ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಕಳುಹಿಸುವ ಬೆದರಿಕೆ!
ಬೆಂಗಳೂರು, ಜ. 22: ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಕಳುಹಿಸಿ ಬೆದರಿಸುವ ಪ್ರಯತ್ನ ಮಾಡುತ್ತಿದೆ. ಮಂಡ್ಯದಲ್ಲಿ ಹಂ.ಪ. ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದು ಕನ್ನಡ ಸಾಹಿತ್ಯ ಲೋಕ ಹಾಗೂ ರಾಜ್ಯಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮಂಡ್ಯದಲ್ಲಿ ಹಿರಿಯ ಸಾಹಿತಿ, ಭಾಷಾ ಸಂಶೋಧಕ ಹಂ.ಪ. ನಾಗರಾಜಯ್ಯ (ಹಂಪನಾ) ಅವರನ್ನು ಬಂಧಿಸಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಸಾಹಿತಿ ಲೋಕಕ್ಕೆ ಸೇರಿದವರು. ಸಾಹಿತಿ ಹಂಪನಾ ಅವರನ್ನು ವಿವಚಾರಣೆ ಮಾಡಲಾಗಿದೆ. ಹೀಗಿದ್ದಾಗ ಕನ್ನಡ ಸಾಹಿತ್ಯ ಪರಿಷತ್ ಏನು ಮಾಡುತ್ತಿದೆ? ಕನ್ನಡ ರಕ್ಷಣೆ ಹೆಸರಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಹಾಗೂ ಇತರೆ ಕನ್ನಡ ಪರ ಸಂಘಟನೆಗಳು ಏನು ಮಾಡುತ್ತಿವೆ? ಇವರು ಇರುವುದು ಯಾತಕ್ಕೆ? ಎಂದು ಡಿಕೆ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಲೋಕಕ್ಕೆ ಅವಮಾನ
ಹಿರಿಯ ಸಾಹಿತಿ ಹಂಪನಾ ಅವರು ದೇಶದ ರೈತರ ವಿಚಾರದಲ್ಲಿ ಅವರ ಧ್ವನಿ ಎತ್ತಿದ್ದಾರೆ. ಅವರಿಗೆ ಮಾತನಾಡುವ ಹಕ್ಕಿಲ್ಲವೇ? ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರುವುದು ಸರಿಯಲ್ಲ. ಇದು ಕರ್ನಾಟಕ ಸಾಹಿತ್ಯ ಲೋಕಕ್ಕೆ ಆಗಿರುವ ಅಪಮಾನ. ಕೂಡಲೇ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಸಿಎಂ ಯಡಿಯೂರಪ್ಪನವರು ಸಾಹಿತಿ ಹಂಪನಾ ಕ್ಷಮೆಯಾಚಿಸಲಿ: ಕರವೇ
ಯಾರೊಂದಿಗೂ ಗುರುತಿಸಿಕೊಂಡಿಲ್ಲ
ಈ ಸರ್ಕಾರದ ಬಗ್ಗೆ ಮಾತನಾಡುವವರನ್ನೆಲ್ಲ ಜೈಲಿಗೆ ಕಳುಹಿಸಲು, ಬೇರೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡುವುದು ಎಷ್ಟು ಸರಿ? ಇದೆಲ್ಲ ಎಷ್ಟು ದಿನ ನಡೆಯುತ್ತದೆ? ಇದು ರಾಜ್ಯದ ಸ್ವಾಭಿಮಾನದ ಪ್ರಶ್ನೆ. ನಾನು ಅವರ ಮನೆಗೆ ಹೋಗಿ ಅವರ ಮನೆಯವರನ್ನು ಸಂಪರ್ಕಿಸಿ ಮಾತನಾಡುತ್ತೇನೆ. ನಾನು ಚಿಕ್ಕ ವಯಸ್ಸಿನಿಂದ ಆ ಕುಟುಂಬ ನೋಡಿಕೊಂಡು ಬಂದಿದ್ದೇನೆ. ಅವರು ಯಾರ ಜತೆಗೂ ಗುರುತಿಸಿಕೊಂಡಿಲ್ಲ ಎಂಬುದಾದರೂ ಈ ಸರ್ಕಾರಕ್ಕೆ ಅರಿವಿದೆಯಾ? ಎಂದು ಖಾರವಾಗಿ ಡಿಕೆಶಿ ಅವರು ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಖಂಡನೆ
ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ ಪೊಲೀಸರ ಕೃತ್ಯ ಖಂಡನೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡುವ ಮೂಲಕ ಕರ್ನಾಟಕ ಬಿಜೆಪಿ, ತಮ್ಮದು "ದುರ್ಯೋದನ" ಸರ್ಕಾರ ಎಂದು ಸಾಬೀತುಪಡಿಸಿದೆ ಎಂದು ಟೀಕೆ ಮಾಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೋಮುಖವ್ಯಾಘ್ರ ಮುಖ ಬಯಲಾಗಿದೆ ಎಂದು ಸಿದ್ದರಾಮಯ್ಯ ಅವರು ತೀವ್ರವಾಗಿ ಘಟನೆಯನ್ನು ಖಂಡಿಸಿದ್ದಾರೆ.
ಹಂಪನಾ ಹೇಳಿದ್ದಾದರೂ ಏನು?
ಜನವರಿ 17 ರಂದು ಮಂಡ್ಯದಲ್ಲಿ ನಡೆದಿದ್ದ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ್ದ ಹಂ.ಪ. ನಾಗರಾಜಯ್ಯ ಅವರು, ಕೇಂದ್ರ ಸರ್ಕಾರವನ್ನು ದುರ್ಯೋಧನ, ಗೋಮುಖ ವ್ಯಾಘ್ರಕ್ಕೆ ಹೋಲಿಕೆ ಮಾಡಿ ಮಾತನಾಡಿದ್ದರು. ಕೇಂದ್ರ ಸರ್ಕಾರ ಧರ್ಮರಾಯನಂತೆ ಬಂದು ದುರ್ಯೋಧನಂತೆ ವರ್ತಿಸುತ್ತಿದೆ ಎಂದಿದ್ದರು. ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಂಡ್ಯದ ಇಬ್ಬರು ಬಿಜೆಪಿ ಕಾರ್ಯಕರ್ತರು ಅಲ್ಲಿನ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಹಂಪನಾ ಅವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.
Recommended Video
ಈ ಕಳಂಕ ತೊಲಗುವುದಿಲ್ಲ
ನಾಡೋಜ ಹಂಪನಾ ಅವರನ್ನು ಕರೆಯಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ ಮಂಡ್ಯ ಪೊಲೀಸರಿಗೆ ಅವರ ಬಗ್ಗೆ ಕಿಂಚಿತ್ತಾದರೂ ಗೊತ್ತಿರಬಹುದಾ ಎಂದು ಕರವೇ ಸಾಮಾಜಿಕ ತಾಣದ ಮುಖ್ಯಸ್ಥ ದಿನೇಶ್ ಕುಮಾರ್ ಎಸ್.ಸಿ. ಅವರು ಪ್ರಶ್ನೆ ಮಾಡಿದ್ದಾರೆ. ಹಂಪನಾ ಎಂದೂ ಒರಟೊರಟಾಗಿ ಮಾತನಾಡಿದವರಲ್ಲ. ಅವರ ಮಾತು ಎಷ್ಟು ಮೃದುವೋ ಮನಸೂ ಕೂಡ ಅಷ್ಟೆ. ಭಾವಹಿಂಸೆಯೂ ಪಾಪ ಎಂದು ಹೇಳುವ ಜೈನ ಪರಂಪರೆಯಿಂದ ಬಂದವರು ಅವರು. ಶ್ರಮಣ ಪರಂಪರೆಯ ಆಳ ಅಗಲವನ್ನು ಹೊಕ್ಕು, ಜ್ಞಾನದ ಭಂಡಾರವನ್ನು ಕನ್ನಡಿಗರ ಮುಂದೆ ಇಟ್ಟವರು ಅವರು. ಒಂದಲ್ಲ, ಎರಡಲ್ಲ ಹದಿಮೂರು ಸಂಶೋಧನಾ ಕೃತಿಗಳನ್ನು ಕೊಟ್ಟವರು.ಮಂಡ್ಯ ಪೊಲೀಸರು, ಕರ್ನಾಟಕ ಸರ್ಕಾರ ಕ್ಷಮೆ ಕೇಳಿದರೂ ಈ ಗಾಯ ವಾಸಿಯಾಗುವುದಿಲ್ಲ, ಈ ಕಳಂಕ ತೊಲಗುವುದಿಲ್ಲ ಎಂದು ದಿನೇಶ್ ಕುಮಾರ್ ಎಸ್.ಸಿ. ಆಕ್ರೋಶ ವ್ಯಕ್ತಪಡಿಸಿದ್ದಾರೆ.