶಿವಕುಮಾರ್]
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸ್ವದೇಶಕ್ಕೆ ಹಿಂದಿರುಗಿದ ನಂತರ ಈ ಆದೇಶಕ್ಕೆ ಅಂಕಿತ ಹಾಕಲಿದ್ದಾರೆ ಎಂಬ ಮಾಹಿತಿ ಒನ್ಇಂಡಿಯಾಕ್ಕೆ ಸಿಕ್ಕಿದೆ. [ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ದಿನೇಶ್ ಗುಂಡೂರಾವ್]
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿದೆ. ಡಿ.ಕೆ.ಶಿವಕುಮಾರ್ ಅವರು ಬಹುತೇಕ ಈ ತಿಂಗಳ ಅಂತ್ಯಕ್ಕೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಿಕ್ಕಿದೆ. [ಸಿಎಂ ಆಗಲಾರೆ, ಕೆಪಿಸಿಸಿ ಅಧ್ಯಕ್ಷನಾಗುವೆ: ಮುನಿಯಪ್ಪ]
ಹಾಲಿ ಅಧ್ಯಕ್ಷ ಜಿ ಪರಮೇಶ್ವರ ಅವರು ವಿದೇಶ ಪ್ರವಾಸಕ್ಕೆ ಹೊರಡುವ ಮುನ್ನ, ರಾಜ್ಯ ಕಾಂಗ್ರೆಸ್ ನಲ್ಲಿ ಭಾರಿ ಬದಲಾವಣೆ ಗಾಳಿ ಬೀಸುವ ಸುಳಿವು ನೀಡಿ ವಿಮಾನ ಹತ್ತಿದ್ದರು. ಈಗ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿದೆ..
ಪರಂ ಅವಧಿ ಮುಕ್ತಾಯ
ಜಿ ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮಮ್ಮೆ ಅಧಿಕಾರ ಮುಂದುವರೆಯಲು ಆಸಕ್ತಿ ಹೊಂದಿಲ್ಲ ಎಂಬ ಮಾತಿದೆ. ಹೀಗಾಗಿ ಇನ್ಮುಂದೆ ಗೃಹ ಸಚಿವರಾಗಿ ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ. 2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೆ ಸಿದ್ಧತೆ ನಡೆಸಲು ಹೈಕಮಾಂಡ್ ಮುಂದಾಗಿದೆ.
ಯಡಿಯೂರಪ್ಪ ವಿರುದ್ಧ ಸಮರ್ಥ ನಾಯಕನ ಅಗತ್ಯ
ಲಿಂಗಾಯತ ಸಮುದಾಯದ ಎಸ್ ಆರ್ ಪಾಟೀಲ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಮಾತು ಕೇಳಿ ಬಂದಿತ್ತು. ಆದರೆ, ಯಡಿಯೂರಪ್ಪ ಅವರ ವಿರುದ್ಧ ನಿಲ್ಲಬಲ್ಲ ಸಮರ್ಥವಾಗಿ ತಂತ್ರ ರೂಪಿಸಬಲ್ಲ ಅರ್ಹತೆ ಇದೆ ಎಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಗೆ ಸ್ಥಾನ ಸಿಗಲಿದೆ. ಬಿಜೆಪಿಯ ಒಳಜಗಳ, ಬಂಡಾಯದ ಲಾಭ ಪಡೆಯಲು ಇದು ಸಕಾಲ ಎಂದು ಕಾಂಗ್ರೆಸ್ ಆಲೋಚಿಸಿದೆ.
ಒಕ್ಕಲಿಗರಿಗೆ ಪ್ರಾತಿನಿಧ್ಯ
ಡಿ.ಕೆ.ಶಿವಕುಮಾರ್ ಅವರ ಹೆಸರು ಹೊರತುಪಡಿಸಿದರೆ ದೆಹಲಿಯಲ್ಲಿ ರಾಜ್ಯದ ಪ್ರತಿನಿಧಿಯಾಗಿರುವ ಅಪ್ಪಾಜಿ ನಾಡಗೌಡ, ಮಾಜಿ ಐಟಿ ಬಿಟಿ ಸಚಿವ ಎಸ್.ಆರ್.ಪಾಟೀಲ್, ತುಮಕೂರು ಸಂಸದ ಮುದ್ದಹನುಮೇಗೌಡ ಅವರ ಹೆಸರು ಅಧ್ಯಕ್ಷ ಕೇಳಿ ಬಂದಿತ್ತು. ಅಲ್ಲದೆ ಮಾಜಿ ಕೇಂದ್ರ ಸಚಿವ ಕೆ ಮುನಿಯಪ್ಪ ಅವರಿಗೂ ಆಫರ್ ಸಿಕ್ಕಿತ್ತು. ದಲಿತ ವರ್ಗಕ್ಕೆ ಈಗಾಗಲೇ ಪ್ರಾತಿನಿಧ್ಯ ಸಿಕ್ಕಿರುವುದರಿಂದ ಈ ಬಾರಿ ಒಕ್ಕಲಿಗರಿಗೆ ಅವಕಾಶ ನೀಡಲಾಗುತ್ತಿದೆ.
ಹೈಕಮಾಂಡ್ ಜತೆ ಬಾಂಧವ್ಯ
ಹೈಕಮಾಂಡ್ ಮಟ್ಟದಲ್ಲೂ ಉತ್ತಮ ಸಂಪರ್ಕವುಳ್ಳ. ಚತುರ ಸಂಘಟನಾಕಾರ ಮತ್ತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವುದರಲ್ಲಿ ನಿಪುಣರಾಗಿರುವ ಡಿ ಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿಗ್ವಿಜಯ್ ಸಿಂಗ್ ಜೊತೆಗೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದು ಹೈಕಮಾಂಡಿನ ಆದ್ಯತೆಯಾಗಿದೆ.
2018ರ ಚುನಾವಣೆಗೆ ಸರಿಯಾದ ಸಿದ್ಧತೆ
ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ, ರಾಮನಗರ, ಹಳೇ ಮೈಸೂರು ಭಾಗದಲ್ಲಿ ದೇವೇಗೌಡರು, ಎಚ್ಡಿ ಕುಮಾರಸ್ವಾಮಿ ಅವರಿಗೆ ಸಮನಾಗಿ ರಾಜಕೀಯ ತಂತ್ರ ಹೆಣೆಯುವುದು, ಜೆಡಿಎಸ್ ಹಾಗೂ ಬಿಜೆಪಿ ಬಂಡಾಯ, ಭಿನ್ನಮತದ ಲಾಭ ಪಡೆದು ಕಾಂಗ್ರೆಸ್ಸಿಗೆ ಲಾಭ ತರುವುದು ಕಾಂಗ್ರೆಸಿನ ಆಲೋಚನೆಯಾಗಿದೆ. 2018ರ ಚುನಾವಣೆಗೆ ಸರಿಯಾದ ಸಿದ್ಧತೆ ನಡೆಸಲು ಸಮರ್ಥವಾದ ನಾಯಕತ್ವದ ಅಗತ್ಯವಿದ್ದು, ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ ಪಟ್ಟ ಸಿಗುವ ಸಾಧ್ಯತೆ ಹೆಚ್ಚಿದೆ.